ಮಡಿಕೇರಿ: ಮಹಾಮಳೆಗೆ ಉಂಟಾದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗಾಗಿ ಹರಿದು ಬರುತ್ತಿರುವ ಸಾಮಗ್ರಿಗಳು ಮಧ್ಯವರ್ತಿಗಳ ಪಾಲಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ.
ಕೊಡಗಿಗೆ ವಿವಿಧೆಡೆಯಿಂದ ಹರಿದು ಬರುತ್ತಿರುವ ಸಾಮಗ್ರಿಗಳನ್ನು ಕಳವು ಮಾಡಿ ಅಂಗಡಿಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಜಿಲ್ಲೆಯ ವಿವಿಧ ಪರಿಹಾರ ಕೇಂದ್ರಗಳಿಗೆ ತರಕಾರಿ, ಹಾಲಿನ ಪುಡಿ, ಅಕ್ಕಿ, ಗೋಧಿಹಿಟ್ಟು, ನೀರಿನ ಬಾಟಲಿ, ಹೊದಿಕೆ ಸೇರಿದಂತೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಸಂಘಸಂಸ್ಥೆಗಳು ನಡೆಸುತ್ತಿರುವ ಪರಿಹಾರ ಕೇಂದ್ರಗಳಲ್ಲಿ ಮಾತ್ರ ಈ ವಸ್ತುಗಳಿಗೆ ಸ್ವಯಂಸೇವಕರ ರಕ್ಷಣೆ ಇದ್ದು, ಜಿಲ್ಲಾಡಳಿತ ನಡೆಸುತ್ತಿರುವ ಪರಿಹಾರ ಕೇಂದ್ರಗಳಿಗೆ ಸಾರ್ವಜನಿಕರು ನೀಡುತ್ತಿರುವ ವಸ್ತುಗಳು ಮಧ್ಯವರ್ತಿಗಳ ಪಾಲಾಗುತ್ತಿವೆ ಎನ್ನಲಾಗುತ್ತಿದೆ. ಅಲ್ಲದೆ ಮನೆಮಠ ಕಳೆದುಕೊಂಡು ಬಂದಿರುವ ತಮಗೆ ಹಳಸಲು ಅನ್ನ ನೀಡಲಾಗುತ್ತಿದೆ ಎಂಬ ಆರೋಪ ನಗರದ ಮೈತ್ರಿ ಹಾಲ್ನಲ್ಲಿರುವ ಸಂತ್ರಸ್ತರು ದೂರಿಕೊಂಡಿದ್ದಾರೆ.
ಜಿಲ್ಲಾಡಳಿತದಿಂದ ಕ್ರಮ: ಈ ಕುರಿತು ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ ಅವರ ಗಮನಸೆಳೆದ ಸಂದರ್ಭ ಇಂತಹ ಘಟನೆಗಳಾಗದಂತೆ ತಡೆಯುವುದಕ್ಕಾಗಿ ಎಲ್ಲಾ ಪರಿಹಾರ ಕೇಂದ್ರಗಳಿಗೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇನ್ನು ಮುಂದೆ ಇಂತಹ ದೂರುಗಳು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ದಾಸ್ತಾನು ಕೇಂದ್ರಗಳು: ಇದರೊಂದಿಗೆ ಸಂತ್ರಸ್ತರಿಗೆ ವಿತರಿಸಲು ರಾಜ್ಯ ಹಾಗೂ ಜಿಲ್ಲೆಯ ವಿವಿಧೆಡೆಗಳಿಂದ ಸ್ವೀಕೃತವಾಗುವ ಪರಿಹಾರ ಸಾಮಾಗ್ರಿಗಳನ್ನು ಮಡಿಕೇರಿಯ ಜಿಲ್ಲಾಡಳಿತ ಭವನ, ಸರಕಾರ ಮಾದರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡ, ಮಡಿಕೇರಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಗೋದಾಮು ಹಾಗೂ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಗೋದಾಮುಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಸಾಕಷ್ಟು ಪರಿಹಾರ ಸಾಮಾಗ್ರಿಗಳು ದಾಸ್ತಾನು ಇದ್ದರೂ ಕೆಲವು ಪುನರ್ವಸತಿ ಕೇಂದ್ರಗಳಿಗೆ ಅವುಗಳು ಸಕಾಲದಲ್ಲಿ ಮತ್ತು ಅಗತ್ಯಕ್ಕೆ ತಕ್ಕಂತೆ ದೊರಕುತ್ತಿಲ್ಲ ಮತ್ತು ಪುನರ್ವಸತಿ ಕೇಂದ್ರಗಳಿಗೆ ವಿತರಿಸಲಾಗುವ ಸಾಮಗ್ರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರುಗಳು ಬರುತ್ತಿರುವುದರಿಂದ ಈ ದಾಸ್ತಾನು ಕೇಂದ್ರಗಳಿಗೆ ನಿಯೋಜಿಸಲ್ಪಟ್ಟಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ದಾಸ್ತಾನು ಕೇಂದ್ರದಲ್ಲಿ ಸ್ವೀಕರಿಸಲಾಗುವ ಸಾಮಗ್ರಿಗಳ ಮಾಹಿತಿಯನ್ನು ದಾಖಲಿಸಿಕೊಳ್ಳುವಂತೆ ಮತ್ತು ಪರಿಹಾರ ಕೇಂದ್ರಗಳಿಗೆ ವಿತರಿಸುವಾಗ ಸಾಮಗ್ರಿಗಳನ್ನು ಪಡೆದುಕೊಂಡವರ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಗಳನ್ನು ಕಡ್ಡಾಯವಾಗಿ ದಾಖಲಿಸಿ ಸಹಿ ಪಡೆಯುವುದರೊಂದಿಗೆ ವಿತರಿಸಿದ ಸಾಮಗ್ರಿಗಳ ವಿವರ ಮತ್ತು ಪ್ರಮಾಣವನ್ನು ಸ್ಪಷ್ಟವಾಗಿ ದಾಖಲಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಶ್ರೀವಿದ್ಯಾ ತಿಳಿಸಿದ್ದಾರೆ.