ಚಾಮರಾಜನಗರ: ಕೇಂದ್ರ ಬರ ಅಧ್ಯಯನ ತಂಡವು ಜಿಲ್ಲೆಯ ವಿವಿಧ ಭಾಗಗಳಿಗೆ ಇಂದು ಭೇಟಿ ನೀಡಿ ಅಭಾವ ಪರಿಸ್ಥಿತಿಯ ಅಧ್ಯಯನ ನಡೆಸಿತು. ಎಸ್.ಎಂ. ಕೊಲತ್ಕರ್, ಸತೀಶ್ ಕುಮಾರ್ ಕಾಂಬೋಜ್, ಎಸ್.ಸಿ. ಮೀನಾ ಅವರನ್ನೊಳಗೊಂಡ ತಂಡವು ಮೊದಲಿಗೆ ಸತ್ತೇಗಾಲದ ಮೂಲಕ ಜಿಲ್ಲೆಯ ಗಡಿಗೆ ಆಗಮಿಸಿತು.
ಬಳಿಕ ಕೊಳ್ಳೇಗಾಲದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಿತು. ಜಿಲ್ಲಾಧಿಕಾರಿ ಬಿ.ರಾಮು ಅವರು ಜಿಲ್ಲೆಯ ಮಳೆ ಬೆಳೆ ಹಾಗೂ ಮೇವು ಪರಿಸ್ಥಿತಿ ಬಗ್ಗೆ ಪವರ್ಪಾಯಿಂಟ್ ಮೂಲಕ ವಿವರವಾಗಿ ತಂಡಕ್ಕೆ ಮಾಹಿತಿ ಒದಗಿಸಿದರು. ಅಲ್ಲದೆ, ಕುಡಿಯುವ ನೀರಿನ ಅಭಾವ ಪರಿಸ್ಥಿತಿ ಜೊತೆಗೆ ಜಿಲ್ಲೆಯ ಅರಣ್ಯದಂಚಿನ ಗ್ರಾಮಗಳು ಹಾಗೂ ಹಾಡಿಗಳಲ್ಲಿ ತಲೆದೋರಿರುವ ಸಮಸ್ಯೆಗಳ ಬಗ್ಗೆ ಛಾಯಾಚಿತ್ರಗಳ ಮೂಲಕ ವಿವರಣೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಹಾಗೂ ಬೆಳೆ ವಿಮೆ ಕುರಿತು ವಿವರಿಸಿದರು. ಬರ ಅಧ್ಯಯನ ತಂಡವು ಮಾಹಿತಿ ಪಡೆಯುವ ಸಂದರ್ಭದಲ್ಲಿ ಶಾಸಕರಾದ ಆರ್. ನರೇಂದ್ರ, ಎಸ್. ಜಯಣ್ಣ ಹಾಗೂ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಸವರಾಜು ಅವರು ಹಾಜರಿದ್ದರು. ಈ ಸಂದರ್ಭದಲ್ಲಿ ಜಿಲ್ಲೆಯ ಬರ ಪರಿಸ್ಥಿತಿಯ ಬಗ್ಗೆ ತಂಡಕ್ಕೆ ವಿವರಣೆ ನೀಡಿದರು. ಬಳಿಕ ಅಧ್ಯಯನ ತಂಡವು, ಯಳಂದೂರು ತಾಲೂಕಿನ ಕಿನಕನಹಳ್ಳಿ ಮಾರ್ಗವಾಗಿ ವೀಕ್ಷಣೆ ಕೈಗೊಂಡು ಕಟ್ನವಾಡಿಯಲ್ಲಿ ರೈತರ ಗದ್ದೆಗಳಿಗೆ ಭೇಟಿ ನೀಡಿತು. ಈ ವೇಳೆ ಸ್ಥಳೀಯ ರೈತರು ತಮ್ಮ ಭಾಗದಲ್ಲಿ ಈ ಬಾರಿ ಕಬಿನಿ ನಾಲೆಗಳಿಂದ ನೀರು ಹರಿಸದ ಹಿನ್ನೆಲೆಯಲ್ಲಿ ಬೆಳೆ ಬೆಳೆಯಲಾಗಿಲ್ಲ. ಹೀಗಾಗಿ ರೈತರು ಸಂಕಷ್ಟದಲ್ಲಿದ್ದಾರೆ. ನೆರವಿನ ಅಗತ್ಯವಿದೆ ಎಂದು ಮನವಿ ಮಾಡಿದರು. ನಂತರ ಮೆಲ್ಲಹಳ್ಳಿ ಗೇಟ್ ನಲ್ಲಿ ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಬರ ಅಧ್ಯಯನ ತಂಡವನ್ನು ಭೇಟಿ ಮಾಡಿ ಅಭಾವ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿದರು. ಅಲ್ಲದೇ ರೈತರ ಬೇಡಿಕೆಗಳ ಕುರಿತು ಮನವಿ ಪತ್ರವನ್ನು ಸಲ್ಲಿಸಿದರು.
ಬಳಿಕ ತಂಡವು ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರದಲ್ಲಿ ರೈತರು ಹಾಗೂ ಸ್ಥಳೀಯ ಗ್ರಾಮಸ್ಥರಿಂದ ಅಹವಾಲು ಆಲಿಸಿತು. ಉದ್ಯೋಗ ಖಾತರಿ ಯೋಜನೆ ಬೆಳೆ ವಿಮೆ ಬಗ್ಗೆ ಸಮಾಲೋಚಿಸಿತು. ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ಮಹೇಶ್ ಪ್ರಭು ಹಾಗೂ ಎಚ್.ಸಿ. ಮಹೇಶ್ ಕುಮಾರ್ ಅವರು ಸಹ ತಂಡದ ಮುಂದೆ ಸಮಸ್ಯೆಗಳನ್ನು ವಿವರಿಸಿದರು.
ಇದಾದ ಬಳಿಕ ಯಾಲಕ್ಕೂರು, ಕರಡಿಗುಡ್ಡ, ಮಂಗಲ, ಹರದನಹಳ್ಳಿ, ಅಮಚವಾಡಿ ಗ್ರಾಮಗಳಿಗೆ ಭೇಟಿ ನೀಡಿ ರೈತರ ಜಮೀನುಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ರೈತರು ಬರ ಪರಿಸ್ಥಿತಿಯಿಂದ ತಲೆದೋರಿರುವ ಸಮಸ್ಯೆಗಳ ಬಗ್ಗೆ ತಂಡದ ಮುಂದೆ ಅಹವಾಲು ತೋಡಿಕೊಂಡರು.
ನಂತರ ಬರ ಅಧ್ಯಯನ ತಂಡವು ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ, ತೆರಕಣಾಂಬಿ ಸುತ್ತಮುತ್ತಲ ಗ್ರಾಮಗಳಿಗೆ ತೆರಳಿ ವೀಕ್ಷಣೆ ನಡೆಸಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ಕುಮಾರ್ ಆರ್. ಜೈನ್, ಉಪವಿಭಾಗಾಧಿಕಾರಿ ಕವಿತಾರಾಜಾಂ, ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಬಾಲಸುಂದರ್, ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ದೇವರಾಜ್ ಇನ್ನಿತರ ಅಧಿಕಾರಿಗಳು ಹಾಜರಿದ್ದರು.