ಚಾಮರಾಜನಗರ : ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗೌಡ ಲಿಂಗಾಯತ ಸಮುದಾಯದ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಬಂದಿದ್ದ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಕಾರಿಗೆ ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರು, ಲಿಂಗಾಯಿತ ಸಮಾಜದ ಸದಸ್ಯರು , ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಯತ್ನಾಳ ಅವರು ಹರಳುಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ವಾಪಾಸ್ ಹಿಂರುಗುತಿದ್ದಾಗ ಈ ಪ್ರತಿಭಟನೆ ನಡೆಯಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ವಿರುದ್ಧ ಪದೇ ಪದೇ ಹೇಳಿಕೆ ನೀಡಿ, ಪಕ್ಷ ವಿರೋಧಿ ಕೆಲಸದಲ್ಲಿ ತೊಡಗಿಕೊಂಡು ವೀರಶೈವ–ಲಿಂಗಾಯತ ಸಮುದಾಯವನ್ನು ಒಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ವೀರಶೈವ ಸಮುದಾಯದ ಮಠಾಧೀಶರ ಬಗ್ಗೆಯೂ ಅವಹೇಳನಕಾರಿಯಾಗಿ ಗೌರವಕ್ಕೆ ಧಕ್ಕೆ ತರುವಂತೆ ಮಾತನಾಡುತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಆದರೆ ಈ ಪ್ರತಿಭಟನೆ ಬಗ್ಗೆ ಸುಳಿವು ಪಡೆದಿದ್ದ ಪೋಲೀಸರು ಘರ್ಷಣೆಗೆ ಅವಕಾಶ ನೀಡದೆ ಬಿಗಿ ಭದ್ರತೆ ಏರ್ಪಡಿಸಿದ್ದರು. ದೇವಸ್ಥಾನದಿಂದ ನೇರವಾಗಿ ಅವರನ್ನು ಸರ್ಕಾರಿ ಪ್ರವಾಸಿ ಮಂದಿರಕ್ಕೆ ಕರೆದೊಯ್ದರು. ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಿದ್ದಮಲ್ಲೇಶ್ವರ ವಿರಕ್ತ ಮಠಕ್ಕೂ ಯತ್ನಾಳ ಅವರು ಭೇಟಿ ನೀಡುವ ಕಾರ್ಯಕ್ರಮವಿತ್ತು. ಅಲ್ಲಿಯೂ ವೀರಶೈವ–ಲಿಂಗಾಯತ ಮಹಾಸಭಾದ ಮುಖಂಡರು, ಕಾರ್ಯಕರ್ತರು ಹಾಗೂ ವಿಜಯೇಂದ್ರ ಅಭಿಮಾನಿಗಳು ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿದ್ದರಿಂದ, ಅಲ್ಲಿನ ಭೇಟಿಯನ್ನು ಅವರು ರದ್ದುಗೊಳಿಸಿದರು. ಅಲ್ಲಿಂದ ನೇರವಾಗಿ ಗೌಡ ಲಿಂಗಾಯತ ಸಮುದಾಯದವರ ಸಭೆ ಆಯೋಜಿಸಲಾಗಿದ್ದ ವರ್ತಕರ ಭವನಕ್ಕೆ ಪೊಲೀಸರ ಬಂದೋಬಸ್ತ್ನಲ್ಲಿ ಬಂದರು.
ನಂತರವೂ ಯತ್ನಾಳ ಅವರು ಭಾಷಣ ಮಾಡುವ ಸಂದರ್ಭದಲ್ಲಿ ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಮಾತನಾಡಿದಾಗ ಸಭಿಕರೊಬ್ಬರು ‘ಧಿಕ್ಕಾರದ ಘೋಷಣೆ ಕೂಗಿದ ಕೂಡಲೇ ಪೊಲೀಸರು ಅವರನ್ನು ಹೊರಗಡೆ ಎಳೆದುಕೊಂಡು ಹೋದರು. ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ ಅವರು, ‘ನನ್ನನ್ನು ರಾಜಕೀಯವಾಗಿ ಮಗಿಸಲು ಸಾದ್ಯವಿಲ್ಲ , ನನ್ನ ಅಕ್ರಮ ಆಸ್ತಿಯನ್ನು ಅವರು ಹುಡುಕಾಡುತ್ತಿದ್ದಾರೆ. ಆಕ್ರಮ ಆಸ್ತಿ ಮಾಡಿದ್ದರೆ ಮಾತ್ರ ಭಯಪಡಬೇಕು, ನನಗೇತರ ಭಯ ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಕಾದು ನೋಡುತ್ತಿದೆ. ಬದಲಾವಣೆ ಎಷ್ಟು ಬೇಗ ಆಗುತ್ತದೆಯೋ ಅಷ್ಟು ಒಳ್ಳೆಯದು’ ಎಂದರು. ‘ಯಾರೂ ನಿರೀಕ್ಷೆ ಮಾಡದವರು ಮುಖ್ಯಮಂತ್ರಿಯಾಗುತ್ತಾರೆ. ಒಳ್ಳೆಯ, ಪ್ರಾಮಾಣಿಕ, ಹಿಂದುತ್ವದ ಪರ ಇರುವವರು ಮುಖ್ಯಮಂತ್ರಿ ಆಗುತ್ತಾರೆ. ಹೈಕಮಾಂಡ್ ನನಗೆ ಜವಾಬ್ದಾರಿ ಕೊಟ್ಟರೆ ಬೇಡ ಎನ್ನುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ನನ್ನ ವಿರುದ್ಧ ಬಹಳಷ್ಟು ಷಡ್ಯಂತ್ರಗಳು ನಡೆಯುತ್ತಿವೆ. ಪ್ರತಿಭಟನೆ ಯಾರು ನಡೆಸುತ್ತಿದ್ದಾರೆ ಎಂಬುದೂ ಗೊತ್ತಿದೆ. ಅವರಿಗೆ ನನ್ನ ಬಗ್ಗೆ ಭಯ ಬಂದಿದೆ. ನನ್ನ 30 ವರ್ಷಗಳ ರಾಜಕಾರಣದಲ್ಲಿ ಇಂತಹದ್ದನ್ನೆಲ್ಲ ಸಾಕಷ್ಟು ನೋಡಿದ್ದೇನೆ. ನಾನು ಹೋರಾಟದಿಂದ ಬಂದವನು. ಇದಕ್ಕೆಲ್ಲ ಅಂಜುವುದಿಲ್ಲ’ ಎಂದರು. ಯಡಿಯೂರಪ್ಪ ಅವರು ಎಷ್ಟು ಬೇಗ ಗೌರವದಿಂ ದಕೆಳಗಿಳಿಯುತ್ತಾರೋ ಅಷ್ಟೂ ಅವರಿಗೆ ಒಳ್ಳೆಯದು ಎಂದೂ ಹೇಳಿದರು.
ಬಿಜೆಪಿ ಕಾರ್ಯಕರ್ತರಿಂದ ಯತ್ನಾಳ್ ಕಾರಿಗೆ ಮುತ್ತಿಗೆ ; ಘೋಷಣೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.