ತುಮಕೂರು: ಮಕ್ಕಳ ಅಪಹರಣ ಮಾಡಲಾಗುತ್ತಿದೆ ಎಂಬ ವದಂತಿ ಸಾಮಾಜಿಕ ತಾಣಗಳಲ್ಲಿ ಹರಿದಾಡಿದ್ದರಿಂದ ಪೋಷಕರು ಕಂಗಾಲಾದ ಘಟನೆ ಪಾವಗಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳಕಿಗೆ ಬಂದಿದೆ.
ಬೇರೆ ಊರಿನಿಂದ ಬಂದಂತಹ ಅಪರಿಚಿತ ವ್ಯಕ್ತಿಗಳು ಒಬ್ಬಂಟಿ ಮಕ್ಕಳನ್ನು ಅಪಹರಿಸಿ ಕಿಡ್ನಿ ಹಾಗೂ ಕಣ್ಣುಗಳನ್ನು ತೆಗೆಯುತ್ತಾರೆ ಎಂಬಂತಹ ವದಂತಿಯ ಸುದ್ದಿಗಳನ್ನು ಹರಿಯ ಬಿಟ್ಟಿದಲ್ಲದೆ, ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಜತೆಯಲ್ಲೇ ಹಾಕಲಾಗಿತ್ತು. ಈ ಸುದ್ದಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಿದ್ದರಿಂದ ಜನ ಭಯಗೊಂಡಿದ್ದಲ್ಲದೆ, ತಮ್ಮ ಮಕ್ಕಳನ್ನು ಹೊರಗೆ ಬಿಡಲು ಹಿಂದೇಟು ಹಾಕಿದ್ದರು.
ಮಕ್ಕಳ ಕಳ್ಳರು ಆಂಧ್ರಪ್ರದೇಶದಲ್ಲಿ ಬಂದು ಪಾವಗಡ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿದ್ದು, ಒಬ್ಬಂಟಿ ಮಕ್ಕಳನ್ನೇ ಗುರಿಯಾಗಿಸಿಕೋಂಡು ಅಪಹರಣ ಮಾಡಿ ಕಿಡ್ನಿ ಹಾಗೂ ಕಣ್ಣುಗಳನ್ನು ತೆಗೆದು ಉಳಿದ ಭಾಗವನ್ನು ತುಂಡು ತುಂಡಾಗಿ ಕತ್ತರಿಸುತ್ತಾದೆ ಎಂಬ ವದಂತಿಯ ಸುದ್ದಿಯೊಂದಿಗೆ ಕಳ್ಳರನ್ನು ಹಿಡಿದಿರುವ ಫೋಟೋಗಳು ಹಾಗೂ ಅಪಹರಣ ಮಾಡಿದವರನ್ನು ಕತ್ತರಿಸುತ್ತಿರುವ, ಮಕ್ಕಳನ್ನು ಕೊಲೆಗೈದಿರುವ ವೀಡಿಯೋ, ಕಳ್ಳರನ್ನು ಜನರು ಹಿಡಿದಿರುವ, ಪೊಲೀಸರು ಅಪರಿಚಿತ ವ್ಯಕ್ತಿಗಳನ್ನು ಪರಿಶೀಲನೆ ಮಾಡುತ್ತಿರುವ ಹೀಗೆ ವಿಚಿತ್ರ ಫೋಟೊಗಳನ್ನು ಹಾಕಿದ್ದಾರೆ.
ಇದನ್ನೆಲ್ಲ ನಿಜ ಎಂದುಕೊಂಡ ಕಾರಣದಿಂದ ಪಾವಗಡ ತಾಲೂಕಿನ ಪಳವಳ್ಳಿ, ಬಿ.ಕೆ.ಹಳ್ಳಿ, ಇಂದ್ರ ಬೆಟ್ಟ, ಚಿಕ್ಕಹಳ್ಳಿ, ದೋಡ್ಡಹಳ್ಳಿ, ಕೆ.ರಾಮಪುರ ಗ್ರಾಮಗಳಲ್ಲಿ ಜನ ಇದರ ಬಗ್ಗೆಯೇ ಚರ್ಚೆ ಮಾಡತೊಡಗಿದ್ದರು.
