ಯಾದಗಿರಿ: ಜಿಲ್ಲೆಯಲ್ಲಿ ಇಬ್ಬರಿಗೆ ಕೋವಿಡ್-19 ಪಾಸಿಟಿವ್ ಸೋಂಕು ದೃಢಪಟ್ಟಿರುವುದರಿಂದ ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮೇ 12ರ ಮಧ್ಯರಾತ್ರಿಯಿಂದ ಮೇ 17ರ ಮಧ್ಯರಾತ್ರಿಯವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರು ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಪ್ಯಾರಾ 4ರ ಅಡಿಯಲ್ಲಿ ನಿಷೇಧಿಸಲಾದ ಚಟುವಟಿಕೆಗಳನ್ನು ಹಾಗೂ ಬಟ್ಟೆ, ಚಿನ್ನದ ಅಂಗಡಿ ಹೊರತುಪಡಿಸಿ, ಜಿಲ್ಲೆಯಲ್ಲಿ ಎಲ್ಲಾ ಅಂಗಡಿಗಳನ್ನು ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿ ನೀಡಿದ್ದಾರೆ.
ನಿಷೇಧಾಜ್ಞೆ ಅವಧಿಯಲ್ಲಿ: ಜಿಲ್ಲೆಯಾದ್ಯಂತ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ದಿನಬಳಕೆಯ ದಿನಸಿ, ತರಕಾರಿ, ಹಾಲು, ಹಣ್ಣು-ಹಂಪಲು, ಪೆಟ್ರೋಲ್ ಬಂಕ್ ಹಾಗೂ ಅತ್ಯವಶ್ಯಕ ಇನ್ನಿತರೆ ಅಂಗಡಿಗಳು ಮಾತ್ರ ತೆರೆದಿರುತ್ತವೆ. ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಗೆ ಬೇಕಾಗುವ ರಸಗೊಬ್ಬರ, ಕೀಟನಾಶಕಗಳು ಮತ್ತು ಬೀಜಗಳ ಉತ್ಪಾದನೆ ವಿತರಣೆ ಮತ್ತು ಚಿಲ್ಲರೆ ಅಂಗಡಿಗಳು ಯಂತ್ರೋಪಕರಣಗಳ ಅದರ ಬಿಡಿಭಾಗಗಳ ಪೂರೈಕೆ ಮತ್ತು ರಿಪೇರಿ ಸೇರಿದಂತೆ ಅವಶ್ಯಕವಿರುವ ಅಂಗಡಿಗಳು ಜಿಲ್ಲೆಯಾದ್ಯಂತ ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ತೆರೆದಿರುತ್ತವೆ ಎಂದು ಅವರು ತಿಳಿಸಿದ್ದಾರೆ.
*ಬಟ್ಟೆ, ಚಿನ್ನದ ಅಂಗಡಿ ತೆರೆಯುವುದಿಲ್ಲ*: ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಗೆ ಬೇಕಾಗುವ ಸಿಮೆಂಟ್, ಕಬ್ಬಿಣ, ಹಾರ್ಡ್ವೇರ್ ಪ್ಲಂಬರಿಂಗ್ ಅಂಗಡಿಗಳು ಹಾಗೂ ಅಲ್ಲದೇ ಇನ್ನಿತರೆ ಎಲ್ಲಾ ಅಂಗಡಿಗಳು (ಬಟ್ಟೆ, ಚಿನ್ನದ ಅಂಗಡಿಗಳು ಹೊರತುಪಡಿಸಿ) ಕೇಂದ್ರ/ರಾಜ್ಯ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ವಯ ಜಿಲ್ಲೆಯಾದ್ಯಂತ ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ತೆರೆದಿರುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.
*ಮದ್ಯ ಮಾರಾಟಕ್ಕೆ ಅವಕಾಶ*: ಮದ್ಯ ಮಾರಾಟ ಸನ್ನದುಗಳಾದ ಸಿಎಲ್-02, ಸಿಎಲ್-04, ಸಿಎಲ್-07, ಸಿಎಲ್-09 ಹಾಗೂ ಸಿಎಲ್-11 ಸಿ (ಎಂ.ಎಸ್.ಐ.ಎಲ್ ಮದ್ಯ ಮಳಿಗೆಗಳು) ಜಿಲ್ಲೆಯಾದ್ಯಂತ ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸರ್ಕಾರವು ನೀಡಿರುವ ಮಾರ್ಗಸೂಚಿಗಳನ್ವಯ ಮಾತ್ರ ಕಾರ್ಯನಿರ್ವಹಿಸತಕ್ಕದ್ದು ಎಂದು ಅವರು ಸೂಚಿಸಿದ್ದಾರೆ.
