ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಗೋಪಾಲಸ್ವಾಮಿ ಬೆಟ್ಟ ವಲಯದ ಅರಣ್ಯದಲ್ಲಿ ಗಂಡಾನೆಯ ಮೃತದೇಹ ಪತ್ತೆಯಾಗಿದ್ದು, ಇದು ಬೇರೆ ಕಾಡಾನೆಯೊಂದಿಗೆ ಕಾದಾಡಿ ಸತ್ತಿರಬಹುದೆಂದು ಶಂಕಿಸಲಾಗಿದೆ.
ಈ ಗಂಡಾನೆಯು ಸುಮಾರು 40 ವರ್ಷದ ಪ್ರಾಯದ್ದಾಗಿದ್ದು, ಅರಣ್ಯದಲ್ಲಿ ಅಡ್ಡಾಡುವಾಗ ಬೇರೆ ಕಾಡಾನೆಯೊಂದಿಗೆ ಕಾದಾಡಿದ್ದು, ಈ ಸಂದರ್ಭ ದೇಹದ ಹೊಟ್ಟೆ ಇನ್ನಿತರ ಭಾಗಗಳಿಗೆ ತಿವಿದ ಕಾರಣ ಗಾಯಗಳಾಗಿದ್ದು, ಇದರಿಂದ ಅಸ್ವಸ್ಥಗೊಂಡು ಸಾವನ್ನಪ್ಪಿದೆ.
ಈ ನಡುವೆ ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯದಲ್ಲಿ ಗಸ್ತು ತೆರಳಿದ್ದು, ಹುಲಿ ಯೋಜನೆಯ ಗೋಪಾಲಸ್ವಾಮಿ ಬೆಟ್ಟ ವಲಯದ ಚಮ್ಮನಹಳ್ಳ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿಗೆ ಆನೆಯೊಂದು ಮಲಗಿದ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಹತ್ತಿರ ತೆರಳಿ ನೋಡಿದಾಗ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಮಹಜರು ನಡೆಸಿದ್ದು, ಅರಣ್ಯ ಇಲಾಖೆಯ ಪಶುವೈದ್ಯರಾದ ಡಾ.ನಾಗರಾಜು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಆ ನಂತರ ಆನೆಯ ಕಳೇಬರವನ್ನು ಸುಟ್ಟುಹಾಕುವ ಮೂಲಕ ಅಂತ್ಯಕ್ರಿಯೆ ನಡೆಸಲಾಗಿದೆ.