ಮಳವಳ್ಳಿ: ನವವಿವಾಹಿತರ ಶವ ತಾಲೂಕಿನ ಶಿವನಸಮುದ್ರ ಬಳಿಯ ಕಾವೇರಿ ನದಿಯಲ್ಲಿ ಪ್ರತ್ಯೇಕವಾಗಿ ದೊರೆತಿದ್ದು, ಇದು ಮರ್ಯಾದಾ ಹತ್ಯೆನಾ ಎಂಬ ಶಂಕೆ ವ್ಯಕ್ತವಾಗಿದೆ.
ತಮಿಳುನಾಡು ಮೂಲದ ಹೊಸೂರು ತಾಲೂಕಿನ ಚೂಡಗೌಂಡನಹಳ್ಳಿ ಗ್ರಾಮದ ನಂದೀಶ (26) ಹಾಗೂ ಅದೇ ಗ್ರಾಮದ ನಿವಾಸಿ ಸ್ವಾತಿ (19) ಎಂಬುವರೇ ಸಾವನ್ನಪ್ಪಿದ್ದು, ಅಂತರ್ ಜಾತಿ ಪ್ರೇಮವಿವಾಹ ಹಿನ್ನೆಲೆಯಲ್ಲಿ ಯುವತಿಯ ಕುಟುಂಬದವರೇ ಇವರನ್ನು ಹತ್ಯೆ ಮಾಡಿರಬಹುದೆಂಬ ಶಂಕೆಯನ್ನು ಪೊಲೀಸರು ಇದೀಗ ಶಂಕೆ ವ್ಯಕ್ತ ಪಡಿಸಿದ್ದಾರೆ.
ಕಳೆದ ಬುಧವಾರ ಶಿವನಸಮುದ್ರ ಬಳಿಯ ಕಾವೇರಿ ನದಿಯಲ್ಲಿ 20 ವರ್ಷ ವಯಸ್ಸಿನ ಅಪರಿಚಿತ ಯುವಕನ ಶವವೊಂದು ಪತ್ತೆಯಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಬೆಳಕವಾಡಿ ಪೊಲೀಸರು ಶವವನ್ನು ನದಿಯಿಂದ ಮೇಲೆತ್ತಿ ಪರಿಶೀಲಿಸಿದಾಗ ಯುವಕನ ಕೈಕಾಲುಗಳನ್ನು ಹಗ್ಗದಿಂದ ಬಿಗಿಯಲಾಗಿದ್ದು ಯಾರೋ ದುಷ್ಕರ್ಮಿಗಳು ಆತನ ಕೈಕಾಲುಗಳನ್ನು ಕಟ್ಟಿ ನೀರಿಗೆ ಎಸೆದು ಕೊಲೆಮಾಡಿರುವ ಶಂಕೆ ವ್ಯಕ್ತವಾಗಿತ್ತು.
ಇದರ ಬೆನ್ನಲ್ಲೇ ಮಾರನೇ ದಿನ ಗುರುವಾರ ಯುವಕನ ಶವ ಸಿಕ್ಕ ಜಾಗದಲ್ಲಿಯೇ ಯುವತಿಯ ಶವವೊಂದು ಪತ್ತೆಯಾಗಿದ್ದು ಆಕೆಯ ಕೈಕಾಲುಗಳನ್ನು ಅದೇ ರೀತಿ ಹಗ್ಗದಿಂದ ಕಟ್ಟಿ ನೀರಿಗೆ ಎಸೆದು ಕೊಲೆ ಮಾಡಲಾಗಿತ್ತು. ಇಬ್ಬರ ಶವ ಒಂದೇ ಮಾದರಿಯಲಿದ್ದರಿಂದ ಇವರಿಬ್ಬರೂ ಪ್ರೇಮಿಗಳಾಗಿದ್ದು ಇದೇ ಕಾರಣಕ್ಕೆ ಈ ಜೋಡಿ ಕೊಲೆ ನಡೆದಿರುವ ಬಲವಾದ ಶಂಕೆ ಪೊಲೀಸರಲ್ಲಿ ಮೂಡಿತ್ತು.
ನಂತರ ಶವಗಳ ಜಾಡು ಹಿಡಿದು ಹೊರಟ ಮಳವಳ್ಳಿ ಪೊಲೀಸರಿಗೆ ಮೃತ ಯುವಕ ಯುವತಿ ತಮಿಳುನಾಡು ಮೂಲದ ಹೊಸೂರು ತಾಲೂಕಿನ ಚೂಡಗೌಂಡನಹಳ್ಳಿ ಗ್ರಾಮದ ನಂದೀಶ ಹಾಗೂ ಅದೇ ಗ್ರಾಮದ ಸ್ವಾತಿ ಎಂದು ಗೊತ್ತಾಗಿತ್ತಲ್ಲದೆ, ಇವರಿಬ್ಬರು ಬೇರೆ ಬೇರೆ ಜಾತಿಯವರಿಗೆ ಸೇರಿದವರಾಗಿದ್ದರು.
