ಹನೂರು: ಪ್ರಚಾರಕ್ಕೆ ಏನೋ ಎಂಬಂತೆ ಆತುರಾತುರವಾಗಿ ಭೂಮಿ ಪೂಜೆಯನ್ನು ಮಾಡಿ ಹೋಗುವ ಜನಪ್ರತಿನಿಧಿಗಳು ನಂತರ ಕಾಮಗಾರಿಗಳು ಪ್ರಾರಂಭವಾಯಿತಾ? ಕಾಮಗಾರಿಯ ಗುಣಮಟ್ಟ ಹೇಗಿದೆ ಎಂಬುದರ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಕೆಲವೊಂದು ಕಾಮಗಾರಿಗಳು ಕಳಪೆ ಹಾಗೂ ಅವೈಜ್ಞಾನಿಕವಾಗಿ ನಡೆಯುತ್ತಿದ್ದು ಇದಕ್ಕೆ ಹನೂರಿನಿಂದ ನೆರೆಯರಾಜ್ಯ ತಮಿಳುನಾಡಿನ ಸತ್ತಿ ಮಂಗಲಕ್ಕೆ ಸಂಪರ್ಕ ಕಲ್ಪಿಸುವ ಬೆಳತ್ತೂರು ತಟ್ಟೆಹಳ್ಳ ಸೇತುವೆ ಸಾಕ್ಷಿಯಾಗಿದೆ.
ಕಳೆದೊಂದು ವರ್ಷದ ಹಿಂದೆ ಹನೂರು ಸಮೀಪದ ಬೆಳತ್ತೂರು ತಟ್ಟೆಹಳ್ಳ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಹೋದ ಜನಪ್ರತಿನಿಧಿಗಳು ಮತ್ತೆ ಇತ್ತ ಕಡೆ ಗಮನಹರಿಸದಿರುವ ಕಾರಣವೋ? ಅಧಿಕಾರಿಗಳ ನಿರ್ಲಕ್ಷ್ಯವೋ ಏನೋ ವರ್ಷಗಳಿಂದಲೂ ಸೇತುವೆ ಕಾಮಗಾರಿ ಮಾತ್ರ ಸ್ಥಗಿತಗೊಂಡಿದೆ. ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದ್ದ ಸೇತುವೆ ಕಾಮಗಾರಿ ಈ ಹಿಂದೆ ಸುರಿದ ಮಳೆಗೆ ಕೊಚ್ಚಿ ಹೋದ ಪರಿಣಾಮ ಮಾಡಿದ ಕೆಲಸವೆಲ್ಲ ನೀರು ಪಾಲಾಗಿ ಪೈಪ್, ಇನ್ನಿತರ ವಸ್ತುಗಳ ಅವಶೇಷಗಳು ಕಾಣುತ್ತಿವೆ.
ಇದೀಗ ಈ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದ ಮತ್ತಷ್ಟು ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿದ್ದು, ಅಲ್ಲಲ್ಲಿ ಭಾರೀ ಪ್ರಮಾಣದ ಕಂದಕಗಳು ಸೃಷ್ಠಿಯಾಗಿದೆ. ಈ ಕಂದಕಗಳನ್ನು ಸರಿಪಡಿಸಲಿಕ್ಕೆ ಲಕ್ಷಾಂತರ ರೂ.ಗಳು ಬೇಕಾಗುತ್ತದೆ.ಗುದ್ದಲಿ ಪೂಜೆ ಮಾಡಿದ ಭರದಲ್ಲೆ ಸೇತುವೆಕಾಮಗಾರಿ ಪ್ರಾರಂಭ ಮಾಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.
ಹನೂರಿನಿಂದ ನೆರೆಯ ರಾಜ್ಯ ತಮಿಳುನಾಡಿನ ಸತ್ತಿ ಮಂಗಲಕ್ಕೆ ಸಂಪರ್ಕ ಕಲ್ಪಿಸುವ ಬೆಳತ್ತೂರು ತಟ್ಟೆ ಹಳ್ಳ ಸೇತುವೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡ ಪರಿಣಾಮ ಈ ಮಾರ್ಗದಲ್ಲಿ ವಾಹನ ಸಂಚಾರ ಮಾಡುವುದು ದುಸ್ತರವಾಗಿದೆ. ದ್ವಿಚಕ್ರ ವಾಹನ ಹೊರತುಪಡಿಸಿ ಬೇರೆ ವಾಹನಗಳು ಓಡಾಡಲು ಅಸಾಧ್ಯವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸಬೇಕಾದ ವಾಹನಗಳು ಉದ್ದನೂರು ಬೆಳತ್ತೂರು ಮಾರ್ಗವಾಗಿ ಸುಮಾರು ಎರಡು ಕಿ.ಮೀ. ಹೆಚ್ಚಿನ ಪ್ರಯಾಣವನ್ನು ಮಾಡಬೇಕಾಗಿದೆ. ಈ ಕಾರಣದಿಂದ ಇನ್ನಾದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಿ ಸ್ಥಗಿತಗೊಂಡಿರುವ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದಕ್ಕಿಂತ ಹೆಚ್ಚಿನ ಸಮಸ್ಯೆಗೆ ಸಿಲುಕುವ ಪರಿಸ್ಥಿತಿ ಬಂದೊದಗಲಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಕೊಳ್ಳೇಗಾಲ ಉಪ ವಿಭಾಗದ ಎಇಇ ದೊರೆಸ್ವಾಮಿ ಅವರು, ಸ್ಥಗಿತಗೊಂಡಿರುವ ಸೇತುವೆ ಕಾಮಗಾರಿಯನ್ನು ರೀ ಎಸ್ಟಿಮೆಂಟ್ ಡಿಸೈನ್ ಮಾಡಲಾಗಿದೆ. ಒಂದು ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿ ಇದಾಗಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲು ಆದೇಶಿಸಲಾಗಿದೆ ಎಂದಿದ್ದಾರೆ.
ಸ್ಥಳೀಯ ನಿವಾಸಿ ನಾಗಣ್ಣ ಅವರು ಮಾತನಾಡಿ, ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಈ ಸೇತುವೆ ಕಾಮಗಾರಿ ವಿಳಂಬವಾಗಲು ಕಾರಣವಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗಿದೆ ಹಾಗಾಗಿ ಮುಂದಾದರೂ ಈ ಬಗ್ಗೆ ಸಂಬಂಧಪಟ್ಟವರು ಸೇತುವೆ ಕಾಮಗಾರಿಯನ್ನು ಪ್ರಾರಂಭಿಸಲು ಆದಷ್ಟು ಬೇಗ ಅಗತ್ಯ ಕ್ರಮಕೈಗೊಳ್ಳಬೇಕಿದೆ ಎಂದರು.