ಕಾಸರಗೋಡು: ಕನ್ನಡ ಮಾಧ್ಯಮ ಶಾಲೆಗೆ ಮಲಯಾಳ ಶಿಕ್ಷಕನ ನೇಮಕ ವಿರುದ್ಧ ಕನ್ನಡಿಗರ ಹೋರಾಟಕ್ಕೆ ತಾತ್ಕಾಲಿಕ ಗೆಲುವು ಲಭಿಸಿದೆ. ಕಳೆದ ಒಂದು ತಿಂಗಳಿನಿಂದ ಮಂಗಲ್ಪಾಡಿ ಸರಕಾರಿ ಶಾಲಾ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಹೋರಾಟಕ್ಕಿಳಿದಿದ್ದು, ಹೋರಾಟಕ್ಕೆ ಪೋಷಕರು, ಕನ್ನಡ ಹೋರಾಟ ಸಮಿತಿ, ಕನ್ನಡ ಭಾಷಾಭಿಮಾನಿಗಳು ಹಾಗೂ ವಿವಿಧ ಪಕ್ಷ, ಸಂಘಟನೆಗಳ ಬೆಂಬಲ ಲಭಿಸುವ ಮೂಲಕ ಕನ್ನಡಿಗರ ಹಕ್ಕಿಗಾಗಿರುವ ಹೋರಾಟಕ್ಕೆ ಜಯ ಲಭಿಸಿದಂತಾಗಿದೆ.
ಮಂಗಲ್ಪಾಡಿ ಸರಕಾರಿ ಶಾಲೆಯ ಕನ್ನಡ ಮಾಧ್ಯಮಕ್ಕೆ ಗಣಿತ ಪಠ್ಯಕ್ಕೆ ಮಲಯಾಳ ಶಿಕ್ಷಕನ ನೇಮಕದ ವಿರುದ್ಧ ಕಳೆದ ಒಂದು ತಿಂಗಳ ಹಿಂದೆ ಪ್ರತಿಭಟನೆಗೆ ನಾಂದಿ ಹಾಡಿತ್ತು. ಜುಲೈ 29ರಿಂದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸುವ ಮೂಲಕ ಒಂದೆಡೆ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದರೆ ಮತ್ತೊಂದೆಡೆ ಶಾಲಾ ರಕ್ಷಕ-ಶಿಕ್ಷಕ ಸಂಘ, ಕನ್ನಡ ಹೋರಾಟ ಸಮಿತಿ ಬೆಂಬಲ ನೀಡಿತ್ತು.
ಕನ್ನಡಿಗರ ಪ್ರತಿಭಟನೆಗೆ ಮಣಿದ ಶಿಕ್ಷಕ ಸುದೀರ್ಘ 120 ದಿನ ರಜೆಯಲ್ಲಿ ತೆರಳಿದ್ದಾರೆ. ಇದರಿಂದ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ.
ಹೋರಾಟಕ್ಕೆ ತಾತ್ಕಾಲಿಕ ಗೆಲುವು ಲಭಿಸಿದ ಹಿನ್ನೆಲೆಯಲ್ಲಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಶಾಲಾ ಪರಿಸರದಲ್ಲಿ ಸಮಾವೇಶ ಆಯೋಜಿಸಿತ್ತು. ಸಮಾವೇಶದಲ್ಲಿ ಪ್ರತಿಭಟನೆ ಬಗ್ಗೆ ಅವಲೋಕನ ನಡೆಸಿ ಮುಂದಿನ ದಿನಗಳಲ್ಲಿ ನಡೆಸಬೇಕಾದ ಹೋರಾಟಕ್ಕೆ ರೂಪು ನೀಡಲಾಯಿತು.
ಸಭೆಯನ್ನು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು. ಕೆ. ಭಾಸ್ಕರ, ಬಾಲಕೃಷ್ಣ ಅಂಬಾರ್, ರವೀಂದ್ರನಾಥ್ ಬಲ್ಲಾಳ್, ಮುಹಮ್ಮದ್ ಉಪ್ಪಳಗೇಟ್, ಡಾ. ಅಭಿಲಾಷ್ ಮಯ್ಯ, ರಮೇಶ್ ಚೆರುಗೋಳಿ, ಯು. ಮಹೇಶ್ವರಿ ಮೊದಲಾದವರು ಮಾತನಾಡಿದರು.