ಕಾಸರಗೋಡು: ಅಮಾನ್ಯಗೊಂಡ 500 ರೂ. ಮುಖಬೆಲೆಯ ಎರಡು ಲಕ್ಷ ರೂ. ಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬೆಳ್ತಂಗಡಿ ಮುಂಡಾಜೆಯ ಬಶೀರ್(42) ಮತ್ತು ಉಜಿರೆ ಹೈದರಾಲಿ ಕೌಂಪಾಡ್ ನ ಹಕೀಮ್ (43) ಎಂದು ಗುರುತಿಸಲಾಗಿದೆ.
ತಲೆಮರೆಸಿಕೊಂಡಿರುವ ಬದಿಯಡ್ಕ ನಾರಂಪಾಡಿಯ ನಿಜಾಮ್ ಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಉಕ್ಕಿನಡ್ಕದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಟಾಟಾ ಇಂಡಿಕಾ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅಮಾನ್ಯ ನೋಟುಗಳು ಪತ್ತೆಯಾಗಿದೆ.
500ರೂ.ಗಳ ಅಮಾನ್ಯಗೊಂಡ 401 ನೋಟುಗಳು ಪತ್ತೆಯಾಗಿದೆ. ಬಶೀರ್ ನಾರಂಪಾಡಿಯ ನಿಜಾಂ ಎಂಬಾತನಿಗೆ ಕಾರೊಂದನ್ನು ಮಾರಾಟ ಮಾಡಿದ್ದು, ಈ ಪೈಕಿ 4.10 ಲಕ್ಷ ರೂ. ವನ್ನು ಈ ಹಿಂದೆ ನೀಡಿದ್ದ. ಮೊದಲು 1.8 ಲಕ್ಷ ರೂ. ನೀಡಿದ್ದ. ಉಳಿದ ಮೊತ್ತವನ್ನು ಇಂದು(ಗುರುವಾರ) ನೀಡಬೇಕಿತ್ತು. ಆದರೆ ಹಣ ನೀಡಲು ವಿಳಂಬವಾಗುತ್ತಿರುವುದರಿಂದ ಅಮಾನ್ಯಗೊಂಡ 500ರೂ. ನೋಟುಗಳನ್ನು ನೀಡಿದ್ದಾಗಿ ಬಂಧಿತ ಬಶೀರ್ ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಆದರೆ ಬಂಧಿತರ ಹೇಳಿಕೆಯಲ್ಲಿ ಸಂಶಯ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಿಜಾಮ್ ನ ಮನೆಗೂ ಪೊಲೀಸರು ದಾಳಿ ನಡೆಸಿ ತಪಾಸಣೆ ನಡೆಸಿದ್ದು, ಮನೆಯಿಂದ ಬೇರೆ ನೋಟು ಅಥವಾ ದಾಖಲೆಗಳು ಲಭಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದ್ದು, ಬಳಿಕವಷ್ಟೇ ಅಮಾನ್ಯ ನೋಟುಗಳ ಸಾಗಾಟ ಪ್ರಕರಣ ಹಿಂದಿನ ಸತ್ಯಾಸತ್ಯತೆ ಬಯಲಿಗೆ ತರಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.