ದುಬೈ: ದುನಿಯಾ ಸೂರಿ ನಿರ್ದೇಶನದ, ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಬ್ಯಾಡ್ ಮ್ಯಾನರ್ಸ್” ಪ್ರಥಮ ಅಂತಾರಾಷ್ಟ್ರೀಯ ಪ್ರೀಮಿಯರ್ ಶೋ ದುಬೈಯಲ್ಲಿ ಡಿಸೆಂಬರ್ 3ರಂದು ಅದ್ದೂರಿಯಾಗಿ ನಡೆಯಿತು.
‘ಓವರ್ಸೀಸ್ ಮೂವೀಸ್ ಗಲ್ಫ್’ ಸ್ಥಾಪಕ ಸೆಂಥಿಲ್ ಕುಮಾರ್ ಮತ್ತು ಪೀಟರ್ ಜಾಯ್ಸನ್ ಹಾಗೂ ದುಬೈನ ಉದ್ಯಮಿ ಹರೀಶ್ ಬಂಗೇರ ಇವರೆಲ್ಲರ ಮುಂದಾಳತ್ವದಲ್ಲಿ ದುಬೈನ ಹಯಾತ್ ರೇಜೆನ್ಸೀಯ ಸ್ಟಾರ್ ಗಲ್ಲೇರಿಯಾ ಥೀಯೇಟರ್ ನಲ್ಲಿ ಪ್ರೀಮಿಯರ್ ಶೋ ಅನಿವಾಸಿ ಕನ್ನಡಿಗರ ಮನಗೆದ್ದಿತು.
ಬ್ಯಾಡ್ ಮ್ಯಾನರ್ಸ್ ಪ್ರೀಮಿಯರ್ ಶೋ ಗೆ ಅತಿಥಿಯಾಗಿ ಆಗಮಿಸಿದ್ದ ನಾಯಕನಟ ಅಭಿಷೇಕ್ ಅಂಬರೀಷ್ ಅವರಿಗೆ ಬಹಳ ವಿಜೃಂಭಣೆಯಿಂದ ಸ್ವಾಗತ ನೀಡಲಾಯಿತು. ತುಂಬಿದ ಚಿತ್ರಮಂದಿರದಲ್ಲಿ ಅನಿವಾಸಿ ಕನ್ನಡಿಗರೊಂದಿಗೆ ಚಿತ್ರ ವೀಕ್ಷಿಸಿದ ನಂತರ ಮಾತನಾಡಿದ ಅಭಿಷೇಕ್, ನಿಮ್ಮ ಪ್ರೀತಿಗೆ ಮತ್ತು ನಮ್ಮ ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ನೀವು ನೀಡಿರುವ ಬೆಂಬಲಕ್ಕೆ ನಾನು ಚಿರಋಣಿ, ಇದೇ ರೀತಿಯ ಬೆಂಬಲ ಕನ್ನಡ ಎಲ್ಲಾ ಚಿತ್ರಗಳಿಗೂ ನೀಡಿ, ಕನ್ನಡ ಚಿತ್ರರಂಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಮಾತನಾಡಿ, ನಾವು ಎಲ್ಲಾ ಕನ್ನಡ ಚಿತ್ರಗಳನ್ನು ಬೆಂಬಲಿಸುತ್ತಾ ಬಂದಿದ್ದೇವೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಉತ್ಸಾಹದೊಂದಿಗೆ ಬೆಂಬಲಿಸಲು ತಯಾರಿದ್ದೇವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅಭಿಷೇಕ್ ಅಂಬರೀಷ್ ಹಾಗೂ ಅಯೋಗ್ಯ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಅವರನ್ನು ಪೀಟರ್ ಜಾಯ್ಸನ್, ಸೆಂಥಿಲ್ ಕುಮಾರ್ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.