ಶಾರ್ಜಾ (ಯು.ಎ.ಇ.) ನ.6: ಜಗತ್ತಿನಲ್ಲೇ ಅದ್ವಿತೀಯವಾದ ಸುಮಾರು ಅಂತರ್ ರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಸತತ ಆರನೆಯ ಬಾರಿ ಕನ್ನಡ ಭಾಷೆಯನ್ನು ಪ್ರತಿನಿಧಿಸಿ ಭಾಗವಹಿಸುತ್ತಿರುವ ಕರ್ನಾಟಕದ ಏಕೈಕ ಪುಸ್ತಕ ಮಳಿಗೆ ಶಾಂತಿ ಪ್ರಕಾಶನದ ಉದ್ಘಾಟನಾ ಸಮಾರಂಭವು ನವೆಂಬರ್ ೦೨ ರಂದು ಶಾರ್ಜಾ ಎಕ್ಸ್ ಪೋ ಸೆಂಟರಿನಲ್ಲಿ ನಡೆಯಿತು.
ಮಳಿಗೆಯ ಉದ್ಘಾಟನೆಯನ್ನು ಖ್ಯಾತ ಉದ್ಯಮಿ ರಾಮಚಂದ್ರ ಹೆಗಡೆ (ವ್ಯವಸ್ಥಾಪಕರು ಸ್ಪ್ರೇ ಟೆಕ್ ಕೋಟಿಂಗ್ ಆ್ಯಂಡ್ ಕಾಂಟ್ರಾಕ್ಟಿಂಗ್) ನಿರ್ವಹಿಸಿ ಮಾತನಾಡುತ್ತಾ ಅಂತರ್ ರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಕನ್ನಡದ ಪುಸ್ತಕಗಳನ್ನು ಪ್ರದರ್ಶಿಸುವ ಮೂಲಕ ಕನ್ನಡ ಭಾಷೆಯನ್ನು ಬೆಳೆಸಲು ಶ್ರಮಿಸುತ್ತಿರುವ ಶಾಂತಿ ಪ್ರಕಾಶನದ ಶ್ರಮ ಶ್ಲಾಘನೀಯವಾಗಿದೆ ಎಂದರು.
ಖ್ಯಾತ ಲೇಖಕಿ ಕುಲ್ಸುಮ್ ಅಬೂಬಕ್ಕರ್ ಬರೆದ ಶಾಂತಿ ಪ್ರಕಾಶನದ ‘ಹಿಜಾಬ್’ ಎಂಬ ಕೃತಿಯನ್ನು ಶ್ರೀ ಶ್ರೀ ತತ್ವ ಪಂಚಕರ್ಮ ಆಯುರ್ವೇದ ಕೇಂದ್ರ ದುಬೈ ಇದರ ಮೆಡಿಕಲ್ ಡೈರೆಕ್ಟರ್ ಡಾ. ಮಮತಾ ರೆಡ್ಡೆರ್ ಅವರು ರೇಡಿಯೋ ಖುಷಿ ಇದರಲ್ಲಿನ ಕನ್ನಡ ನಿರೂಪಕಿ ಕುಮಾರಿ ಆರ್. ಜೆ. ಕೃತಿಕಾ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.
ಶಾಂತಿ ಪ್ರಕಾಶನ ಪ್ರಕಟಿತ ಇನ್ನೊಂದು ಕೃತಿ ‘ಪ್ರವಾದಿ ಮುಹಮ್ಮದ್ ಸ ಅ ರವರ ವಿವಾಹಗಳು ಮತ್ತು ವಿಮರ್ಶೆಗಳು’ ಎಂಬ ಪುಸ್ತಕವನ್ನು ನಮ್ಮ ನಾಡ ಒಕ್ಕೂಟ ಇದರ ಅಧ್ಯಕ್ಷರಾದ ಮುಹಮ್ಮದ್ ಸಲೀಮ್ ಅವರು ಬಿಡುಗಡೆಗೊಳಿಸಿ ದುಬೈ ಹೆಮ್ಮೆಯ ಕನ್ನಡಿಗರು ಇದರ ಸದಸ್ಯರಾದ ಶ್ರೀಮತಿ ಹಾದಿಯ ಮಂಡ್ಯ ರವರಿಗೆ ನೀಡಿದರು.
ಸಭೆಯನ್ನುದ್ದೇಶಿಸಿ ಡಾ ಮಮತಾ ರೆಡ್ಡೆರ್, ಆರ್ ಜೆ ಕೃತಿಕ, ನೋಯೆಲ್ ಡಿ. ಅಲ್ಮೇಡ ಮುಂತಾದವರು ಮಾತನಾಡಿದರು. ಸಮಾರಂಭದ ಆರಂಭದಲ್ಲಿ ಅಬ್ದುಲ್ ಸಲಾಂ ದೇರಳಕಟ್ಟೆ ಕುರ್ ಆನಿನ ಸೂಕ್ತವನ್ನು ಪಠಿಸಿ ಅದರ ಕನ್ನಡ ವ್ಯಾಖ್ಯಾನವನ್ನು ನೀಡಿದರು. ಆಸಿಫ್ ಮಲ್ಪೆ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಕಾರ್ಯಕ್ರವನ್ನು ನಿರೂಪಿಸಿದ ಅಬ್ದುಲ್ ಖಾದರ್ ಕುಕ್ಕಾಜೆಯವರು ಆರಂಭದಲ್ಲಿ ಅತಿಥಿಗಳನ್ನು ಸ್ವಾಗತಿಸಿದರು ಕೊನೆಯಲ್ಲಿ ಮುಹಮ್ಮದ್ ನಿಸಾರ್ ಧನ್ಯವಾದವಿತ್ತರು.
ನವಂಬರ್ ಎರಡರಂದು ಆರಂಭವಾದ ಈ ಪುಸ್ತಕ ಮೇಳವು ನವಂಬರ್ 13 ರವರೆಗೂ ವೈವಿಧ್ಯ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಆದ್ದರಿಂದ ಶಾರ್ಜಾ ಎಕ್ಸ್ಪೋ ಸೆಂಟರ್ ನಲ್ಲಿನ ಕ್ರಮಾಂಕ ಏಳನೇ ಸಭಾಂಗಣದಲ್ಲಿನ ZA-10 ಮಳಿಗೆಗೆ ಎಲ್ಲಾ ಅನಿವಾಸಿ ಕನ್ನಡಿಗರು ಭೇಟಿ ನೀಡುವುದಲ್ಲದೆ (ಯು. ಎ. ಇ. ಯಾದ್ಯಂತವಿರುವ ಕನ್ನಡ ಸಂಘಗಳು 13.11.2022 ರ ಭಾನುವಾರದಂದು ಕನ್ನಡ ರಾಜ್ಯೋತ್ಸವ ಬಗೆಗಿನ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿರುವ ಕಾರಣ) ದಿನಾಂಕ 12.11.2022 ರ ಶನಿವಾರದಂದು ನಡೆಯಲಿರುವ ನಮ್ಮ ಕನ್ನಡ ಮಳಿಗೆಯ ಸಮಾರೋಪ ಸಮಾರಂಭದಲ್ಲಿ ಕೂಡಾ ತಾವೆಲ್ಲರೂ ಭಾಗವಹಿಸಿ ಸಹಕರಿಸುವಂತೆ ಶಾಂತಿ ಪ್ರಕಾಶನ ಸಂಸ್ಥೆಯ ಅನಿವಾಸಿ ಕನ್ನಡಿಗ ವ್ಯವಸ್ಥಾಪಕರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.