ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಾಕೃತಿಕ ಭೂಗರ್ಭ ಮ್ಯೂಸಿಯಂ ಸ್ಥಾಪನೆಗೆ ಕಾಲ ಕೂಡಿ ಬಂದಂತಾಗಿದೆ. ಈಗಾಗಲೇ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳು ಮಲ್ಲಯ್ಯನಪುರ ಗ್ರಾಮ ವ್ಯಾಪ್ತಿಯಲ್ಲಿ ಮೂರು ದಿನಗಳ ಭೂವೈಜ್ಞಾನಿಕ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.
ಮಲ್ಲಯ್ಯನಪುರ ಗ್ರಾಮ ವ್ಯಾಪ್ತಿಯಲ್ಲಿ ವಿಶಿಷ್ಟವಾದ ಖನಿಜಗಳು ಕಂಡುಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಹಾಗೂ ಪ್ರವಾಸಿಗರು ಜಿಲ್ಲೆಯ ಜನರ ಜ್ಞಾನಾರ್ಜನೆ, ಅಧ್ಯಯನಕ್ಕೆ ಇಲ್ಲಿಯೇ ಭೂಗರ್ಭ ಮ್ಯೂಸಿಯಂ ಸ್ಥಾಪನೆ ಮಾಡಬಹುದೆಂಬ ಚಿಂತನೆ ನಡೆಸಿ, ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಆ ನಂತರ ಭೂಗರ್ಭ ಮ್ಯೂಸಿಯಂ ಸ್ಥಾಪನೆ ಸಂಬಂಧ ಪರಿಶೀಲಿಸಿ ವರದಿ ನೀಡುವಂತೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಪ್ರಧಾನ ನಿರ್ದೇಶಕರಿಗೆ ಪತ್ರ ಬರೆಯಲಾಗಿತ್ತು.
ಜಿಲ್ಲಾಧಿಕಾರಿಯವರ ಪತ್ರಕ್ಕೆ ಸ್ಪಂದಿಸಿದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಹಿರಿಯ ಅಧಿಕಾರಿಗಳು ತಾಂತ್ರಿಕ ಅಧಿಕಾರಿಗಳು ಹಾಗೂ ಭೂವಿಜ್ಞಾನಿಗಳನ್ನೊಳಗೊಂಡ ತಂಡವನ್ನು ಜಿಲ್ಲೆಗೆ ಕಳುಹಿಸಿಕೊಟ್ಟಿದ್ದರು. ಈ ತಂಡ ಕಳೆದ ಅ.8 ರಿಂದ 10 ರವರೆಗೆ ಒಟ್ಟು ಮೂರು ದಿನಗಳ ಕಾಲ ಚಾಮರಾಜನಗರ ತಾಲ್ಲೂಕಿನ ಮಲ್ಲಯ್ಯನಪುರ, ಗಾಳಿಪುರ, ಬದನಗುಪ್ಪೆ ಸುತ್ತಮುತ್ತ ಚಾಮರಾಜನಗರ ಜಿಲ್ಲೆಯ ತಾಂತ್ರಿಕ ಅಧಿಕಾರಿಗಳೊಡನೆ ಕ್ಷೇತ್ರ ಪ್ರವಾಸ ಕೈಗೊಂಡು ಭೂವೈಜ್ಞಾನಿಕ ಸಮೀಕ್ಷೆ ನಡೆಸಿದೆ.
ಪ್ರದೇಶದಲ್ಲಿ ದೊರಕುವ ಶಿಲಾ ಸ್ಥರಗಳನ್ನು ಯಾಥಾಸ್ಥಿತಿಯಲ್ಲಿ ಸಂರಕ್ಷಿಸಿ, ಚಾಮರಾಜನಗರ ಜಿಲ್ಲೆ ಹಾಗೂ ರಾಜ್ಯಾದ್ಯಾಂತ ದೊರೆಯುವ ಎಲ್ಲಾ ಶಿಲಾ ಮಾದರಿಗಳನ್ನು ಸಂಗ್ರಹಿಸಿ ಈ ಸ್ಥಳದಲ್ಲಿ ಭೂಗರ್ಭ ಮ್ಯೂಸಿಯಂ ಸ್ಥಾಪಿಸುವುದರಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಭೂರ್ಗಭ ಹಾಗೂ ಶಿಲಾಸ್ಥರಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ನೀಡಲು ಅನುಕೂಲವಾಗಲಿದೆ ಎಂಬ ಆಶಾಭಾವ ಕಂಡು ಬಂದಿದೆ.
ಸದರಿ ಮ್ಯೂಸಿಯಂ ಸ್ಥಾಪಿಸಲು ಉದ್ದೇಶಿಸಿರುವ ಪ್ರದೇಶದಲ್ಲಿ ಫೆಲಿಸೈಟ್, ಗ್ರಾನೈಟ್, ಫಚ್ಸೈಟ್, ಕ್ವಾರ್ಟ್ಜೈಟ್, ಡೋಲರೈಟ್ ಡೈಕ್, ಸ್ಪೋಕಿ ಕ್ವಾರ್ಟ್, ಪೆಗ್ಮಟೈಟ್, ಗಾರ್ನೆಟ್, ಐರನ್ ಬಂಡ್ ಸೇರಿದಂತೆ ಇತರೆ ಶಿಲಾ ಸ್ಥರಗಳು ಇರುವುದು ದೃಡಪಟ್ಟಿದೆ. ಈ ಪ್ರದೇಶದಲ್ಲಿ ಲಭ್ಯವಿರುವ ಶಿಲಾ ಸ್ಥರಗಳಿಂದ ಶಿಲಾ ಮಾದರಿಗಳನ್ನು ಭೂವೈಜ್ಞಾನಿಕ ಸಮೀಕ್ಷೆ, ವಿಶ್ಲೇಷಣೆಗಾಗಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳು ತಾಂತ್ರಿಕ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಿದ್ದಾರೆ. ವರದಿ ಬಂದ ನಂತರ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯನ್ನು ಬಳಸಿಕೊಂಡು ಭೂಗರ್ಭ ಮ್ಯೂಸಿಯಂ ಸ್ಥಾಪನೆಗೆ ಅವಕಾಶ ಲಭಿಸಬಹುದೆಂಬ ನಿರೀಕ್ಷೆ ಹೊಂದಲಾಗಿದೆ ಎಂದು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.