ಮಡಿಕೇರಿ: ಭಯೋತ್ಪಾದಕರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಒಂದಿಷ್ಟೂ ಅಂಜದೆ ಭಯೋತ್ಪಾದಕರ ಅಡಗುತಾಣದ ಮೇಲೆ ದಾಳಿ ನಡೆಸಿ ಭಯೋತ್ಪಾದಕ ಕೃತ್ಯಕ್ಕೆ ಕಡಿವಾಣ ಹಾಕಿದ ಕೊಡಗಿನ ವೀರಯೋಧ ಸಿಪಾಯಿ ಎಚ್.ಎನ್.ಮಹೇಶ್ಗೆ ಸೇನೆಯಿಂದ ಪ್ರತಿಷ್ಟಿತ ಶೌರ್ಯ ಚಕ್ರ ಪ್ರದಾನ ಮಾಡಿ ಗೌರವಿಸಲಾಗಿದೆ.
ಭಾರತೀಯ ಸೇನಾ ಪಡೆಯಿಂದ ನೀಡಲಾಗುವ ಪ್ರತಿಷ್ಟಿತ ಶೌರ್ಯ ಚಕ್ರ ಪ್ರಶಸ್ತಿಯನ್ನು ಗುರುವಾರ ನವದೆಹಲಿಯಲ್ಲಿನ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳು ಮಹೇಶ್ ಅವರಿಗೆ ಪ್ರದಾನ ಮಾಡಲಾಯಿತು.
ಗೋಣಿಕೊಪ್ಪದ ಗುತ್ತಿಗೆದಾರ ನಾಗರಾಜ್ ಮತ್ತು ಲಕ್ಷ್ಮಿ ದಂಪತಿಗಳ ಪುತ್ರ ಎಚ್.ಎನ್.ಮಹೇಶ್ 7 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸಿಪಾಯಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವರ್ಷ ಜಮ್ಮುಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಿಢೀರ್ ದಾಳಿ ಸಂದರ್ಭ ಆ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಮಹೇಶ್ ತಕ್ಷಣ ಉಗ್ರರನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಗಿಳಿದರು.
ಭಯೋತ್ಪಾದಕರ ಗುಂಡಿನ ದಾಳಿಯನ್ನೂ ಲೆಕ್ಕಿಸದೆ ತಾವೇ ಮುನ್ನುಗ್ಗಿ ಭಯೋತ್ಪಾದಕರ ಮೇಲೆ ಸತತ ಗುಂಡಿನ ಮಳೆಗೆರೆಯುತ್ತಾ ಉಗ್ರರನ್ನು ಅಟ್ಟಾಡಿಸಿದ ಮಹೇಶ್ ಓರ್ವ ಭಯೋತ್ಪಾದಕನನ್ನು ಕೂಡ ಬಲಿ ಪಡೆದಿದ್ದರು. ಮತ್ತೋರ್ವ ಭಯೋತ್ಪಾದಕ ಗಂಭೀರವಾಗಿ ಗಾಯಗೊಂಡು ಪಲಾಯನಗೈದಿದ್ದ. ಮಹೇಶ್ ಹಾಗೂ ಅವರ ಜೊತೆಯಲ್ಲಿದ್ದ ಸೇನಾ ತಂಡ ಗುಂಡಿನಮಳೆಗರೆಯುತ್ತಿದ್ದಾಗ ಭಯೋತ್ಪಾದಕರು ಭಯಗೊಂಡು ಅಡಗು ತಾಣವೊಂದರಲ್ಲಿ ಆಶ್ರಯ ಪಡೆದು, ಅಲ್ಲಿಂದ ಹೊರಬರಲಾಗದೆ ಪರದಾಡತೊಡಗಿದರು. ಮರುದಿನವೂ ಮಹೇಶ್ ಅಡಗುತಾಣದ ಮೇಲೆ ದಾಳಿ ನಡೆಸಿ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.
ಮಹೇಶ್ ಅವರ ಶೌರ್ಯ ಸಾಧನೆಗೀಗ ಶೌರ್ಯಚಕ್ರ ಪ್ರಶಸ್ತಿಯೂ ದೊರಕಿದ್ದು, ಭಾರತೀಯ ಸೇನೆಗೆ ಅಧಿಕ ಸೈನಿಕರನ್ನು ನೀಡುವ ಮೂಲಕ ಸೈನಿಕರ ಜಿಲ್ಲೆ ಎಂಬ ಹಿರಿಮೆಗೆ ಪಾತ್ರವಾಗಿರುವ ಕೊಡಗು ಮತ್ತೊಮ್ಮೆ ಹೆಮ್ಮೆ ಪಡುವಂತ್ತಾಗಿದೆ.
ರಾಷ್ಟ್ರಪತಿಗಳಿಂದ ಮಹೇಶ್ ಅವರು ಪ್ರಶಸ್ತಿ ಸ್ವೀಕರಿಸುವ ಸಂದರ್ಭ ತಂದೆ ನಾಗರಾಜ್ ಹಾಗೂ ತಾಯಿ ಲಕ್ಷ್ಮಿ ಹಾಜರಿದ್ದು, ಪುತ್ರನ ಸಾಧನೆಗೆ ಆನಂದಭಾಷ್ಪ ಮೂಲಕ ಹರ್ಷ ವ್ಯಕ್ತಪಡಿಸಿದರು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಉಪಸ್ಥಿತರಿದ್ದರು.