ಕಡೂರು: ತಾಲೂಕಿನಾದ್ಯಂತ ತೀವ್ರ ಬರಗಾಲ ತಾಂಡವವಾಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯಲು ನೀಡಿಲ್ಲ. ಹಸಿರು ಎಂಬುದು ಕನ್ನಡಿಯ ಗಂಟು ಎಂಬಂತಾಗಿದೆ. ಪಟ್ಟಣದಲ್ಲಿ 23 ವಾರ್ಡುಗಳಿವೆ. ಯಾವುದೇ ವಾರ್ಡುಗಳಲ್ಲಿ ಒಂದೂ ಪಾರ್ಕುಗಳಿಲ್ಲ. ಪಾರ್ಕಿನ ಜಾಗಗಳೆಲ್ಲಾ ಕಂಡವರ ಪಾಲಾಗಿದೆ. ಪುರಸಭೆಯಿಂದಲೂ ಇಡೀ ಪಟ್ಟಣಕ್ಕೆ ಒಂದೇ ಒಂದು ಪಾರ್ಕ್ ನಿರ್ಮಾಣವಾಗಿಲ್ಲ. ಇದರ ಮಧ್ಯೆ ಇಕ್ಬಾಲ್ ಎನ್ನುವ ವ್ಯಕ್ತಿ ಪಾರ್ಕಿನ ಅಭಿವೃದ್ಧಿಗೊಳಿಸಿ ಪರಿಸರವಾದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪಟ್ಟಣದ ಎಂ.ಎಸ್.ಆರ್. ಶಾಲೆ ಮುಂಭಾಗದಲ್ಲಿರುವ ಎಂ.ಎಸ್.ಆರ್. ಪಾರ್ಕನ್ನು ಈ ಹಿಂದೆ ಡಾ. ರಾಜ್ ಸಂಘ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ಹಲವಾರು ವರ್ಷಗಳಿಂದ ಯಾರೂ ಈ ಪಾರ್ಕನ್ನು ನೋಡದೇ ಹಾಳು ಬಿದ್ದಿತ್ತು. ಪಾರ್ಕಿನ ಒಳಗಡೆ ಇದ್ದಿದ್ದ ಭುವನೇಶ್ವರಿ ವಿಗ್ರಹವೂ ವಿರೂಪಗೊಂಡಿತ್ತು. ಇದನ್ನು ಗಮನಿಸಿದ ಇಕ್ಬಾಲ್ ಅವರು ಆ ಭಾಗದ ಪುರಸಭೆ ಸದಸ್ಯರಾದ ದಿವಂಗತ ರೇಣುಕಾರಾಧ್ಯರವರ ಸಹಕಾರ ಪಡೆದು ಭುವನೇಶ್ವರಿ ವಿಗ್ರಹಕ್ಕೆ ಒಂದು ರೂಪ ಕೊಟ್ಟು ಪಾರ್ಕಿನ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.
ಕೆಲವು ಮುಸ್ಲಿಂ ಯುವಕರನ್ನು ಕಟ್ಟಿಕೊಂಡು ಸ್ವಂತ ಹಣದಲ್ಲಿ ಉತ್ತಮ ಗಿಡಗಳನ್ನು ತರಿಸಿಕೊಂಡು ಅವುಗಳನ್ನು ನೆಟ್ಟು ಗಿಡಗಳಿಗೆ ಉತ್ತಮ ಮಣ್ಣು, ಗೊಬ್ಬರ ಪ್ರತಿನಿತ್ಯ ಅವುಗಳಿಗೆ ನೀರನ್ನು ಬಿಡುವುದರ ಮೂಲಕ ಒಂದು ಉತ್ತಮ ಪಾರ್ಕನ್ನಾಗಿ ಮಾರ್ಪಡಿಸಿದ್ದಾರೆ. ಈಗ ಅವರು ನೆಟ್ಟಂತಹ ಗಿಡಗಳು ದೊಡ್ಡದಾಗಿ ಬೆಳೆದಿವೆ. ವಯಸ್ಸಾದವರು ಸಂಜೆ ವೇಳೆ ಪಾರ್ಕಿನಲ್ಲಿ ಉತ್ತಮ ಗಾಳಿ ಸೇವನೆ ಮಾಡುತ್ತಿದ್ದಾರೆ. ಇಡೀ ಪಟ್ಟಣಕ್ಕೆ ಇದೊಂದೇ ಪಾರ್ಕಿನಲ್ಲಿ ಗಿಡಗಳು ಇರುವುದು. ಅಲ್ಲದೆ 23 ವಾರ್ಡುಗಳಲ್ಲಿ ಬೇರೆಲ್ಲೂ ಪಾರ್ಕ್ ಇಲ್ಲ ಎಂಬಂತಾಗಿದೆ. ಪಾರ್ಕ್ ಜಾಗವನ್ನು ಕಬಳಿಸದೇ ಇರುವ ಪಾರ್ಕುಗಳನ್ನು ಪ್ರತಿ ವಾರ್ಡಿನಲ್ಲಿ ಅಭಿವೃದ್ಧಿಪಡಿಸಲು ಸಂಘ ಸಂಸ್ಥೆಗಳು ಮುಂದೆ ಬಂದರೆ ಇಕ್ಬಾಲ್ ರಂತಹ ಪರಿಸರ ಪ್ರಜ್ಞೆಯುಳ್ಳವರು ಪಟ್ಟಣದ ಎಲ್ಲಾ ಪಾರ್ಕುಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ. ಕಡೂರು ಪುರಸಭೆಗೆ ಹೇರಳವಾಗಿ ಅನುದಾನ ಬರುತ್ತಿದೆ. ಯಾವುದಾದರೂ ಅನುದಾನದಲ್ಲಿ ಉತ್ತಮ ಪಾರ್ಕ್ ನಿರ್ಮಾಣಕ್ಕೆ ಪ್ರಯತ್ನ ನಡೆಸಬಹುದಾಗಿದೆ.