ಕಾರವಾರ: ಪಶ್ಚಿಮ ಬಂಗಾಳದಿಂದ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಮಂಗಳೂರು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದ 1309 ಜನ ವಲಸೆ ಕಾರ್ಮಿಕರನ್ನು ಉತ್ತರ ಕನ್ನಡ ಜಿಲ್ಲಾಡಳಿತದ ವತಿಯಿಂದ ಉಚಿತವಾಗಿ ವಿಶೇಷ ಶ್ರಮಿಕ ರೈಲಿನ ವ್ಯವಸ್ಥೆ ಮಾಡಿ ಮರಳಿ ಪಚ್ಚಿಮ ಬಂಗಾಳ ರಾಜ್ಯಕ್ಕೆ ಕಳುಹಿಸಿಕೊಡಲಾಯಿತು.
ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಜೀವನ ನಿರ್ವಹಣೆಗೆಂದು ಕೆಲಸವನ್ನು ಅರಿಸಿ ಬಂದಿದ್ದ, ಉಡುಪಿ ಜಿಲ್ಲೆಯ 250, ಮಂಗಳೂರು 73, ಚಿಕ್ಕಮಗಳೂರು 96 ಉತ್ತರ ಕನ್ನಡ ಜಿಲ್ಲೆಯ 890 ಒಟ್ಟು 1309 ಜನ ವಲಸೆ ಕಾರ್ಮಿಕರನ್ನು ಉತ್ತರ ಕನ್ನಡ ಜಿಲ್ಲಾಡಳಿತದಿಂದಲೇ ಖರ್ಚು ಭರಿಸಿ ಸೋಮವಾರ ಕಾರವಾರ ಶಿರವಾಡಾ ರೈಲು ನಿಲ್ದಾಣದಿಂದ ಮಧ್ಯಾಹ್ನ 2.30ಕ್ಕೆ ವಿಶೇಷ ಶ್ರಮಿಕ ಕೊಂಕಣ ರೈಲ್ವೆ ಮೂಲಕ ಕಳುಹಿಸಲಾಯಿತು.
ಜಿಲ್ಲಾಡಳಿತವು ಈ ಎಲ್ಲ ವಲಸೆ ಕಾರ್ಮಿಕರಿಗೆ ವಿಶೇಷ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಅವರಿಗೆ ಪ್ರಮಾಣ ಪತ್ರ ಮತ್ತು ಮಾಸ್ಕ ಸ್ಯಾನಿಟೈಜರ್ ವಿತರಿಸುವದರೊಂದಿಗೆ ನೀರು ಮತ್ತು ಊಟದ ವ್ಯವಸ್ಥೆಯನ್ನು ಮಾಡಿ ಕಳುಹಿಸಿದೆ.
ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರನ್ನು ವಿಶೇಷ ಶ್ರಮಿಕ ರೈಲಿನ ಮೂಲಕ ಕಳುಹಿಸಿಕೊಡಲು ಖುದ್ದು, ಜಿಲ್ಲಾಧಿಕಾರಿ ಡಾ ಹರೀಶ ಕುಮಾರ ಕೆ, ಕಾರವಾರ ಉಪವಿಭಾಗಾಧಿಕಾರಿ ಪ್ರಿಯಾಂಗಾ ಎಂ. ಕೊಂಕಣ ರೈಲ್ವೆ ಪ್ರಾದೇಶಿಕ ಅಧಿಕಾರಿ ಬಿ. ಬಿ. ನಿಕಮ್, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ ಬಿ ಆರ್. ಸಮಾಜ ಕಲ್ಯಾಣಾಧಿಕಾರಿ ಎಸ್ ಪುರುಷೋತ್ತಮ ಸೇರಿದಂತೆ ಇತರರು ರೈಲ್ವೆ ನಿಲ್ದಾಣದಲ್ಲಿ ಹಾಜರಿದ್ದು ಎಲ್ಲರಿಗೂ ಶುಭ ಹಾರೈಸಿ ಕಳುಹಿಕೊಟ್ಟರು.