ಈ ನಡುವೆ ಪಳವಳ್ಳಿ ಗ್ರಾಮದಲ್ಲಿ ಮಕ್ಕಳನ್ನು ಅಪಹರಣ ಮಾಡಲು ಬಂದಿದ್ದ ಸಂದರ್ಭ ಮಹಿಳೆ ಕೂಗಾಡಿದ್ದರಿಂದ ಕಳ್ಳರು ನಾಪತ್ತೆಯಾದರು ಎಂಬ ಸುದ್ದಿ ಹರಡಿದೆ. ಇನ್ನೊಂದೆಡೆ ಕಡಮಲಕುಂಟೆ ಗ್ರಾಮದಲ್ಲಿ ಟಾಮ್ ಟಾಮ್ ಹೊಡೆದು ಮಕ್ಕಳನ್ನು ಅಪಹರಣ ಮಾಡಲು ಕಳ್ಳರ ತಂಡ ಬಂದಿದೆ. ಪೋಷಕರು ಜಾಗೃತರಾಗಿ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಗಮನಹರಿಸುವಂತೆ ಗ್ರಾಮದ ಹಿರಿಯರು ಮನವಿ ಮಾಡಿದರು ಎನ್ನಲಾಗಿದೆ.
ಪ್ರಿಯಾಂಕ ನಾಪತ್ತೆಗೆ ಸಂಬಂಧವಿದೆಯಾ?
ಇದೆಲ್ಲದರ ನಡುವೆ ತಾಲ್ಲೂಕಿನ ದೊಡ್ಡಹಳ್ಳಿ ಗ್ರಾಮದ ಓಬಳಪ್ಪ ಮತ್ತು ಗಂಗಂಮ್ಮ ದಂಪತಿ ಪುತ್ರಿ ಪ್ರಿಯಾಂಕ ಭಾನುವಾರ ರಾತ್ರಿ ಮನೆಯ ಸಮೀಪದ ಶೌಚಾಲಯಕ್ಕೆ ತೆರಳಿದ ವೇಳೆ ಕಾಣೆಯಾಗಿದ್ದಾಳೆ ಎಂಬ ಸುದ್ದಿ ಬಂದಿದೆ.
ಪೊನ್ನ ಸಮುದ್ರ ಗ್ರಾಮದ ಬಸವರಾಜು ಎಂಬಾತ ಪ್ರಿಯಾಂಕಳನ್ನು ಮದುವೆಯಾಗಿ ಮೂರು ವರ್ಷ ಕಳೆದಿದ್ದು ಕೆಲವು ದಿನಗಳ ಹಿಂದೆ ಗಂಡನ ಜೊತೆಗೆ ತವರು ಮನೆಗೆ ಬಂದು ಇಲ್ಲೇ ಇದ್ದರು. ರಾತ್ರಿ ಹತ್ತು ಗಂಟೆ ಸಮಯದಲ್ಲಿ ಪ್ರಿಯಾಂಕ ಮನೆಯಲ್ಲಿ ಇಲ್ಲದಿರುವುದು ತಿಳಿದು ಗಂಡ ಮತ್ತು ಸಂಬಂಧಿಕರು ಹುಡುಕಾಡಿದಾಗ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಸುತ್ತಮುತ್ತಲಿನ ಗ್ರಾಮದ ಜನತೆಗೆ ಈ ವಿಷಯ ತಿಳಿದ ಕೂಡಲೇ ದೋಡ್ಡಹಳ್ಳಿ ಗ್ರಾಮದ ಪ್ರಿಯಾಂಕ ಮನೆಗೆ ನೂರಾರು ಜನರು ಬಂದು ಹುಡುಕಾಟ ನಡೆಸಿದ್ದು, ಆಕೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ.
ಕಳ್ಳರಿಗಾಗಿ ಗ್ರಾಮಸ್ಥರ ಹುಡುಕಾಟ
ಇನ್ನೊಂದೆಡೆ ಸೋಮವಾರ ಬೆಳ್ಳಿಗ್ಗೆ ಇಂದ್ರಬೆಟ್ಟ ಗ್ರಾಮದ ಸಮೀಪದ ಬೆಟ್ಟದಲ್ಲಿ ಕಳ್ಳರ ತಂಡ ಇದೆ ಎಂಬ ಬಗ್ಗೆ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಸಾವಿರಾರು ಜನರು ಬೆಟ್ಟವನ್ನು ಸುತ್ತುವರಿದು ಶೋಧ ಕಾರ್ಯ ಮಾಡಿದ್ದಾರೆ ಆದರೆ ಅಲ್ಲಿ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ.
ಈ ಬಗ್ಗೆ ಪೊಲೀಸರು ಗಮನಹರಿಸಿ ಗ್ರಾಮಗಳಲ್ಲಿ ಹರಡಿರುವ ವದಂತಿಗಳಿಗೆ ಬ್ರೇಕ್ ಹಾಕಬೇಕಾಗಿದೆ.