ಶ್ರೀನಗರ: ಕಾಶ್ಮೀರದಲ್ಲಿನ‌ ಹಿಮಪಾತದಿಂದಾಗಿ ಶ್ರೀನಗರಕ್ಕೆ ಆಗಮಿಸಬೇಕಿದ್ದ ಸುಮಾರು 50 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಯೊಬ್ಬರು, “ಪ್ರತಿಕೂಲ ಹವಾಮಾನ ಹಾಗೂ ಶ್ರೀನಗರ ವಿಮಾನ ನಿಲ್ದಾಣದಲ್ಲಿ ನಿರಂತರವಾಗಿ ಹಿಮಪಾತವಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀನಗರಕ್ಕೆ ಆಗಮಿಸಬೇಕಿದ್ದ ವಿಮಾನಗಳ ಹಾರಾಟವನ್ನು ವಿಮಾನ ಯಾನ ಸಂಸ್ಥೆಗಳು ರದ್ದುಗೊಳಿಸಿವೆ” ಎಂದು ಹೇಳಿದ್ದಾರೆ.

“ಹಿಮಪಾತದಿಂದಾಗಿ ಶ್ರೀನಗರ ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ತಲಾ 25 ವಿಮಾನಗಳು ಸೇರಿದಂತೆ ಸುಮಾರು 50 ವಿಮಾನಗಳು ರದ್ದುಗೊಂಡಿವೆ” ಎಂದು ವರದಿಯಾಗಿದೆ.

ಶ್ರೀನಗರ ವಿಮಾನ ನಿಲ್ದಾಣಕ್ಕೆ ನಿಗದಿಗಿಂತ ಇನ್ನೂ ನಾಲ್ಕು ಹೆಚ್ಚುವರಿ ವಿಮಾನಗಳು ಆಗಮಿಸುವ ವೇಳಾಪಟ್ಟಿ ಇತ್ತು. ಆದರೆ, ಪ್ರತಿಕೂಲ ಹವಾಮಾನದ ಕಾರಣಕ್ಕೆ ಅವು ಕಾರ್ಯಾಚರಣೆ ನಡೆಸುವ ಸಾಧ್ಯತೆ ಇಲ್ಲ ಅಧಿಕಾರಿಗಳು ತಿಳಿಸಿದ್ದಾರೆ.