ಮಡಿಕೇರಿ: ಅಂತರ್ಜಲವನ್ನು ಹೆಚ್ಚಿಸುವ ಮೂಲಕ ನದಿಗಳ ಪುನಶ್ಚೇತನಕ್ಕೆ ಕಾಯಕಲ್ಪ ನೀಡುವ ಕಾರ್ಯಕ್ರಮಕ್ಕೆ ಆರ್ಟ್ ಆಫ್ ಲೀವಿಂಗ್ ನ ಶ್ರೀರವಿಶಂಕರ್ ಗುರೂಜಿ ಕಾವೇರಿಯ ಕ್ಷೇತ್ರ ಭಾಗಮಂಡಲದಲ್ಲಿ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿ ಗುರೂಜಿ, ಕಾವೇರಿ ನದಿಯ ಉಳಿವಿಗೆ ಸರ್ಕಾರದೊಂದಿಗೆ ಸ್ಥಳೀಯರ ಸಹಕಾರವೂ ಅಗತ್ಯವೆಂದರು. ಈ ವರ್ಷದ ಅಂತ್ಯಕ್ಕೆ ಕಾವೇರಿ ತೀರದಲ್ಲಿ 2.50 ಲಕ್ಷ ಮರಗಳನ್ನು ಬೆಳೆಸುವ ಸಂಕಲ್ಪ ಮಾಡಲಾಗಿದೆ. ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾವೇರಿ ತೀರದಲ್ಲಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಹಸಿರ ಕೊಡಗಿನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಒತ್ತು ನೀಡುವುದು ಅನಿವಾರ್ಯ, ಆದರೆ ಅದು ಇಲ್ಲಿನ ಪರಿಸರಕ್ಕೆ ಮತ್ತು ಸಂಸ್ಕೃತಿಗೆ ಧಕ್ಕೆಯನ್ನುಂಟು ಮಾಡಬಾರದೆಂದು ಶ್ರೀರವಿಶಂಕರ್ ಗುರೂಜಿ ಅಭಿಪ್ರಾಯಪಟ್ಟರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಅಂತರ್ಜಲ ಕುಸಿಯುತ್ತಿರುವ ಆತಂಕದ ಪರಿಸ್ಥಿತಿಯಲ್ಲಿ ಜೀವನದಿಗಳ ಪುನಶ್ಚೇತನ ಅಗತ್ಯವಿದ್ದು, ಕೊಡಗಿನಲ್ಲಿ ದೇವರ ಕಾಡುಗಳ ರಕ್ಷಣೆಯಾಗಬೇಕಾಗಿದೆ ಎಂದರು. ಕಾವೇರಿ ನದಿ ಕಲುಷಿತಗೊಳ್ಳಲು ಪ್ರವಾಸಿಗರು ಕೂಡ ಕಾರಣಕರ್ತರೆಂದು ಅಭಿಪ್ರಾಯಪಟ್ಟ ಅವರು, ನದಿಯ ಪಾವಿತ್ರ್ಯತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.
ಸಂಸದ ಪ್ರತಾಪ ಸಿಂಹ ಮಾತನಾಡಿ, ಸುಂದರ ಪರಿಸರದಲ್ಲು ನಾವು ದೇವರನ್ನು ಕಾಣಬೇಕಾಗಿದೆ. ಪರಿಸರವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಸಂರಕ್ಷಿಸಬೇಕಾಗಿದೆ ಎಂದರು. ನದಿಗಳ ಪುನಶ್ಚೇತನದ ಕಾರ್ಯಕ್ಕೆ ತನ್ನ ಸಂಪೂರ್ಣ ಸಹಕಾರವಿದೆ ಎಂದು ಘೋಷಿಸಿದರು.
ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಮೂಲಕ ನದಿಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಸರ್ಕಾರದ ಸಹಕಾರದೊಂದಿಗೆ ಆರ್ಟ್ ಆಫ್ ಲೀವಿಂಗ್, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮತ್ತು ವಿವಿಧ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ ರಾಜ್ಯವ್ಯಾಪಿ ನದಿಗಳ ಪುನಶ್ಚೇತನಕ್ಕೆ ಕಾರ್ಯಕ್ರಮ ರೂಪಿಸಲಾಗಿದ್ದು, ಅದರ ಭಾಗವಾಗಿ ಕಾವೇರಿಯ ಉಗಮ ಸ್ಥಾನದಲ್ಲಿ ಅಭಿಯಾನವನ್ನು ಆರಂಭಿಸಲಾಯಿತು.
ನದಿಗಳ ಪುನಶ್ಚೇತನ ಅಭಿಯಾನದ ಮುಖ್ಯಸ್ಥರಾದ ಗಂಗೊಳ್ಳಿ ನಾಗರಾಜು ಅವರು, ಬೀದರ್ ನಿಂದ ಚಾಮರಾಜನಗರದವರೆಗೆ ಅಭಿಯಾನವನ್ನು ನಡೆಯಲಿದೆ ಎಂದು ತಿಳಿಸಿದರು. 2024ರ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದೆ. ಕೊಡಗು ಜಿಲ್ಲೆಯಲ್ಲಿ ಕಾವೇರಿ, ಲಕ್ಷ್ಮಣ ತೀರ್ಥ ಸೇರಿದಂತೆ ಎಲ್ಲಾ ನದಿಗಳು ಹಾಗೂ ಉಪನದಿಗಳನ್ನು ಉಳಿಸುವ ಅಗತ್ಯವಿದ್ದು, ಮನೆ ಮನೆಗೆ ತೆರಳಿ ಜನ ಜಾಗೃತಿ ಮೂಡಿಸುವ ಕಾರ್ಯವನ್ನು ಅಭಿಯಾನದ ಸಂಯೋಜಕರು ಮಾಡಲಿದ್ದಾರೆ ಎಂದರು.