ಪುತ್ತೂರು: ಪೋಷಕರು ಮಾಡಿದ ಎಡವಟ್ಟಿನಿಂದ ಸುಮಾರು 2 ವರ್ಷದ ಮಗು, ಸುಮಾರು 20 ನಿಮಿಷ ಕಾಲ ಕಾರಿನಲ್ಲೇ ಬಂಧಿಯಾದ ಘಟನೆ ಪುತ್ತೂರಿನ ಸಂಜೀವ ಶೆಟ್ಟಿ ಅಂಗಡಿ ಎದುರು ನಡೆದ ಬಗ್ಗೆ ವರದಿಯಾಗಿದೆ.
ಮುಂಬಾಯಿಯಲ್ಲಿ ವಾಸ್ತವ್ಯ ಇರುವ ಕನ್ಯಾನ ಮೂಲದ ಶಶಿ ಕೆ ಶೆಟ್ಟಿ ಎಂಬವರು ಮನೆ ಮಂದಿಯೊಂದಿಗೆ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿಯ ಸಂಜೀವ ಶೆಟ್ಟಿ ಜವುಳಿ ಮಳಿಗೆಗೆ ಬಟ್ಟೆ ಖರೀದಿಗಾಗಿ ಮಾರುತಿ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಬಂದಿದ್ದರು. ಅವರು ಕಾರನ್ನು ಮಳಿಗೆಯ ಎದುರು ಪಾರ್ಕ್ ಮಾಡಿ ಕಾರಿನಿಂದ ಹೊರಗೆ ಇಳಿಯುತ್ತಲೇ ಕಾರಿನಲ್ಲಿದ್ದ ಅವರ ಮಗು ಹಠ ಮಾಡುತ್ತಿದೆ ಎಂದು ಕಾರಿನ ಕೀ ಕೊಟ್ಟು ಹಿಂದಕ್ಕೆ ನೋಡುತ್ತಿದ್ದಂತೆ ಕಾರಿನ ಡೋರ್ ಆಟೋ ಲಾಕ್ ಆಗಿತ್ತು.
ಇದೇ ಸಂದರ್ಭದಲ್ಲಿ ಮಗು ಕೂಡಾ ಕಾರಿನ ಕೀಯನ್ನು ಹಿಡಿದು ಕೊಂಡು ಆಟ ಆಡುತ್ತಿತ್ತು ಹೊರತು ಕಾರಿನ ಲಾಕ್ ಓಪನ್ ಮಾಡಲು ಮಗುವಿಗೆ ತಿಳಿದಿರಲಿಲ್ಲ. ವಿಷಯ ತಿಳಿದು ಜನರ ಗುಂಪು ಕಾರಿನ ಸುತ್ತು ಆವರಿಸಿದಾಗ ಮಗು ಅಳತೊಡಗಿತ್ತು. ಇದರಿಂದ ಗಾಭರಿಯಾದ ಪೋಷಕರು ಕಾರಿನ ಲಾಕ್ ತೆಗೆಯಲು ಪೇಚಾಡುತ್ತಿದ್ದರು. ಬಳಿಕ ಕೆಲವರು ಸ್ಥಳೀಯರು ಬಂದು ಕಾರಿನ ಗಾಜನ್ನು ಒಡೆದು ಮಗುವನ್ನು ರಕ್ಷಣೆ ಮಾಡಿದರು.