ಢಾಕಾ: ಮಲೇಷಿಯಾಗೆ ತೆರಳುತ್ತಿದ್ದ ದೋಣಿ ಮುಳುಗಿದ ಪರಿಣಾಮ ಅಂಡಮಾನ್‌ ಸಮುದ್ರದಲ್ಲಿ ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶಿಗರು ಸೇರಿ ಕನಿಷ್ಠ 250 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರು ಮತ್ತು ವಲಸೆ ಸಂಸ್ಥೆ ತಿಳಿಸಿದೆ.

ಘಟನೆ ನಡೆದ ವೇಳೆ ಮತ್ತು ಕಾರ್ಯಾಚರಣೆಯ ಮಾಹಿತಿಯು ಇದುವರೆಗೂ ಲಭ್ಯವಾಗಿಲ್ಲ. ಬಾಂಗ್ಲಾದೇಶದ ದಕ್ಷಿಣ ಭಾಗದ ಕಾಕ್ಸ್ ಬಜಾರ್ ಜಿಲ್ಲೆಯ ಟೆಕ್ನಾಫ್‌ನಿಂದ ಹೊರಟ ದೋಣಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಮಲೇಷಿಯಾಗೆ ಪ್ರಯಾಣ ಬೆಳೆಸಿದ್ದರು ಎಂದು ಯುಎನ್‌ಎಚ್‌ಸಿಆರ್ ಮತ್ತು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಹೆಚ್ಚಿನ ಜನಸಂಖ್ಯೆ, ಬಲವಾದ ಗಾಳಿ ಮತ್ತು ಸಮುದ್ರ ಮಾರುತಗಳಿಂದ ದೋಣಿ ಮುಳುಗಿರುವ ಸಾಧ್ಯತೆಯಿದೆ ಎಂದು ಹೇಳಿವೆ. ಈ ಘಟನೆಯು ರೋಹಿಂಗ್ಯಾಗಳ ಪುರ್ನವಸತಿ ಕುರಿತು ಪ್ರಶ್ನೆಗಳನ್ನು ಎತ್ತಿದೆ. ಮಯನ್ಮಾರ್‌ನ ರಾಖೈನ್‌ ಪ್ರದೇಶದಲ್ಲಿ ಹಿಂಸಾಚಾರವು ಮುಂದುವರೆದಿದ್ದು, ಅವರು ಮರಳಿ ಅಲ್ಲಿಗೆ ಹಿಂದಿರುಗುವುದು ಅನಿಶ್ಚಿತವಾಗಿದೆ. ನಿರಾಶ್ರಿತ ಶಿಬಿರಗಳಲ್ಲಿ ಮಾನವೀಯ ನೆರವು ಸೀಮಿತವಾಗಿರುವುದು, ನಿರುದ್ಯೋಗ ಮತ್ತು ಶಿಕ್ಷಣದ ಸೌಲಭ್ಯಗಳು ಇಲ್ಲದೇ ಇರುವುದು ಅವರನ್ನು ಅಪಾಯಕಾರಿ ಸಮುದ್ರ ಪ್ರಯಾಣಗಳಿಗೆ ತಳ್ಳುತ್ತಿದೆ. ವಿದೇಶಗಳಲ್ಲಿ ಉತ್ತಮ ಅವಕಾಶ ಸಿಗುವ ಭರವಸೆಯಿಂದ ಅಪಾಯಗಳಿಗೆ ಗುರಿಯಾಗುತ್ತಿದ್ದಾರೆ ಎಂದು ತಿಳಿಸಿದೆ.