ಬೆಳಗಾವಿ: ಇಂದು ಬೆಳಿಗ್ಗೆ ಕಾರು-ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಅಪ್ರಾಪ್ತ ಮಕ್ಕಳು ಸಾವನ್ನಪ್ಪಿದ್ದ ದಾರುಣ ಘಟನೆ ತಾಲ್ಲೂಕಿನ ಖಾನಾಪುರ ರಸ್ತೆಯ ದೇಸೂರು ಗ್ರಾಮದ ಬಳಿ ನಡೆದಿದೆ.
ಮೃತ ಮಕ್ಕಳನ್ನು ನಗರದ ಕೊನವಾಳಿ ಗಲ್ಲಿಯ ಅಥರ್ವ ಜಾಧವ (16), ಅನಸೂರಕರ ಗಲ್ಲಿಯ ಅಮನ್ ಆನಂದ ಕಪಿಲೇಶ್ವರಿ (17) ಹಾಗೂ ಮುಜಾವರ ಗಲ್ಲಿಯ ಸುನೀಲ್ ಸಾವಗಾಂವಕರ (17) ಎಂದು ಗುರುತಿಸಲಾಗಿದೆ.
‘ಈ ಮೂವರು ಸ್ನೇಹಿತರು ಖಾನಾಪುರ ತಾಲ್ಲೂಕಿನ ಗಣೇಬೈಲ್ ನಲ್ಲಿರುವ ಭೂತನಮಠ ದೇವಸ್ಥಾನಕ್ಕೆ ಹೋಗಿ ವಾಪಸಾಗುತ್ತಿದ್ದ ವೇಳೆ ವಾಹನವೊಂದನ್ನು ಓವರ್ಟೇಕ್ ಮಾಡುವ ಭರದಲ್ಲಿ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನ ಚಾಲಕ ಪರಾರಿಯಾಗಿದ್ದಾನೆ’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಗ್ರಾಮೀಣ ಠಾಣೆಯ ಪೊಲೀಸರು ಮಾಹಿತಿ ನೀಡಿದರು.
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.