ಕಾರವಾರ: ಇಲ್ಲಿನ ಮುದಗಾದ ನೌಕಾನೆಲೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಾಗಿ ನೀರಿನ ಹರಿವಿಗೆ ಅಡ್ಡಿಪಡಿಸಿದ್ದರಿಂದ ಪ್ರವಾಹ ಪರಿಸ್ಥಿತಿ ತಲೆದೋರಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಅವರು ನೌಕಾನೆಲೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮುದಗಾ ಗ್ರಾಮದ ನೌಕಾನೆಲೆ ಬಳಿ ಕಾಮಗಾರಿಗಳು ನಡೆಯುತ್ತಿದೆ. ಈ ಜಾಗದಲ್ಲಿ ಮಣ್ಣುಗಳನ್ನು ಹಾಕಿರುವುದರಿಂದ ನೀರು ನಿಂತಿದೆ. ಬೆಟ್ಟದಿಂದ ಬರುವ ನೀರು ಸಮುದ್ರಕ್ಕೆ ಸರಾಗವಾಗಿ ಹರಿದು ಹೋಗದಿರುವ ಕಾರಣಕ್ಕೆ ಕೃತಕ ಪ್ರವಾಹ ಸೃಷ್ಟಿಯಾಗಿದ್ದು, ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜನರಿಗೆ ಸಮಸ್ಯೆ ಆಗದಂತೆ ಕಾಮಗಾರಿ ನಡೆಸಬೇಕು. ಇಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಆಮದಳ್ಳಿ, ಚೆಂಡಿಯಾ ಮತ್ತು ಹೆದ್ದಾರಿ ಪಕ್ಕದ ಗ್ರಾಮಗಳ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಮರುಕಳಿಸದಂತೆ ನೌಕಾನೆಲೆ ಅಧಿಕಾರಿಗಳು ನೋಡಿಕೊಳ್ಳಬೇಕು. ಸಮರ್ಪಕವಾಗಿ ಕಾಮಗಾರಿಯನ್ನು ನಡೆಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮುದಗಾ ಗ್ರಾಮಸ್ಥರ ಅನುಭವಿಸುತ್ತಿರುವ ಸಮಸ್ಯೆಯನ್ನು ಮೂರು ಗಂಟೆಗಳ ಕಾಲ ಸ್ಥಳದಲ್ಲಿ ನಿಂತು ನೀರು ಹರಿಯುವ ಜಾಗದಲ್ಲಿ ಹಾಕಲಾಗಿದ್ದ ಮಣ್ಣು ಮತ್ತು ಕಲ್ಲನ್ನು ತೆರವುಗೊಳಿಸುವ ಉಸ್ತುವಾರಿ ವಹಿಸಿದರು. ನಿಂತಿದ್ದ ನೀರು ಸರಾಗವಾಗಿ ಹರಿದುಹೋಯಿತು.
ಪರಿಹಾರ ಕೇಂದ್ರಗಳಿಗೆ ಭೇಟಿ: ನೆರೆ ಪ್ರವಾಹದಿಂದಾಗಿ ಅಂಕೋಲಾ ತಾಲ್ಲೂಕಿನ ಅವರ್ಸಾ ಹಾಗೂ ಹಾರವಾಡದಲ್ಲಿ ಆರಂಭಿಸಿದ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಯನ್ನು ಪರಿಶೀಲಿಸಿದರು. ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಪಿಡಿಒಗಳಿಗೆ ಸೂಚಿಸಿದರು.
ನೆರೆ ಪ್ರದೇಶಗಳ ವೀಕ್ಷಣೆ: ಕಾರವಾರ ಮತ್ತು ಅಂಕೋಲಾ ತಾಲೂಕಿನಲ್ಲಿ ನೆರೆ ಪ್ರವಾಹ ಉಂಟಾಗಿದ್ದು, ಮುಡೆಕಟ್ಟಾ, ದೇವನಬಾಗ ಹಾಗೂ ಬೊಗರಿಗದ್ದೆ ಪ್ರದೇಶಗಳನ್ನು ವೀಕ್ಷಿಸಿದರು. ಈ ಭಾಗಕ್ಕೆ ಬೇಕಾದ ಸೇತುವೆ ಹಾಗೂ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ,ನೌಕಾಪಡೆಯ ಅಧಿಕಾರಿ, ಪೊಲೀಸ್ ಇಲಾಖೆ ಅಧಿಕಾರಿಗಳು, ಮುದಗಾ ಗ್ರಾಮಸ್ಥರು, ಬಿಜೆಪಿ ಕಾರ್ಯಕರ್ತರು ಇದ್ದರು.