ಮಂಡ್ಯ: ನನಗೆ ಯಾವುದೇ ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಇಲ್ಲ. ಬಿಜೆಪಿ ವಿರುದ್ಧ ಮಾತನಾಡಿದ ಮಾತ್ರಕ್ಕೆ ನಾನು ಕಾಂಗ್ರೆಸ್, ಜೆಡಿಎಸ್ ಅಥವಾ ಕಮ್ಯುನಿಸ್ಟ್ ಪರ ಎಂದು ಭಾವಿಸಬೇಕಿಲ್ಲ, ಎಂದು ನಟ-ಚಿಂತಕ ಪ್ರಕಾಶ್ ರೈ ಹೇಳಿದ್ದಾರೆ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ`ಜಸ್ಟ್ ಆಸ್ಕಿಂಗ್’ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಬಿಜೆಪಿ ಬಣ್ಣ ಬಯಲು ಮಾಡುತ್ತಿರುವ ನಾನು ನಾಳೆ ಇನ್ನಿಬ್ಬರ ಬಣ್ಣ ಬಯಲು ಮಾಡುವುದಕ್ಕೂ ಸಿದ್ಧನಿದ್ದೇನೆ.
ನಾನು ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಯಾವುದೇ ಜಾತಿ-ಧರ್ಮದ ವಾದಿಯಲ್ಲ. ನಾನೊಬ್ಬ ವಾಸ್ತವವಾದಿ. ನೀವು ಹಿಂದೂ ಆಗಿರುವುದಕ್ಕೆ ನನ್ನ ಅಭ್ಯಂತರವಿಲ್ಲ. ಆ ಮನೋ ಧೋರಣೆಯನ್ನು ಇನ್ನೊಬ್ಬರ ಮೇಲೆ ಬಲವಂತವಾಗಿ ಹೇರುವುದನ್ನಷ್ಟೇ ನಾನು ವಿರೋಧಿಸುತ್ತಿದ್ದೇನೆ.
ನಾನು ಹಿಂದೂ ಧರ್ಮದ ವಿರೋಧಿಯಲ್ಲ. ಅದೊಂದು ಸಹಿಷ್ಣುತೆಯಿಂದ ಕೂಡಿದ ಧರ್ಮ. ವಿಶಾಲತೆ ಮತ್ತು ವೈಶಿಷ್ಟ್ಯತೆಯನ್ನೊಳಗೊಂಡಿರುವ ಧರ್ಮ. ಕೊಲ್ಲು ಎಂದು ಯಾವ ಧರ್ಮವೂ ಹೇಳುವುದಿಲ್ಲ. ನನಗೆ ಯಾವುದೇ ಹೆದರಿಕೆ ಇಲ್ಲ. ನಿಖರ ಮತ್ತು ನಿಷ್ಠುರವಾಗಿ ಮಾತನಾಡುತ್ತೇನೆ. ನನಗನ್ನಿಸಿದ್ದನ್ನು ನಾನು ಹೇಳುತ್ತೇನೆ. ಅದನ್ನು ಒಪ್ಪಿಕೊಳ್ಳುವುದು ಜನರಿಗೆ ಬಿಟ್ಟ ವಿಚಾರ ಎಂದರು.
ಸಮಾಜದಲ್ಲಿರುವ ಜನರನ್ನು ಜಾಗೃತಗೊಳಿಸುವ ಸಲುವಾಗಿ `ಜಸ್ಟ್ ಆಸ್ಕಿಂಗ್’ ಎಂಬ ಆಂದೋಲನ ಶುರು ಮಾಡಿದ್ದೇನೆ. ಇದು ಜನರ ಧ್ವನಿಯಾಗಿ ಕೆಲಸ ಮಾಡಲಿದೆ. ಎಲ್ಲಾ ಜಿಲ್ಲೆಗಳಿಗೂ ಭೇಟಿ ಕೊಟ್ಟು ಸ್ಥಳೀಯವಾಗಿರುವ ಮುಖ್ಯ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಬೇಕು.
ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶಕ್ಕೆ ದೊಡ್ಡ ಅಪಾಯವಿದೆ. ದೇಶಕ್ಕೆ ಅಪಾಯಕಾರಿಯಾಗಿ ಬೆಳವಣಿಗೆ ಕಾಣುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ನಾನೂ ಗೋ ರಕ್ಷಕ, ನನ್ನ ಬಳಿ 48 ದೇಶೀ ತಳಿಯ ಗೋವುಗಳಿವೆ. ಅವುಗಳಿಂದ ಜೀವಾಮೃತ ಮಾಡುವುದನ್ನು ಕಲಿತಿದ್ದೇನೆ. ಸಂಘ ಪರಿವಾರದವರು ಅದರಲ್ಲಿ 330 ಕೋಟಿ ದೇವರುಗಳನ್ನು ಕಂಡರೆ, ನಾನು 330 ಕೋಟಿ ಸೂಕ್ಷ್ಮ ಜೀವಾಣುಗಳನ್ನು ಕಂಡಿದ್ದೇನೆ. ನಾನು ಗೋಹತ್ಯೆ ಮಾಡುವುದನ್ನಷ್ಟೇ ಅಲ್ಲ. ಎಲ್ಲಾ ಪ್ರಾಣಿಗಳ ವಧೆಯನ್ನೂ ವಿರೋಧಿಸುತ್ತೇನೆ ಎಂದು ಇದೇ ವೇಳೆ ಹೇಳಿದರು.