ಮೂಡಿಗೆರೆ: ಬಿಪಿಎಲ್ ಪಡಿತರದಾರರೊಬ್ಬರು ನ್ಯಾಯಬೆಲೆ ಅಂಗಡಿಯಿಂದ ತಂದ ಅಕ್ಕಿಯಲ್ಲಿ ಮುಗ್ಗಲು ಪುಡಿ ಮತ್ತು ಕಲ್ಲುಗಳಿಂದ ಕೂಡಿದ್ದು, ಈ ಅಕ್ಕಿಯನ್ನು ಊಟಕ್ಕೆ ಬಳಸಲು ಸಾಧ್ಯವಿಲ್ಲ ಎಂದು ಪಡಿತರದಾರರು ದೂರಿದ್ದಾರೆ.
ಕಸಬಾ ಹೋಬಳಿ ನಂದಿಪುರ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿಯಲ್ಲಿ ಸಂಪೂರ್ಣ ಕಲ್ಲು ಸಹಿತ ಇತರೇ ಮುಗ್ಗಲು ಪುಡಿ ಬೆರಕೆ ಮಾಡಲಾಗಿದೆ. ಈ ಅಕ್ಕಿಯನ್ನು ತಂದ ಪಡಿತರದಾರರು ಊಟ ಮಾಡಲು ಸಾಧ್ಯವಾಗದೇ ಅಕ್ಕಿಯನ್ನು ಎಸೆಯುವ ಪರಿಸ್ಥಿತಿ ಉಂಟಾಗಿದೆ.
ಸರಕಾರ ನೀಡುವ ಉಚಿತ ಪಡಿತರ ಆಹಾರ ಪದಾರ್ಥಗಳು ಗುಣಮಟ್ಟದಿಂದ ಕೂಡಿರಬೇಕೆಂಬ ನಿಯಮವಿದ್ದರೂ ಆಹಾರ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ನ್ಯಾಯಬೆಲೆ ಅಂಗಡಿಯ ಮಾಲೀಕರ ಅಸಡ್ಡೆಯಿಂದಾಗಿ ಬಡ ಜನರಿಗೆ ಗುಣ ಮಟ್ಟದ ಆಹಾರ ಪಡೆಯಲು ಸಾಧ್ಯವಾಗುತ್ತಿಲ್ಲ. ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವ ಆಹಾರ ಪದಾರ್ಥವನ್ನೇ ನಂಬಿಕೊಂಡಿರುವ ಗ್ರಾಮೀಣ ಭಾಗದ ಬಡ ಕುಟುಂಬಗಳು ಪ್ರತಿ ತಿಂಗಳು ಬೆರಕೆಯಾಗಿರುವ ಆಹಾರ ಪದಾರ್ಥ ಸಿಕ್ಕಿದರೆ ಉತ್ತಮ ಆಹಾರ ಸೇವಿಸಲು ಸಾಧ್ಯವಿಲ್ಲ. ದಿನಸಿ ಅಂಗಡಿಗಳಲ್ಲಿ 40ರಿಂದ 52 ರೂ. ತೆತ್ತು ಅಕ್ಕಿ ಕೊಂಡುಕೊಳ್ಳಲು ಕೂಲಿ ಕಾರ್ಮಿಕರಿಗೆ ಸಾಧ್ಯವಿಲ್ಲ. ಹಾಗಾಗಿ ಅಧಿಕಾರಿಗಳು ನ್ಯಾಯ ಬೆಲೆ ಅಂಗಡಿಗಳಿಗೆ ಆಹಾರ ಪದಾರ್ಥ ಬಿಡುಗಡೆಗೊಳ್ಳುವ ಸಂದರ್ಭದಲ್ಲಿ ಪರಿಶೀಲನೆ ನಡೆಸಿ ಗುಣಮಟ್ಟದ ಆಹಾರ ಪದಾರ್ಥವನ್ನು ಮಾತ್ರ ನ್ಯಾಯ ಬೆಲೆ ಅಂಗಡಿಗಳಿಗೆ ಸರಬರಾಜು ಮಾಡಬೇಕು. ಕಲ್ಲು ಮಿಶ್ರಿತ, ಮುಗ್ಗಲು ಪುಡಿ ಅಕ್ಕಿಯನ್ನು ವಾಪಾಸ್ ಕಳುಹಿಸಬೇಕು ಎಂದು ಪಡಿತರದಾರರು ಮನವಿ ಮಾಡಿದ್ದಾರೆ.