ಮುಂಬಯಿ: ಇಲ್ಲಿನ ಕರ್ವೆ ನಗರದ ಮಹಾಲಕ್ಷ್ಮೀ ಲಾನ್ಸ್ ನಲ್ಲಿ ತುಳು ಕೂಟ ಪುಣೆ ವತಿಯಿಂದ 19ನೇ ವಾರ್ಷಿಕೋತ್ಸವ ಸೋಮವಾರ ಅದ್ದೂರಿಯಾಗಿ ನಡೆಯಿತು.
ಮುಖ್ಯ ಅತಿಥಿಯಾಗಿ ಉಪಸ್ಥಿತ ಯುಎಇ ತುಳುವೆರ್ ಇದರ ಮುಖ್ಯ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ಉಪಸ್ಥಿತರಿದ್ದು, ಸದಾನಂದ ಕೆ.ಶೆಟ್ಟಿ ಮತ್ತಿತರ ಗಣ್ಯರು ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆಯನ್ನಿತ್ತರು.
ತುಳು ಕೂಟ ಪುಣೆ ಇದರ ಕಾರ್ಯಕ್ರಮ ಅಚ್ಚುಕಟ್ಟು, ಸುಂದರವಾಗಿ ಮೂಡಿಬಂದಿದ್ದು ಸಂಸ್ಥೆಯ ಶಿಸ್ತುಬದ್ಧತೆ ಪ್ರಶಂಶನೀಯ. ಕಪ್ಪುಕತ್ತಲೆಯಲ್ಲಿಯೂ ಬೆಳಕಿನ ಚುಕ್ಕಿಯಂತೆ ಎದ್ದು ಕಾಣುವ ವಿಶೇಷತೆ ನಮ್ಮ ತುಳುವರದ್ದು. ತುಳುನಾಡ ಜನತೆ ಮಾತಾಪಿತರಿಗೆ ನೀಡುವ ಗೌರವ, ದೈವದೇವರುಗಳ ಮೇಲಿನ ಶ್ರದ್ಧಾಭಕ್ತಿ, ಸಂಸ್ಕೃತಿ ಸಂಪ್ರದಾಯಗಳಿನ ಒಲವುಗಳೆಲ್ಲವೂ ಪುಣ್ಯಾಧಿಗಳಾಗಿವೆ. ತುಳುನಾಡಿನ ಮಣ್ಣಿನ ಸೊಗಡು ಈ ಪುಣೆಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ತುಳುವರನ್ನು ಒಗ್ಗೂಡಿಸಿದೆ. ನಮ್ಮ ತರೂರ ಮಾತೃಭಾಷೆ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಂಡು ಮನೆಯಲ್ಲಿ ತುಳು ಭಾಷೆಯನ್ನು ಮಕ್ಕಳಿಗೆ ಕಲಿಸಬೇಕು. ಮಾತೃಭಾಷೆಯ ಬಗೆಗಿನ ಕೀಳರಿಮೆ ದೂರವಾಗಿಸಿ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ದೇಶದ ಸಣ್ಣ ಸಣ್ಣ ಪ್ರಾದೇಶಿಕ ಭಾಷೆಗಳೂ ಸೇರ್ಪಡೆಯಾಗಿದ್ದು ತುಳುಭಾಷೆ ಯಾಕಿಲ್ಲ.? ಇದಕ್ಕಾಗಿ ತುಳುವರೆಲ್ಲರೂ ಒಗ್ಗಟ್ಟಾಗಿ ದನಿಗೂಡಿಸಬೇಕಾಗಿದೆ. ಬರುವ ಡಿಸಂಬರ್ ನಲ್ಲಿ ಬದಿಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳುವೆರೆ ಆಯನದಲ್ಲಿ ಸಕ್ರೀಯರಾಗಿ ಪಾಲ್ಗೊಂಡು ಪುಣೆ ತುಳು ಕೂಟವನ್ನೂ ಮೆರೆಸಬೇಕು ಎಂದು ಸರ್ವೋತ್ತಮ ಶೆಟ್ಟಿ ಹೇಳಿದರು.
ತುಳು ಕೂಟ ಪುಣೆ ಅಧ್ಯಕ್ಷ ತಾರಾನಾಥ ಕೆ.ರೈ ಮೇಗಿನಗುತ್ತು ಅಧ್ಯಕ್ಷತೆಯಲ್ಲಿ ಜರುಗಿದ ಗೌರವ ಅತಿಥಿಗಳಾಗಿ ಸಾಹಿತಿ, ಕವಿ ಶಿಮಂತೂರು ಚಂದ್ರಹಾಸ ಸುವರ್ಣ ಮುಂಬಯಿ ಮತ್ತು ಬಂಟ್ಸ್ ಅಸೋಸಿಯೇಶನ್ ಪುಣೆ ಅಧ್ಯಕ್ಷ ಜಯ ಶೆಟ್ಟಿ ಮಿಯ್ಯಾರ್ ಉಪಸ್ಥಿತರಿದ್ದು, ಸದಾನಂದ ಹೊಟೇಲು ಸಮೂಹದ ಆಡಳಿತ ನಿರ್ದೇಶಕ ಹಾಗೂ ಶ್ರೀ ಗುರುದೇವಾ ಸೇವಾ ಬಳಗ ಪುಣೆ ಅಧ್ಯಕ್ಷ ಸದಾನಂದ ಕೆ.ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಿದರು. ನಂತರ ಸಂಘದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕರಿಸಿ ಗೌರವಿಸಿದರು.
