ಚಾಮರಾಜನಗರ: ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ವ್ಯಾಪ್ತಿಯಲ್ಲಿ ಹುಟ್ಟಿಕೊಂಡಿದ್ದ ರೆಸಾರ್ಟ್ ಗಳನ್ನು ಕೊರೋನಾ ಹಿನ್ನೆಲೆಯಲ್ಲಿ ಬಂದ್ ಮಾಡಿರುವ ಕಾರಣ ಬಹುತೇಕ ರೆಸಾರ್ಟ್ ಗಳು ಖಾಲಿಯಾಗಿದ್ದು ಆರ್ಥಿಕ ಸಂಕಷ್ಟದಿಂದ ತೊಳಲಾಡುತ್ತಿವೆ.
ಹಾಗೆ ನೋಡಿದರೆ ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯತ್ತ ಸಾಗುತ್ತಿದ್ದು ದೇಶ, ವಿದೇಶಗಳ ಪ್ರವಾಸಿಗರು ಇತ್ತ ಮುಖ ಮಾಡಿದ್ದರು. ಹೀಗಾಗಿ ಬಂಡೀಪುರ ವ್ಯಾಪ್ತಿಯಲ್ಲಿ ರೆಸಾರ್ಟ್ ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದವು. ಪ್ರಭಾವಿಗಳು ರೆಸಾರ್ಟ್ ನಿರ್ಮಾಣ ಮಾಡುವ ಮೂಲಕ ಹಣ ಸಂಪಾದನೆಗೆ ಇಳಿದಿದ್ದರು. ಆದರೆ ಕೊರೋನಾ ಮಹಾಮಾರಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕಳೆದ ಮೂರು ತಿಂಗಳಿಂದ ಪ್ರವಾಸಿಗರು ಇತ್ತ ಸುಳಿದಿರಲಿಲ್ಲ. ಲಾಕ್ ಡೌನ್ ಆರಂಭವಾಗುತ್ತಿದ್ದಂತೆಯೇ ರೆಸಾರ್ಟ್ ಗಳಲ್ಲಿ ಉಳಿದುಕೊಂಡಿದ್ದ ಪ್ರವಾಸಿಗರನ್ನು ಕಳುಹಿಸಿಕೊಡಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಕಾಣಿಸಿಕೊಳ್ಳದೆ ಹಸಿರುವಲಯದಲ್ಲಿತ್ತು. ಈಗ ಎಲ್ಲವೂ ಬದಲಾಗಿದೆ.
ಜಿಲ್ಲೆಯಲ್ಲಿ ದಿನದಿಂದ ಹೆಚ್ಚಾಗುತ್ತಿರುವ ಕೊರೋನ ಪಾಸಿಟಿವ್ ಹರಡುವುದನ್ನು ತಡೆಯುವ ಸಲುವಾಗಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಅದರಂತೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯಯ ಉದ್ಯಾನವನಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಹಾಗೂ ಬಂಡೀಪುರ ವ್ಯಾಪ್ತಿಯಲ್ಲಿ ಬರುವ ಎಲ್ಲ ಹೋಟೆಲ್ ಹಾಗೂ ರೆಸಾರ್ಟ್ ಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಆದೇಶ ಮಾಡಿದ್ದಾರೆ. ಈ ಹಿಂದೆಯೂ ಸಾರ್ವಜನಿಕರ ಮತ್ತು ಪ್ರವಾಸಿಗರ ಆರೋಗ್ಯದ ಹಿತದೃಷ್ಟಿಯಿಂದ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾರ್ಚ್ 15ರಿಂದ 22ರ ವರೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ನಂತರ ಜೂನ್ 8ರಿಂದ ಬಂಡೀಪುರ ಸಫಾರಿ ಪ್ರಾರಂಭವಾಗಿತ್ತು 22ದಿನಗಳಲ್ಲಿ 850ಪ್ರವಾಸಿಗರು ಆಗಮಿಸಿ 8ಲಕ್ಷ ರೂಪಾಯಿ ಸಫಾರಿಯಲ್ಲಿ ಆದಾಯ ಬಂದಿತ್ತು. ಈಗ ಮತ್ತೆ ಬಂಡೀಪುರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹೋಟೆಲ್, ರೆಸಾರ್ಟ್ ಗಳನ್ನು ಮುಚ್ಚಲು ಡಿಸಿ ಆದೇಶ ನೀಡಿದ್ದಾರೆ.
ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಬಂಡೀಪುರ ಸಫಾರಿಗೆ ಪ್ರವಾಸಿಗರು ಆಗಮಿಸುತ್ತಿದ್ದರು. ಈಗ ಕೋರೋನಾ ವೈರಸ್ ಭೀತಿಯಿಂದ ಸಫಾರಿ ಕೌಂಟರನಲ್ಲಿ ಪ್ರವಾಸಿಗರು ಇಲ್ಲದೆ ಬಣಗುಡುತ್ತಿದೆ. ಕಳೆದ 23ವರ್ಷಗಳ ನಂತರ ಬಂಡೀಪುರ ಸಫಾರಿಗೆ ಬಂದ್ ಮಾಡಲಾಗಿದೆ. 1997ಅಕ್ಟೊಬರ್ 9ರಂದು ಕಾಡುಗಳ್ಳ ವೀರಪ್ಪನ್ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಸೇನಾನಿ, ಡಾ.ಮೈತ್ರಿ ಹಾಗೂ ಅರಣ್ಯ ಇಲಾಖೆಯ ಮೂವರು ಸಿಬ್ಬಂದಿ ಬಂಡೀಪುರದ ಹುಲಿಕಟ್ಟೆ ಹತ್ತಿರ ಅಪಹರಣ ಮಾಡಿಕೊಂಡು ಹೋಗಿದ್ದ ಸಂದರ್ಭದಲ್ಲಿ ಎರಡು ತಿಂಗಳ ಕಾಲ ಬಂಡೀಪುರ ಸಫಾರಿ ಬಂದ್ ಮಾಡಲಾಗಿತ್ತು. ಬಂಡೀಪುರ ಸುತ್ತಮುತ್ತಲಿನ ಕಂಟ್ರಿ ಕ್ಲಬ್. ಸೆರಾಯ್, ವಿಂಡ್ಲ್ ಪವರ್, ಜಂಗಲ್ ಲಾಡ್ಜ್, ಅಂಜುಜ ಫಾರ್, ಇನ್ನೂ ಮುಂತಾದ ರೆಸಾರ್ಟ್ನಲ್ಲಿ ಪ್ರವಾಸಿಗರು ಇಲ್ಲದೆ ಬಣಗುಡುತ್ತಿವೆ ಎಲ್ಲಾ ಆನ್ ಲೈನ್ ಬುಕಿಂಗ್ ರದ್ದು ಪಡಿಸಲಾಗಿದೆ ಇದರಿಂದಾಗಿ ರೆಸಾರ್ಟ್ ಗಳಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಈ ಕುರಿತಂತೆ ಮಾತನಾಡಿದರು ಗೋಪಾಲಸ್ವಾಮಿ ಬೆಟ್ಟ ವ್ಯಾಪ್ತಿಯ ಆರ್.ಎಫ್.ಓ ಎನ್.ಎಂ.ನವೀನಕುಮಾರ ಮಾತನಾಡಿ ಜಿಲ್ಲಾಧಿಕಾರಿಗಳ ಆದೇಶದಂತೆ ಹಾಗೂ ಪ್ರವಾಸಿಗರ ಹಿತ ದೃಷ್ಟಿಯಿಂದ ಮುಂದಿನ ಆದೇಶದವರೆಗೂ ಸಫಾರಿ ನಿರ್ಬಂಧಿಸಲಾಗಿರುವುದಾಗಿ ತಿಳಿಸಿದ್ದಾರೆ. ಇನ್ನು ಕಂಟ್ರಿ ಕ್ಲಬ್ ರೆಸಾರ್ಟ್ ಜನರಲ್ ಮ್ಯಾನೇಜರ್ ಗುರುರಾಜ್ ಆಚಾರ್ ಅವರು ಮಾತನಾಡಿ ಕೊರೋನಾ ವೈರಸ್ನಿಂದಾಗಿ ಪ್ರವಾಸೋದ್ಯಮ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೋಟ್ಯಂತರ ರೂಪಾಯಿ ನಷ್ಟವಾಗಿರುವುದಾಗಿ ಹೇಳಿದ್ದಾರೆ.