*ಷರತ್ತುಗಳು*: ಕೋವಿಡ್-19 ಸಾಂಕ್ರಾಮಿಕ ರೊಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಗೃಹ ಮತ್ತು ವ್ಯವಹಾರಗಳ ಸಚಿವಾಲಯದಿಂದ ಹೊರಡಿಸಿರುವ ಈ ಕೆಳಕಂಡ ಅಂಶಗಳನ್ನು ಸಾರ್ವಜನಿಕರು ತಪ್ಪದೇ ಪಾಲಿಸತಕ್ಕದ್ದು. ಎಲ್ಲಾ ಸಾರ್ವಜನಿಕ ಸ್ಥಳ/ಅಂಗಡಿಗಳಲ್ಲಿ ಒಂದು ಮೀಟರ್ ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಮತ್ತು ಎಲ್ಲರೂ ಮಾಸ್ಕ್ ಅಥವಾ ಮುಖಗವಸು ಕಡ್ಡಾಯವಾಗಿ ಧರಿಸತಕ್ಕದ್ದು. ಎಲ್ಲಾ ಸಾರ್ವಜನಿಕ ಸ್ಥಳ, ಅಂಗಡಿಗಳಲ್ಲಿ ಸ್ಯಾನಿಟೈಸರ್ ಕಡ್ಡಾಯವಾಗಿ ಉಪಯೋಗಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪಾನ್, ಗುಟ್ಕಾ, ತಂಬಾಕು ಇತ್ಯಾದಿಗಳನ್ನು ಸೇವಿಸಿ ಉಗುಳುವುದನ್ನು ಕಡ್ಡಾಯವಾಗಿ ನಿμÉೀಧಿಸಲಾಗಿದೆ.
*ಅನಗತ್ಯವಾಗಿ ಹೊರಗೆ ಬಂದರೆ ಕ್ರಮ*: ಅಂಗಡಿ, ಕಾರ್ಖಾನೆ, ಸಾರ್ವಜನಿಕ ಸ್ಥಳ ಅಥವಾ ಇನ್ನಿತರೆ ಮಾಲೀಕರು ಕಡ್ಡಾಯವಾಗಿ ಆಯಾ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಮುಚ್ಚಳಿಕೆ ಪತ್ರವನ್ನು ನೀಡತಕ್ಕದ್ದು. ಸಾರ್ವಜನಿಕರು ತುರ್ತು ಸೇವೆಗೆ ಹೊರತುಪಡಿಸಿ ಅನಗತ್ಯವಾಗಿ ಮನೆಯಿಂದ ಹೊರಗೆ ಬಂದಿರುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನಿನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹೊರ ರಾಜ್ಯದಿಂದ ಬರುವ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು, ಪ್ರವಾಸಿಗರು ಕಡ್ಡಾಯವಾಗಿ 14 ದಿನಗಳವರೆಗೆ ಇನ್ಸ್ಟಿಟ್ಯೂಶನಲ್ ಕ್ವಾರಂಟೈನ್ಗಳಲ್ಲಿ ಇರತಕ್ಕದ್ದು. ಒಂದು ವೇಳೆ ಈಗಾಗಲೇ ಜಿಲ್ಲೆಗೆ ಆಗಮಿಸಿರುವ ಕಾರ್ಮಿಕರು ಅಥವಾ ವಲಸೆಗಾರರು ಕೆಲವೊಂದು ಗ್ರಾಮಗಳಲ್ಲಿ ಅನವಶ್ಯಕವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ಮಾಡುತ್ತಿರುವುದು ವರದಿಯಾದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನಿನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಮೇಲಿನ ಎಲ್ಲಾ ಅಂಶಗಳನ್ನು ಕಟುನಿಟ್ಟಾಗಿ ಪಾಲಿಸತಕ್ಕದ್ದು. ಒಂದು ವೇಳೆ ಪಾಲಿಸದೇ ಇದ್ದಲ್ಲಿ ವಿಪತ್ತು ನಿರ್ವಹಣಾ ಅಧಿನಿಯಮ 2005 ರನ್ವಯ ದಂಡ ವಿಧಿಸಿ ಅಂಗಡಿಗಳ ಪರವಾನಗಿ ರದ್ದುಪಡಿಸಿ, ಕಾನೂನಿನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಂಟೇನ್ಮೆಂಟ್ ವಲಯ (Containment Zone)ಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಟ್ಟುನಿಟ್ಟಿನ ನಿರ್ಬಂಧನೆಗಳು ಇರುವುದರಿಂದ, ಸದರಿ ಆದೇಶವು ಅನ್ವಯಿಸುವುದಿಲ್ಲ.