News Karnataka Kannada
Sunday, May 05 2024
ಕರ್ನಾಟಕ

ಕಳಪೆ ಪಡಿತರ ವಿತರಣೆ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ

Photo Credit :

ಕಳಪೆ ಪಡಿತರ ವಿತರಣೆ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ

ಯಳಂದೂರು: ಗಿರಿಜನರಿಗೆ ಬುಡಕಟ್ಟು ಮತ್ತು ಪರಿಶಿಷ್ಟ ಪಂಗಡಗಳ ಇಲಾಖೆಯ ವತಿಯಿಂದ ವಿತರಣೆಯಾಗುತ್ತಿರುವ ಪೌಷ್ಠಿಕ ಆಹಾರ ಪದಾರ್ಥಗಳು ಕಳಪೆ ಗುಣಮಟ್ಟದಿಂದ ಕೂಡಿರುವುದು ಕಂಡುಬಂದಿದ್ದು, ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಜಿಪಂ ಅಧ್ಯಕ್ಷೆ ಅಶ್ವಿನಿವಿಶ್ವನಾಥ್ ಹೇಳಿದ್ದಾರೆ.

 

ತಾಲೂಕಿನ ಬಿಳಿಗಿರಿರಂಗನಬೆಟ್ಟದ ವಿವಿಧ ಪೋಡುಗಳಿಗೆ ಭೇಟಿ ನೀಡಿ ವಿತರಣೆಯಾಗಿರುವ ಪಡಿತರವನ್ನು ಪರಿಶೀಲಿಸಿ ಮಾತನಾಡಿದ ಅವರು ಈ ಬಾರಿ ವಿತರಣೆ ಮಾಡಲಾಗಿರುವ ಪಡಿತರ ಗುಣಮಟ್ಟದಿಂದ ಕೂಡಿಲ್ಲ ಎಂದು ಗಿರಿಜನರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದನ್ನು ಖುದ್ದು ಪರಿಶೀಲನೆ ಮಾಡಲು ಸ್ಥಳಕ್ಕೆ ಭೇಟಿ ನೀಡಿದ್ದು, ಇದರಲ್ಲಿ ರಾಗಿ, ಬೆಲ್ಲ, ತೊಗರಿಬೇಳೆ, ಕಡ್ಲೆಬೀಜದ ಗುಣಮಟ್ಟ ಉತ್ತಮವಾಗಿಲ್ಲ. ರಾಗಿಯು ದುರ್ವಾಸನೆ ಬೀರುತ್ತಿದ್ದು ಮುದ್ದೆ ಮಾಡಿದರೆ ತಿನ್ನಲು ಸಾಧ್ಯವಾಗುತ್ತಿಲ್ಲ. ಮೊಟ್ಟೆಯೂ ಚಿಕ್ಕ ಆಕಾರದಲ್ಲಿರುತ್ತದೆ. ಕಡ್ಲೆಬೀಜವೂ ಪೀಚಾಗಿರುತ್ತದೆ. ಬೇಳೆ ಬೇಯುವುದೇ ಇಲ್ಲ ಎಂದು ಸ್ಥಳೀಯರಾದ ಜಡೇಮಾದಮ್ಮ, ಕೇತಮ್ಮ ಸೇರಿದಂತೆ ಹಲವು ಸೋಲಿಗರು ದೂರಿದರು.

 

ಈ ಬಗ್ಗೆ ಆಹಾರ ಪದಾರ್ಥಗಳ ಮಾದರಿ ಪಡೆಯಲಾಗಿದ್ದು ಪರೀಕ್ಷಿಸಿ, ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಜೊತೆಗೆ ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡಲು ಕ್ರಮ ವಹಿಸಲಾಗುವುದು ಎಂದು ಅಧ್ಯಕ್ಷೆ ಭರವಸೆ ನೀಡಿದರು.

 

ಜನತಾ ಬಜಾರ್‍ನಿಂದ ಪೂರೈಕೆಯಾಗುತ್ತಿರುವ ಈ ಪಡಿತರದಲ್ಲಿ ಭಾರಿ ಅವ್ಯವಹಾರ ನಡೆದಿದೆ. ಹೆಚ್ಚಿನ ದರಕ್ಕೆ ಆಹಾರ ಪದಾರ್ಥಗಳನ್ನು ಖರೀದಿಸಲಾಗುತ್ತಿದ್ದು, ಕಿಲೋ ಒಂದಕ್ಕೆ ರಾಗಿಗೆ 8.30 ರೂ, ತೊಗರಿಬೇಳೆಗೆ 32 ರು, ಹುರುಳಿಗೆ 8 ರೂ, ಅಲಸಂದೆಗೆ 25 ರೂ, ಹೆಸರುಕಾಳಿಗೆ 14 ರೂ, ಬೆಲ್ಲಕ್ಕೆ 4 ರೂ, ಅಡುಗೆ ಎಣ್ಣೆಗೆ 6.50 ರೂ, ನಂದಿನಿ ತುಪ್ಪಕ್ಕೆ 57 ರೂ. ಹಾಗೂ ಒಂದು ಮೊಟ್ಟೆಗೆ 1.10 ರೂ. ಹೆಚ್ಚುವರಿ ಹಣವನ್ನು ನೀಡಿ ಖರೀದಿಲಾಗಿದೆ ಎಂದು ಕಸಬಾ ಜಿಪಂ ಸದಸ್ಯ ಜೆ. ಯೋಗೇಶ್ ಆರೋಪಿಸಿದರು. 2018-19 ನೇ ಸಾಲಿಗೂ 2019-20 ನೇ ಸಾಲಿಗೂ ಹೆಚ್ಚುವರಿ ಹಣ ಪಡೆದುಕೊಂಡು ಪಡಿತರ ನೀಡಲಾಗಿದೆ. ಜಿಲ್ಲೆಯಲ್ಲಿ ಅಂದಾಜು 7462 ಬುಡಕಟ್ಟು ಕುಟುಂಬಗಳಿದ್ದು 14.76 ಲಕ್ಷ ರೂ. ಹೆಚ್ಚುವರಿ ಹಣವನ್ನು ಪಡೆದುಕೊಳ್ಳಲಾಗಿದೆ. ಗುಣಮಟ್ಟದ ಆಹಾರ ಪೂರೈಕೆ ಮಾಡದೆ ಹೆಚ್ಚು ಹಣವನ್ನು ಪಡೆದುಕೊಂಡಿರುವ ಬಗ್ಗೆಯೂ ತನಿಖೆ ನಡೆಯಬೇಕು. ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದರು.

 

ತಾಪಂ ಸದಸ್ಯ ವೈ.ಕೆ.ಮೋಳೆನಾಗರಾಜು, ಗ್ರಾಪಂ ಮಾಜಿ ಸದಸ್ಯರಾದ ಶ್ರೀನಿವಾಸ್ ಮುಖಂಡರಾದ ವಿಶ್ವನಾಥ್, ಬೊಮ್ಮಯ್ಯ, ವೆಂಕಟೇಶ್, ಸಂತೋಷ್ ಸೇರಿದಂತೆ ಹಲವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು