ಕಾಸರಗೋಡು: ಇಟಲಿ ಹಾಗೂ ಬ್ರಿಟನ್ ಸೇರಿದಂತೆ ಯೂರೋಪ್ ದೇಶಗಳಿಂದ ಆಗಮಿಸುವವರು ಕ್ವಾರಂಟೈನ್ ಗೆ ತೆರಳಬೇಕು ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ತಿಳಿಸಿದ್ದಾರೆ.
ಕೋವಿಡ್ ನ ಹೊಸ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ರೋಗ ಲಕ್ಷಣ ಹೊಂದಿರುವವವರು ಕೂಡಲೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಭೇಟಿಯಾಗಬೇಕು ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೊರೋನಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಸಮಾರಂಭಗಳಿಗೆ ಗರಿಷ್ಟ 100 ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಕೋವಿಡ್ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.
ವಿವಾಹ ಸಹಿತ ಸಮಾರಂಭಗಳು, ಉತ್ಸವಗಳು ಇತ್ಯಾದಿಗಳನ್ನು ನಡೆಸುವ ಮುನ್ನ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನೋಂದಣಿ ನಡೆಸಬೇಕು.
ವಾರ್ಡ್ ಮಟ್ಟದ ಜನಜಾಗೃತಿ ಸಮಿತಿಗಳ ಸಭೆ ತುರ್ತು ನಡೆಸಿ ಚಟುವಟಿಕೆ ಚುರುಕುಗೊಳಿಸಬೇಕು ಎಂದವರು ಆದೇಶ ನೀಡಿದರು. ಸಭೆಯಲ್ಲಿ ಜಿಲ್ಲಾ ವಾರ್ತಧಿಕಾರಿ ಮಧೂಸೂದನನ್ ಎಂ., ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ, ಮಾಸ್ ಮಿಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್, ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞ ಜಿಲ್ಲಾ ಸಂಚಾಲಕ ದಿಲೀಪ್ ಕುಮಾರ್,ಮಾಸ್ಟರ್ ಯೋಜನೆ ಸಂಚಾಲಕಿ ವಿದ್ಯಾ ಪಿ.ಸಿ., ಕೆ.ಎಸ್.ಎಸ್.ಎಂ. ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್ ಮೊದಲಾದವರು ಉಪಸ್ಥಿತರಿದ್ದರು.