ದುಬೈ: ಗಲ್ಫ್ ದೇಶದಲ್ಲಿ ಸಾಧನೆ ಮಾಡಿರುವ ಕರ್ನಾಟಕದ ಅನರ್ಘ್ಯ ರತ್ನಗಳ ಸಮಾವೇಶ ದುಬಾಯಿಯ ಹೃದಯಭಾಗದಲ್ಲಿ ಸೆಪ್ಟೆಂಬರ್ ೧೦ರಂದು ನಡೆಯಲಿದೆ.
ಯು.ಎ.ಇ.ಯಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ಅದ್ಧೂರಿ ಸಮಾರಂಭಕ್ಕೆ ವಿಶ್ವದ ವಿವಿಧ ಭಾಗಗಳ ಗಣ್ಯರು ಪಾಲ್ಗೊಳ್ಳಲಿದ್ದು, ಕಲಾ ತಂಡಗಳ ಆಕರ್ಷಕ ವರ್ಣ ರಂಜಿತ ಪ್ರದರ್ಶನ, ಸಹ ಭೋಜನ ಕಾರ್ಯಕ್ರಮ ನಡೆಯಲಿದೆ. ಗಲ್ಫ್ ಕರ್ನಾಟಕ ಉತ್ಸವ ಸಮಿತಿಯ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಗಲ್ಫ್ ಕರ್ನಾಟಕೋತ್ಸವದಲ್ಲಿ ಕರ್ನಾಟಕ ಮೂಲದ ಗಲ್ಫ್ ದೇಶದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಈ ವರ್ಷ ಪ್ರದಾನಿಸಲಾಗುವ “ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿ ೨೦೨೩” ದುಬಾಯಿಯ ಪ್ರತಿಷ್ಠಿತ ಗ್ರ್ಯಾಂಡ್ ಹಯಾತ್ ಬನಿಯಾಸ್ ಬಾಲ್ ರೂಂ ಸಭಾಂಗಣದಲ್ಲಿ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಸಮಾರಂಭದ ಮುಖ್ಯ ಅತಿಥಿಯಾಗಿ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ಗೌರವ ಅತಿಥಿಯಾಗಿ ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರು ಯು. ಟಿ. ಖಾದರ್ ಮತ್ತು ಯು.ಎ.ಇ. ಯ ಆಡಳಿತ ದೊರೆಗಳ ಮನೆತನದ ಗೌರವಾನ್ವಿತರು ಪಾಲ್ಗೊಳ್ಳಲಿದ್ದಾರೆ. ಗಲ್ಫ್ ಕರ್ನಾಟಕೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಕನ್ನಡಿಗರು ಆಗಮಿಸಲಿದ್ದಾರೆ. ಸಮಾರಂಭದ ಸುಂದರ ಸಂಜೆಯಲ್ಲಿ ಕರ್ನಾಟಕ ಕಲಾವೈಭವದ ಅನಾವರಣ, ಯಕ್ಷಗಾನ, ಹುಲಿವೇಷ, ಆಕರ್ಷಕ ವರ್ಣ ರಂಜಿತ ನೃತ್ಯ ಸೊಬಗು, ಖ್ಯಾತ ರಸಮಂಜರಿ ತಂಡದಿಂದ ಸಂಗೀತ ಸಂಜೆ ನಡೆಯಲಿದೆ. ಗಲ್ಫ್ ಕರ್ನಾಟಕೋತ್ಸವದಲ್ಲಿ ಮಾಧ್ಯಮಗಳು ವಿಶೇಷ ಪಾತ್ರ ವಹಿಸಲಿದೆ. ಪ್ರಮುಖ ವಾಹಿನಿಗಳು ಸಮಾರಂಭದ ನೇರ ಪ್ರಸಾರದ ಮೂಲಕ ವಿಶ್ವದಾದ್ಯಂತ ವೀಕ್ಷಕರಿಗೆ ಮುಟ್ಟಿಸಲು ಸಜ್ಜಾಗಿದೆ.
ಗಲ್ಫ್ ಕರ್ನಾಟಕೋತ್ಸವ – ಪಕ್ಷಿನೋಟ
ಗಲ್ಫ್ ಕರ್ನಾಟಕೋತ್ಸವ ವಾರ್ಷಿಕ ಅನಿವಾಸಿ ಕನ್ನಡಿಗರ ಸರ್ವ ಧರ್ಮ ಸಮನ್ವಯಕ್ಕೆ ಸಾಕ್ಷಿಯಾಗುವ ಅಂತರಾಷ್ಟ್ರೀಯ ಉತ್ಸವವಾಗಿದ್ದು ಗಲ್ಫ್ ದೇಶದಲ್ಲಿ ಸಾಧನೆ ಮಾಡಿರುವವರ ಸಾಧನೆಯನ್ನು ಪುರಸ್ಕರಿಸುವ ವೇದಿಕೆಯಾಗಿದೆ. ನಡೆದು ಬಂದಿರುವ ಹಾದಿಯ ಮೇಲೆ ಬೆಳಕು ಚೆಲ್ಲುವ ದಾಖಲೆಗಳ ಸಂಪುಟದ ಅನಾವರಣ ಹಾಗೂ ಅಭಿಮಾನಿ ಅನಿವಾಸಿ ಕನ್ನಡಿಗರ ಸಮಾವೇಶವಾಗಿದೆ.