ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿಯಲ್ಲಿ ಜನ ವಸತಿ-ಕೃಷಿ-ಪ್ಲಾಂಟೇಷನ್ ಹಾಗೂ ನಿವೇಶನ ಹಂಚಿಕೆಗಾಗಿ ಮೀಸಲಿಟ್ಟಿರುವ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಿಂದ ಕೈ ಬಿಡುವಂತೆ ಆಗ್ರಹಿಸಿ ಸಿರವಾಸೆ ಗ್ರಾಪಂ ವ್ಯಾಪ್ತಿಯ ಸಿರವಾಸೆ-ಸುಗುಡುವಾನಿ ಗ್ರಾಮಸ್ಥರು ನಗರದ ಆಜಾದ್ ಪಾರ್ಕ್ನಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಜಾಗರ ಹೋಬಳಿ ಕಸಾಪ ಅಧ್ಯಕ್ಷ ರವಿ ಕೆಳವಾಸೆ ಮಾತನಾಡಿ, ಹಸಿರು ಪೀಠದಲ್ಲಿ ಕಲಂ 4ರ ಸೂಕ್ಷ್ಮ ಪ್ರದೇಶಗಳೆಂದು ಕಾಣಿಸಿರುವುದು ಸರಿಯಲ್ಲ. ಕೇರಳದಲ್ಲಿ ಎಲ್ಲರೂ ಒಗ್ಗಟ್ಟಾಗಿ ಪ್ರತಿಭಟಿಸಿ ವಸತಿ ಇರುವ ಜನಗಳಿಗೆ ಅನುಮತಿ ಮಾಡಿಕೊಟ್ಟಿದೆ. ನಮ್ಮ ರಾಜ್ಯ ಇದನ್ನು ಉಳಿಸಿ ಕೊಡಬೇಕಾಗಿ ಹಾಗೂ ಅಮಾಯಕರ ಜನರ ಬಾಳನ್ನು ನುಚ್ಚುನೂರು ಮಾಡಬೇಡಿ. ಭವಿಷ್ಯದಲ್ಲಿ ಈ ಕಸ್ತೂರಿ ರಂಗನ್ ವರದಿಯಲ್ಲಿ ಉಗ್ರ ಹೋರಾಟ ಬೀದಿಗಿಳಿದು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ಚಿಕ್ಕಮಗಳೂರು ಜಿಲ್ಲೆಯ 5 ತಾಲ್ಲೂಕುಗಳ 147 ಗ್ರಾಮಗಳು ಕಸ್ತೂರಿ ರಂಗನ್ ವರದಿಯಂತೆ ಪರಿಸರ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಗೆ ಸೇರುತ್ತಿವೆ. ಚಿಕ್ಕಮಗಳೂರು ತಾಲ್ಲೂಕಿನ 27 ಗ್ರಾಮಗಳು, ಕೊಪ್ಪ ತಾಲ್ಲೂಕಿನ 32, ಮೂಡಿಗೆರೆ ತಾಲ್ಲೂಕಿನ 27, ಎನ್.ಆರ್.ಪುರ ತಾಲ್ಲೂಕಿನ 35 ಹಾಗೂ ಶೃಂಗೇರಿ ತಾಲ್ಲೂಕಿನ 26 ಗ್ರಾಮಗಳು ವರದಿಯಲ್ಲಿ ಸೇರಿವೆ. ಸಿರವಾಸೆ, ಸುಗುಡುವಾನಿ, ಜಾಗರ, ಬೊಗಸೆ, ಬಾಸಪುರ, ಕಡವತಿ, ಬಿದರೆ ಇತ್ಯಾದಿ ಗ್ರಾಮಗಳು ಒಳಪಡುತ್ತಿವೆ ಎಂದು ಹೇಳಿದರು. ಆದರೆ ಗ್ರಾಮಗಳಲ್ಲಿ ತಲ ತಲಾಂತರಗಳಿಂದ ವಸಿತ್ತಿರುವ ಇಲ್ಲಿನ ಜನರು ಪರಿಸರ ಸ್ನೇಹಿಯಾಗಿ ಕೃಷಿ ಚಟುವಟಿಕೆ ನಡೆಸಿಕೊಂಡು ಬದುಕು ಸಾಗಿಸುತ್ತಿದ್ದಾರೆ ಎಂದ ಅವರು, ಕಸ್ತೂರಿ ರಂಗನ್ರವರು ಅವೈಜ್ಞಾನಿಕ ಸಮೀಕ್ಷೆ ನಡೆಸಿ ಪಶ್ಚಿಮ ಘಟ್ಟ ಹಾದು ಹೋಗಿರುವ ಭೂಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಿದೆ. ಅದರೆ ಸದರಿ ವ್ಯಾಪ್ತಿಗಳಲ್ಲಿರುವ ಜನ ವಸತಿ, ಕೃಷಿ ಪ್ರದೇಶವನ್ನು ಅವರು ಗಣನೆ ತೆಗೆದುಕೊಂಡಿರುವುದಿಲ್ಲ ಎಂದು ತಿಳಿಸಿದರು.