ಇಂದು ನಮ್ಮ ತುಳುನಾಡಿನ ವ್ಯಾಪ್ತಿಯೂ, ಭಾಷೆಯ ಬಳಕೆಯೂ ಕಡಿಮೆಯಾಗುತ್ತಾ ಬರುತ್ತಿದೆ. ಇಂದು ತುಳುನಾಡಿನ ದೈವ ದೇವರುಗಳ ಆರಾಧನಾ ಪದ್ಧತಿ ಆಧುನೀಕರಣದ, ವೈಭವೀಕರಣದ ನೆಪದಲ್ಲಿ ಅರ್ಥಹೀನ ಗೊಳ್ಳುತ್ತಿರುವುದು ಖೇದಕರವಾಗಿದೆ ಎಂದು ಚಂದ್ರಹಾಸ ಸುವರ್ಣ ತಿಳಿಸಿದರು.
ಜಯ ಶೆಟ್ಟಿ ಮಾತನಾಡಿ ಪುಣೆಯಲ್ಲಿ ತುಳುವರೆಲ್ಲರನ್ನು ಒಗ್ಗಟ್ಟಾಗಿಸಿಕೊಂಡು ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿರುವ ಪುಣೆ ತುಳುಕೂಟದ ಕಾರ್ಯ ಸ್ತುತ್ಯರ್ಹ. ಭವಿಷ್ಯದಲ್ಲಿ ಸಂಸ್ಥೆ ಪಥಾಭಿವೃದ್ಧಿಯತ್ತ ಸಾಗಲಿ ಎಂದರು.
ಸದಾನಂದ ಶೆಟ್ಟಿ ಸನ್ಮಾನಕ್ಕೆ ಉತ್ತರಿಸಿ ಮಾತನಾಡಿ ಯಾವತ್ತೂ ಸನ್ಮಾನಕ್ಕಾಗಿ ಹಾತೊರೆದವನಲ್ಲ. ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕಾಗಿ ಈ ಗೌರವವನ್ನು ಸ್ವೀಕರಿಸುತ್ತಿದ್ದೇನೆ. ಪುಣೆ ತುಳುಕೂಟ ಉತ್ತಮ ಸಂಸ್ಥೆಯಾಗಿದ್ದು, ತುಳು ಭಾಷೆಯ ಬೆಳವಣಿಗೆಗಾಗಿ ತಿಂಗಳಿಗೊಮ್ಮೆ ತುಳು ಚರ್ಚಾಕೂಟವನ್ನು ಆಯೋಜಿಸಿದರೆ ಉತ್ತಮ ಎಂದರು. ತಾನು ಪ್ರತೀ ವರ್ಷ ವಿದ್ಯಾನಿಧಿಗಾಗಿ ತುಳುಕೂಟಕ್ಕೆ ನಿಧಿಯೊಂದನ್ನು ನೀಡುತ್ತೇನೆ ಎಂದರು .
ಕಳೆದೆರಡು ವರ್ಷಗಳಿಂದ ತನ್ನ ಕಾರ್ಯಾವಧಿಯಲ್ಲಿ ಸಂಘದ ಪ್ರತಿಯೊಂದು ಕಾರ್ಯಕ್ರಮಗಳಿಗೆ ಪುಣೆಯ ಹೃದಯವಂತ ದಾನಿಗಳ ಸಹಯೋಗ ಅನನ್ಯವಾಗಿದೆ. ಸಂಘದ ಪದಾಧಿಕಾರಿಗಳ ಪುಣೆಯ ಸರ್ವ ತುಳುನಾಡ ಬಾಂಧವರ ವಿವಿಧ ರೀತಿಯ ಸಹಕಾರ ಸ್ತುತ್ಯರ್ಹ ಸರ್ವರಿಗೂ ಕೃತಜ್ಞತೆಗಳು. ನಮ್ಮ ತುಳುಭಾಷೆ, ಸಾಂಸ್ಕೃತಿಕ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದ್ದು ಇದಕ್ಕಾಗಿ ಸ್ಪಂದಿಸೋಣ ಎಂದು ತಾರಾನಾಥ ರೈ ತಿಳಿಸಿದರು.
ಮನೋರಂಜನೆಯಂಗವಾಗಿ ಅಂಗವಾಗಿ ತುಳು ಕೂಟದ ಸದಸ್ಯರು ಶೋಭಾ ಟಿ.ಶೆಟ್ಟಿ ಮತ್ತು ಸರಿತಾ ಪಿ. ಶೆಟ್ಟಿಯವರ ನಿರ್ದೇಶನದಲ್ಲಿ ನೃತ್ಯ ವೈವಿಧ್ಯಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ದಿವಾಕರ ಶೆಟ್ಟಿ ಮಾಣಿಬೆಟ್ಟು ಸಾರಥ್ಯದಲ್ಲಿ ಗಂಗಾಧರ ಶೆಟ್ಟಿ ಬಜ್ಪೆ ನಿರ್ದೇಶನದಲ್ಲಿ `ದೈವ ಸಾನ್ನಿಧ್ಯ’ ಕಿರು ನಾಟಕವನ್ನು ಸಾದರ ಪಡಿಸಿದರು. ಲ.ಕಿಶೋರ್ ಡಿ.ಶೆಟ್ಟಿ ಅವರ ಶ್ರೀ ಲಲಿತೆ ತಂಡದ ಕಲಾವಿದರು `ಕಟಿಲ್ದಲ್ಲೆ ಉಳ್ಳಾಲ್ದಿ’ ಎಂಬ ಭಕ್ತಿಪ್ರಧಾನ ನಾಟಕ ಪ್ರದರ್ಶಿಸಿತು.
(ಚಿತ್ರ / ವರದಿ : ರೊನಿಡಾ ಮುಂಬಯಿ)