ತಿರುವನಂತಪುರಂ: ಯಾವುದೇ ದುಸ್ಸಾಹಸಕ್ಕೆ ಕೈ ಹಾಕಬೇಡಿ. ಒಂದು ವೇಳೆ ದುಸ್ಸಾಹಸ ಮಾಡಿದರೆ ಊಹಿಸಲಸಾಧ್ಯ ಪ್ರತಿಕ್ರಿಯೆ ಕೊಡುತ್ತೇವೆ ಎಂದು ಪಾಕಿಸ್ತಾನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಎಚ್ಚರಿಕೆ ಕೊಟ್ಟಿದ್ದಾರೆ.

ತಿರುವನಂತಪುರಂನಲ್ಲಿ ಸೈನಿಕ ಸಮ್ಮಾನ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಮ್ಮ ನೆರೆಯ ರಾಷ್ಟ್ರವು ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ದುಸ್ಸಾಹಸಕ್ಕೆ ಕೈ ಹಾಕಬಹುದು. ಒಂದು ವೇಳೆ ಹಾಗೆ ಮಾಡಿದರೆ, ಭಾರತದ ಪ್ರತಿಕ್ರಿಯೆಯೂ ಅಷ್ಟೇ ಕಠೋರವಾಗಿರುತ್ತದೆ. ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ ಎಂದು ತಿಳಿಸಿದ್ದಾರೆ.

ಉಸಿರುಗಟ್ಟಿದ ಹಾರ್ಮುಜ್ ಜಲಸಂಧಿಯ ಮೂಲಕ ಭಾರತೀಯ ನೌಕಾಪಡೆಯ ಹಡಗುಗಳು ದೇಶದ ಟ್ಯಾಂಕರ್‌ಗಳನ್ನು ಸುರಕ್ಷಿತವಾಗಿ ಕರೆದೊಯ್ಯುತ್ತಿವೆ ಎಂದು ರಾಜನಾಥ್‌ ಸಿಂಗ್ ಹೇಳಿದ್ದಾರೆ. ‌ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಈ ಸಂಘರ್ಷದ ಬಗ್ಗೆ ಕೆಲವರು ಸುಳ್ಳುಗಳನ್ನು ಹರಡುವ ಮೂಲಕ ಭೀತಿ ಮೂಡಿಸಲು ಬಯಸುತ್ತಾರೆ. ದೇಶದಲ್ಲಿ ಪೆಟ್ರೋಲ್-ಡೀಸೆಲ್ ಕೊರತೆಯೂ ಇಲ್ಲ. ಅನಿಲದ ಕೊರತೆಯೂ ಇಲ್ಲ. ಯಾವುದೇ ಇಂಧನ ಬಿಕ್ಕಟ್ಟನ್ನು ಎದುರಿಸಲು ಭಾರತ ಸಿದ್ಧವಾಗಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ದೇಶದೊಂದಿಗೆ ನಿಲ್ಲುವ ಬದಲು, ಕ್ಷುಲ್ಲಕ ರಾಜಕೀಯದಲ್ಲಿ ತೊಡಗಿದ್ದಾರೆಂದು ವಿಪಕ್ಷಗಳನ್ನು ಟೀಕಿಸಿದ್ದಾರೆ.

ಇಂದು ನಾವೆಲ್ಲರೂ ಪ್ರಮುಖ ಬದಲಾವಣೆಗಳ ಹಂತದ ಮೂಲಕ ಸಾಗುತ್ತಿದ್ದೇವೆ. ಪಶ್ಚಿಮ ಏಷ್ಯಾದಲ್ಲಿ ಒಂದು ಪ್ರಮುಖ ಸಂಘರ್ಷ ನಡೆಯುತ್ತಿದೆ. ಕೇರಳದ ಅನೇಕ ಜನರು ಈ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. ಆದರೆ, ನಾವು ಚಿಂತಿಸಬಾರದು. ಏಕೆಂದರೆ ನಮ್ಮ ಭಾರತೀಯ ನಾಗರಿಕರ ರಕ್ಷಣೆ ಮತ್ತು ಸುರಕ್ಷತೆಗಾಗಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ನಾವು ಹಿಂದುಳಿಯುವುದಿಲ್ಲ. ನಾವು ಇದಕ್ಕೆ ಸಂಪೂರ್ಣವಾಗಿ ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.