ಕಳಸ: ಇಲ್ಲಿಯ ಹೊರನಾಡಿನಲ್ಲಿ ಮಾತಾನ್ನಪೂರ್ಣ ವಸತಿ ಗೃಹ ಮತ್ತು ಹೋಟೆಲು ನಡೆಸುತ್ತಿದ್ದ ವಿಜಯಕುಮಾರ್ ಅವರ ಮನೆಯಿಂದ ಫೆ.7ರಂದು ಕಳ್ಳತನವಾದ ಮಾಲು ಸಹಿತ ಏಳು ಮಂದಿ ಕಳ್ಳರನ್ನು ಬಂಧಿಸುವಲ್ಲಿ ಕಳಸ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಾದವರಲ್ಲಿ ಕಳಸದಲ್ಲಿ ಬಜಾಜ್ ಬೈಕ್ ಶೋ ರೂಂನ ಮಾಲಿಕನಾದ ಪ್ರಶಾಂತ ಯಾನೆ ಗುಂಡ, ಹೊರನಾಡಿನ ಗುರುಪ್ರಸಾದ್, ಕಲ್ಮಕ್ಕಿಯ ಜಗದೀಶ, ಕೊಪ್ಪ ತಾಲೂಕಿನ ಸಂತೋಷ ಯಾನೆ ಕುರುಪ್ಪ, ವಿಜಯಕುಮಾರ, ಇಮ್ತಿಯಾಜ್ ಯಾನೆ ಜೋಟು, ಉದಯ ಎಂದು ಗುರುತಿಸಲಾಗಿದೆ.
ಫೆ. 7ರಂದು ವಿಜಯಕುಮಾರ್ ಮತ್ತು ಕುಟುಂಬದವರು ಬೆಳಗ್ಗೆ ಕೊಲ್ಲೂರು ದೇವರ ದರ್ಶನಕ್ಕೆ ತೆರಳಿದ್ದರು. ಮರಳಿದಾಗ ಮನೆಯಲ್ಲಿ ಕಳ್ಳತನ ನಡೆದು ಸುಮಾರು 90 ಸಾವಿರ ಹಣ, 4.10 ಲಕ್ಷ ರೂ ಮೌಲ್ಯದ ಬಂಗಾರ, 1 ಲಕ್ಷ ರೂ ಮೌಲ್ಯದ 6 ವಾಚುಗಳು, 8 ಸಾವಿರ ರೂ ಮೌಲ್ಯದ ಬೆಳ್ಳಿ ಸಾಮಾನುಗಳನ್ನು ಕಳವು ಮಾಡಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ಹಿಂದೆ ಇದೇ ವಸತಿ ಗೃಹದಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ ಎಂಬುವವನ ಮೇಲೆ ಅನುಮಾನ ವ್ಯಕ್ತಪಡಿಸಿ ಕಳಸ ಪೊಲೀಸರಿಗೆ ದೂರು ನೀಡಿದ್ದರು. ಈ ಕಾರ್ಯಾಚರಣೆಯಿಂದ ಕಳ್ಳರನ್ನು ಬಂಧಿಸಿ, ಕಳ್ಳತನಕ್ಕೆ ಉಪಯೋಗಿಸಿದ ವಾಹನ, ಒಂದು ಬೈಕ್, 55 ಸಾವಿರ ನಗದು, 4 ಲಕ್ಷ 16 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.