ಕಾರವಾರ: ಅಯ್ಯಪ್ಪ ಸ್ವಾಮಿ ಮಾಲಾಧಾರಿ ವ್ಯಕ್ತಿಯೊಬ್ಬರು ನದಿಯಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಮೊಸಳೆಯೊಂದು ದಾಳಿ ನಡೆಸಿ ಎಳೆದೊಯ್ದು ಗಾಯಗೊಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಳಿ ನದಿಯಲ್ಲಿ ಶುಕ್ರವಾರ ಸಂಭವಿಸಿದೆ.
ದಾಂಡೇಲಿಯ ನಿರ್ಮಲ ನಗರ ನಿವಾಸಿ ನಾಗೇಶ್ ಈಶ್ವರ ಬಳ್ಳಾರಿ ಮೊಸಳೆ ಎಳೆದೊಯ್ದು ಗಾಯಗೊಳಿಸಿದ ವ್ಯಕ್ತಿ. ದಾಂಡೇಲಿಯ ಕಾಳಿ ನದಿ ತಟದ ಈಶ್ವರ ಮಂದಿರದ ಬಳಿ ಸ್ನಾನಕ್ಕೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ.
ತಕ್ಷಣ ಮಾಹಿತಿ ಪಡೆದ ಅರಣ್ಯ ಹಾಗೂ ಪೊಲೀಸ್ ಇಲಾಖೆಯವರು ಸ್ಥಳಕ್ಕೆ ಬಂದು ನಾಗೇಶ್ ಅವರನ್ನು ರಕ್ಷಣೆ ಮಾಡಿದ್ದಾರೆ. ಮೊಸಳೆ ದಾಳಿಯಿಂದಾಗಿ ಕಾಲು, ಕೈ ಹಾಗೂ ಮೈ ಮೇಲೆ ಗಂಭೀರ ಗಾಯಗಳಾಗಿದೆ. ಗಾಯಾಳುವನ್ನು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.