ಹಾರ್ಡ್ವೇರ್ ಕಂಪನಿಯೊಂದರ ಉದ್ಯೋಗಿಯಾದ ನಂದೀಶ ಹಾಗೂ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಸ್ವಾತಿ ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇದಕ್ಕೆ ಯುವತಿ ಮನೆಯವರ ತೀವ್ರ ವಿರೋಧ ಇತ್ತೆನ್ನಲಾಗಿದ್ದು, ಇದೇ ವಿಚಾರಕ್ಕೆ ವರನ ಮನೆಯವರ ಬಳಿ ತೆರಳಿ ಸ್ವಲ್ಪ ಗಲಾಟೆ ಸಹ ಮಾಡಿದ್ದರೆಂದು ಗೊತ್ತಾಗಿದೆ. ಈ ಘಟನೆ ಬಳಿಕ ತಾನು ವ್ಯಾಸಂಗ ಮಾಡುತ್ತಿದ್ದ ಕೃಷ್ಣಗಿರಿ ಕಾಲೇಜಿನಿಂದ ಟಿಸಿ ತರುವುದಾಗಿ ಹೇಳಿ ಹೋದ ಸ್ವಾತಿ ವಾಪಸ್ಸು ಮನೆಗೆ ಬಾರದ ನಂದೀಶನ ಜೊತೆ ಅವರ ಮನೆಗೆ ಹೋಗಿ ಉಳಿದುಕೊಂಡಿದ್ದಳಲ್ಲದೆ ಇಬ್ಬರು ಮದುವೆ ಸಹ ಆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಅಜ್ಞಾತ ಸ್ಥಳದಲ್ಲಿದ್ದ ಇವರನ್ನು ಸ್ವಾತಿ ಮನೆಯವರು ಹುಡುಕುತ್ತಿರುವಾಗಲೇ ಕಳೆದ 10 ರಂದು ಹೊಸೂರಿನಲ್ಲಿ ಖ್ಯಾತ ಚಿತ್ರನಟ ಕಮಲ್ಹಾಸನ್ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದಕ್ಕೆ ಬಂದಿದ್ದಾ ಸ್ವಾತಿ ಅವರ ಸಂಬಂಧಿಯೊಬ್ಬರ ಕಣ್ಣಿಗೆ ಬಿದ್ದು ಆತ ಈ ವಿಷಯವನ್ನು ಯುವತಿಯ ಪೋಷಕರಿಗೆ ತಿಳಿಸಿದನಂತೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ವಾತಿ ತಂದೆ ಸೇರಿದಂತೆ ಇತರೆ ನಾಲ್ವರು ಯುವ ಜೋಡಿಯನ್ನು ಭೇಟಿ ಮಾಡಿ ಆಗಿದ್ದು ಆಗಿ ಹೋಯಿತು. ಪೊಲೀಸ್ ಠಾಣೆಗೆ ಹೋಗಿ ಈ ವಿಷಯವನ್ನು ರಾಜಿ ಮಾಡಿಕೊಳ್ಳೋಣ ಬನ್ನಿ ಎಂದು ಪುಸಲಾಯಿಸಿ ಟಾಟಾ ಸುಮೋ ಹತ್ತಿಸಿಕೊಂಡು ನೈಸ್ ರಸ್ತೆ ಮೂಲಕ ಕನಕಪುರ ಮಾರ್ಗವಾಗಿ ಹೋಗುತ್ತಿದ್ದಂತೆ ನಂದೀಶ ಪೊಲೀಸ್ ಠಾಣೆಗೆ ಎಂದು ಹೇಳಿ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದೀರಿ ಎಂದು ಕೇಳಿದನಂತೆ ಅದಕ್ಕೆ ಕಾರಿನಲ್ಲಿದ್ದವರು ಮುಂದೆ ದೇವಸ್ಥಾನವೊಂದು ಇದೆ ಅಲ್ಲಿ ಪೂಜೆ ಮಾಡಿಸೋಣ ಎಂದು ಹೇಳಿ ಶಿವನಸಮುದ್ರದ ಬಳಿಯ ಕಾವೇರಿ ನದಿ ದಡಕ್ಕೆ ರಾತ್ರಿ 3ಗಂಟೆ ಸುಮಾರಿಗೆ ಕರೆತಂದಿದ್ದಾರಂತೆ.
ಅಲ್ಲಿ ಕಾರಿನಿಂದ ಇಬ್ಬರನ್ನು ಇಳಿಸಿದ ಆರೋಪಿಗಳು ನಿಮ್ಮಿಂದ ನಮ್ಮ ಮನೆತನದ ಮರ್ಯಾದೆ ಹಾಳಾಗಿರುವುದೆಲ್ಲದೆ ನಮ್ಮ ಜಾತಿಗೆ ಅವಮಾನ ಮಾಡಿದ್ದೀಯಾ ಎಂದು ಕೆಂಡಾಮಂಡಲವಾದರಲ್ಲದೆ, ಮೊದಲು ನಂದೀಶನಿಗೆ ಥಳಿಸಿ ಆತನ ಕೈಕಾಲು ಕಟ್ಟಿ ನದಿಗೆ ಎಸೆದಿದ್ದಾರೆ. ನಂತರ ಸ್ವಾತಿಯನ್ನೂ ಮನಬಂದಂತೆ ಥಳಿಸಿ ಆಕೆಯ ಕಾಲುಗಳನ್ನು ಕಟ್ಟಿ ನದಿಗೆ ಎಸೆದಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಯುವತಿ ತಂದೆ, ದೊಡ್ಡಪ್ಪ ಸೇರಿದಂತೆ ಐವರ ವಿರುದ್ದ ಪ್ರಕರಣ ದಾಖಸಿಸಿಕೊಂಡಿರುವ ಬೆಳಕವಾಡಿ ಪೊಲೀಸರು ಆರೋಪಿಗಳ ಸುಳಿವು ಪತ್ತೆಹಚ್ಚಿದ್ದು ಶೀಘ್ರ ಬಂಧಿಸಿ ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ.