ಮಡಿಕೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಮೃತರ ಸಂಖ್ಯೆ ಹೆಚ್ಚಾಗುತ್ತಿದ್ದು, ವಿಶ್ವ ಹಿಂದೂ ಪರಿಷದ್ ಬಜರಂಗದಳದಿಂದ 25 ಕೋವಿಡ್ ಸೋಂಕಿತ ಮೃತ ವ್ಯಕ್ತಿಗಳ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಮೃತರ ಕುಟುಂಬಕ್ಕೆ ಕೋವಿಡ್ ಪರಿಸ್ಥಿತಿಯಲ್ಲಿ ಮೃತ ದೇಹವನ್ನು ನೀಡದ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಕಾರ್ಯಕರ್ತರು ಮೃತರ ಅಂತ್ಯಸಂಸ್ಕಾರದಲ್ಲಿ ಕೈಜೋಡಿಸಲು ತೀರ್ಮಾನಿಸಿ, ಇದೀಗ 25 ಮಂದಿಯ ಅಂತ್ಯ ಸಂಸ್ಕಾರ ನಡೆಸಿದೆ.
ಜಿಲ್ಲಾಡಳಿತ ಕೂಡ ಸ್ವಯಂಸೇವಕರನ್ನು ಬಯಸಿದ್ದರಿಂದ ಇದನ್ನು ಸ್ವಾಗತಿಸಿ, ತರಬೇತಿ ಏರ್ಪಡಿಸಲು ಸಹ ಕಾರ್ಯಪ್ರವೃತ್ತವಾಯಿತು. ಆದರೆ ತರಬೇತಿಗೂ ಮೊದಲು ಶಂಕಿತ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆಸಬೇಕಾದ ಅನಿವಾರ್ಯತೆ ಎದುರಾಗಿ, ಧೃತಿಗೆಡದ ಬಜರಂಗದಳ ಕಾರ್ಯಕರ್ತರು ಜಿಲ್ಲಾ ಸಂಯೋಜಕರ ನೇತೃತ್ವದಲ್ಲಿ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ನಡೆಸಿದರು.
ನಂತರ ಸುಮಾರು 45 ಮಂದಿ ಸ್ವಯಂ ಸೇವಕರ ನೋಂದಣಿಯೊಂದಿಗೆ ತರಬೇತಿ ಪಡೆದ ಕಾರ್ಯಕರ್ತರು ಮೊದಲು 4 ಅಂತ್ಯ ಸಂಸ್ಕಾರಕ್ಕಾಗಿ ಜಿಲ್ಲಾಡಳಿತದಿಂದ ಪೆÇಲೀಸ್ ಸಿಬ್ಬಂದಿ, ನಗರ ಸಭೆ ಸಿಬ್ಬಂದಿಗಳ ವ್ಯವಸ್ಥೆ ಮಾಡಿತ್ತು. ಆ ನಂತರದ ದಿನಗಳಲ್ಲಿ ಸ್ವಯಂ ಸೇವಕರೆ ಕಿಟ್ ಧರಿಸಿ ಅಂತ್ಯಕ್ರಿಯೆಗೆ ಮುಂದಾದರು.
ಅರಣ್ಯ ಇಲಾಖೆಯ ವತಿಯಿಂದ ಸೌದೆ ವ್ಯವಸ್ಥೆ ಮಾಡಿತ್ತು. ಆದರೆ ನಂತರದ ದಿನಗಳಲ್ಲಿ ದಾನಿಗಳ ನೆರವಿನಿಂದ ಸೌದೆ ಹೊಂದಿಸುವ ಕಾರ್ಯವನ್ನೂ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾಡಿಕೊಂಡಿದೆ. ಏಕ ಕಾಲಕ್ಕೆ ಎರಡೆರಡು ಮರಣ ಪ್ರಕರಣ ಎದುರಿಸಿದ ಕಾರ್ಯಕರ್ತರು ಮುಂದೆ ವಿಶ್ವ ಹಿಂದೂ ಪರಿಷದ್ ತಾಲ್ಲೂಕು ಅಧ್ಯಕ್ಷ ಸುರೇಶ್ ಮುತ್ತಪ್ಪ ಹಾಗೂ ಬಜರಂಗದಳದ ಜಿಲ್ಲಾ ಸಂಯೋಜಕ ಚೇತನ್ ನೇತೃತ್ವದಲ್ಲಿ ಎರಡನೆಯ ಕಬ್ಬಿಣದ ಚಿತೆಯನ್ನು ಕೂಡ ಸೇವಾ ಕಾರ್ಯದಲ್ಲಿ ಮಾಡಿಕೊಂಡಿದೆ.
ಇದುವರೆಗೆ ಬಜರಂಗದಳ ನೇತೃತ್ವದಲ್ಲಿ ನಡೆದ ಅಂತ್ಯ ಸಂಸ್ಕಾರವನ್ನು ಅಗ್ನಿ ಸ್ಪರ್ಶದ ಮೂಲಕವೇ ನಡೆಸಿರುವುದು ವಿಶೇಷ.