ಕಡೂರು: ರಾಜ್ಯದಲ್ಲಿ ಹಿಂದುಳಿದ ವರ್ಗ(ಓಬಿಸಿ)ಗೆ ಸೇರಿರುವ ಜನರಿಗೆ ಸೂರು ಮತ್ತು ವಿದ್ಯೆ ನೀಡಲು ಜಾಗೃತಿ ಮೂಡಿಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ತಾಲೂಕಿನ ಖಂಡಗದಹಳ್ಳಿ ಶ್ರೀ ಸೋಮೇಶ್ವರ ಸ್ವಾಮಿಯವರ ಸನ್ನಿದಿಯಲ್ಲಿ ಲೋಕಕಲ್ಯಾಣಕ್ಕಾಗಿ ಏರ್ಪಡಿಸಿದ್ದ ರುದ್ರಾಭಿಷೇಕ, ಗಣಹೋಮ, ಇಷ್ಟಲಿಂಗ ಪೂಜೆಯಲ್ಲಿ ಭಾಗವಹಿಸಿ ಸುದ್ಧಿಗಾರರೊಂದಿಗೆ ಮಾತನಾಡಿದರು. ನನ್ನ ಮತ್ತು ಯಡಿಯೂರಪ್ಪನವರ ನಡುವಿನಲ್ಲಿ ಈಗ ಯಾವುದೇ ಭಿನ್ನಭಿಪ್ರಾಯವಿಲ್ಲ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನನಗೆ ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ಸಂಘಟನೆಯ ಜವಾಬ್ದಾರಿ ನೀಡಿದ್ದು, ಅಧ್ಯಕ್ಷರ ದೇಶದಂತೆ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದೇನೆ. ಬ್ರಿಗೇಡ್ ಚಟುವಟಿಕೆಗಳನ್ನು ನಾನು ಮುಂದುವರೆಸುವುದಿಲ್ಲ ಅದು ನಡೆಯುತ್ತಲಿರುತ್ತದೆ ಎಂದರು.
70 ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷವು ಹಿಂದುಳಿದ ವರ್ಗಗಳಿಗೆ ನೀಡಿದ ಕೊಡುಗೆಗಳೇನು ಎಂದು ಪ್ರಶ್ನಿಸಿದ ಅವರು ಅವರಿಂದ ಚುನಾವಣೆಗಳಲ್ಲಿ ಮತ ಪಡೆದರೆ ವಿನಃ ಹಿಂದುಳಿದವರನ್ನು ಕಾಂಗ್ರೆಸ್ ಕಡೆಗಣಿಸಿತು ಎಂದು ಆರೋಪಿಸಿದರು.ರಾಜ್ಯದ ಬರಗಾಲಕ್ಕೆಂದು ಕೇಂದ್ರ ಸರ್ಕಾರ 1740 ಕೋಟಿ ಹಣ ನೀಡಿದೆ ಇತಿಹಾಸದಲ್ಲಿ ಇಷ್ಟು ಹಣವನ್ನು ಕೇಂದ್ರ ಬರಗಾಲಕ್ಕೆಂದು ಇದುವರೆವಿಗೂ ನೀಡಿರಲಿಲ್ಲ ಇದು ದಾಖಲೆ ಎಂದು ಬಣ್ಣಿಸಿದ ಅವರು ಬಂದಿರುವ ಹಣವನ್ನು ದನಕರುಗಳಿಗೆ ಕುಡಿಯುವ ನೀರು, ಮೇವು ನೀಡಲು ಮುಂದಗಲಿ ಅದೇ ರೀತಿ ಪ್ರತಿಯೊಂದು ತಾಲೂಕುಗಳಲ್ಲಿ ಸಮಸ್ಯೆ ಇದ್ದು. ರಾಜಕೀಯ ಮಾಡದೆ ಸಮಸ್ಯೆಗೆ ಪರಿಹಾರ ನೀಡಲು ಸಿದ್ದರಾಮಯ್ಯನವರ ಸರ್ಕಾರ ಒತ್ತು ನೀಡಲಿ ಎಂದು ಆಗ್ರಹಿಸಿದರು.