ಬೆಂಗಳೂರು, – ರಾಜ್ಯದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಉತ್ತಮವಾಗಿಟ್ಟುಕೊಂಡು ಕಾರ್ಯ ನಿರ್ವಹಿಸುವಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. ವಿಕಾಸಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ರಕ್ಷಣೆಗೆ ಇಲಾಖೆ ಮೊದಲ ಆದ್ಯತೆ ನೀಡಬೇಕು. ಶಾಂತಿ ಸುವ್ಯವಸ್ಥೆ ಎಲ್ಲೆಡೆ ಸ್ಥಾಪಿಸಬೇಕು. ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಗೃಹ ಇಲಾಖೆಯು ದಿನದ 24 ಗಂಟೆಯೂ ಚಟುವಟಿಕೆಯಲ್ಲಿರಬೇಕು. ಜನರ ರಕ್ಷಣೆಯೇ ಪೊಲೀಸರ ಕರ್ತವ್ಯವಾಗಿರುವುದರಿಂದ ಠಾಣೆಗಳು ಮಲಗಬಾರದು ಎಂದರು. ದೇಶದಲ್ಲೇ ಕರ್ನಾಟಕ ಪೊಲೀಸರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಪರಾಧ ಚಟುವಟಿಕೆಗಳಿಗೆ ಇನ್ನಷ್ಟು ಕಡಿವಾಣ ಹಾಕುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ದೇಶದಲ್ಲೇ ಇತ್ತೀಚೆಗೆ ರಾಜ್ಯದಲ್ಲೇ ನಮ್ಮ ಪೊಲೀಸರು ಟನ್ ಗಟ್ಟಲೇ ಡ್ರಗ್ಸ್ಗಳನ್ನು ವಶಪಡಿಸಿಕೊಂಡಿದ್ದಾರೆ. ಅವರ ಕಾರ್ಯಕ್ಷಮತೆ ಬಗ್ಗೆ ಹೆಮ್ಮೆಯಿದೆ. ಮುಂದೆಯೂ ಇದೇ ರೀತಿಯ ಉತ್ತಮ ಕೆಲಸಗಳನ್ನು ಅವರಿಂದ ನಿರೀಕ್ಷೆ ಮಾಡುತ್ತೇನೆ ಎಂದು ತಿಳಿಸಿದರು. ಇಂದು ನಡೆದಿರುವುದು ಮೊದಲ ಸಭೆಯಾಗಿದೆ. ಇಲಾಖೆಯನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿಯೇ ಈ ಸಭೆ ನಡೆಸಲಾಗಿದೆ. ಪೊಲೀಸರ ಹಿತವನ್ನು ಕಾಪಾಡುವುದು ನನ್ನ ಕರ್ತವ್ಯ ಎಂದರು.