ದುಬೈ: ಪದ್ಮಶಾಲಿ ಫ್ಯಾಮಿಲಿ ದುಬೈ ಇದರ ದಶಮಾನೋತ್ಸವ ವರ್ಷಾಚರಣೆಯ ಪಾದಾರ್ಪಣೆಯ ಪ್ರಯುಕ್ತ ಇದೇ ಬರುವ ಅಕ್ಟೋಬರ್ 11ರಂದು ಶುಕ್ರವಾರ ದುಬೈಯ ಗೀಸಸ್ ನ ಬಿಲ್ವ ಸ್ಕೂಲ್ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ನಡೆಯಲಿರುವ ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಜೊತೆ ನಳ-ದಮಯಂತಿ ಎಂಬ ಪೌರಾಣಿಕ ಆಖ್ಯಾನದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ದುಬೈ ಯಕ್ಷಗಾನ ತರಗತಿಯ ಸಹಕಾರ-ಸಹಬಾಗಿತ್ವದೊಂದಿಗೆ ನಡೆಯಲಿರುವ ಈ ತಾಳಮದ್ದಳೆಯ ಮುಖ್ಯ ಭೂಮಿಕೆಯಲ್ಲಿ ತಾಯ್ನಾಡು-ಕರಾವಳಿ ಕರ್ನಾಟಕದ ಅತಿಥಿ ಕಲಾವಿದರು ಭಾಗವಹಿಸಲಿದ್ದಾರೆ. ಸುಂಕದಕಟ್ಟೆ ಮೇಳದ ಪ್ರಧಾನ ಭಾಗವತರಾದ ಕರುಣಾಕರ ಶೆಟ್ಟಿಗಾರ್ ಕಾಶೀಪಟ್ಣ ಭಾಗವತಿಕೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಅವರು ತಮ್ಮ ಗಾನಸುಧೆಯ ಮೂಲಕ ಕಲಾಭಿಮಾನಿಗಳನ್ನು ರಂಜಿಸಲಿದ್ದಾರೆ.
ಅತಿಥಿ ಕಲಾವಿದರಾದ ದಯಾನಂದ ಶೆಟ್ಟಿಗಾರ್ ಜೊತೆ ವಿಶೇಷ ಆಹ್ವಾನಿತರಾಗಿ ಪದ್ಮನಾಭ ಉಪಾಧ್ಯಾಯರು ಚೆಂಡೆ-ಮದ್ದಳೆಯಲ್ಲಿ ತಮ್ಮ ಪ್ರೌಢಿಮೆಯನ್ನು ಮೆರೆಸಲಿದ್ದಾರೆ. ಮಾತ್ರವಲ್ಲದೆ ಅಭ್ಯಾಸ ತರಗತಿಯ ಹಿರಿಯ ಕಲಾವಿದರಾದ ಭವಾನಿಶಂಕರ ಶರ್ಮ ಮತ್ತು ಪುತ್ತಿಗೆ ವೆಂಕಟೇಶ ಶಾಸ್ತ್ರಿಯವರು ಚೆಂಡೆ-ಮದ್ದಳೆಯಲ್ಲಿ ಸಹಕರಿಸಲಿದ್ದಾರೆ. ಚಕ್ರತಾಳದಲ್ಲಿ ಬಾಲ ಕಲಾವಿದ ಮಾ. ಆದಿತ್ಯ ದಿನೇಶ ಶೆಟ್ಟಿ ಸಹಕರಿಸಲಿದ್ದಾರೆ. ಪ್ರಮುಖ ಪಾತ್ರದಲ್ಲಿ ಅತಿಥಿ ಕಲಾವಿದರಾದ ದಿನೇಶ ಶೆಟ್ಟಿಗಾರ್ ಕೋಡಪದವು, ಮುರಳೀಧರ ಶೆಟ್ಟಿಗಾರ್ ಕನ್ನಡಿಕಟ್ಟೆ ಮತ್ತು ಸದಾಶಿವ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು ಭಾಗವಹಿಸಲಿದ್ದಾರೆ.
ಉಳಿದಂತೆ ದುಬೈ ಯಕ್ಷಗಾನ ಅಭ್ಯಾಸ ತರಗತಿಯ ಕಲಾವಿದರಾದ ವಾಸು ಬಾಯಾರು, ಕೃಷ್ಣಪ್ರಸಾದ್ ರಾವ್ ಸುರತ್ಕಲ್, ಶರತ್ ಕುಡ್ಲ, ಬಾಲಕೃಷ್ಣ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ಗಿರೀಶ್ ನಾರಾಯಣ ಕಾಟಿಪಳ್ಳ, ಸತೀಶ ಶೆಟ್ಟಿಗಾರ್ ವಿಟ್ಲ, ಸಮಂತ ಗಿರೀಶ್, ಲತಾ ಸುರೇಶ್ ಮತ್ತು ಶೇಖರ್ ಡಿ.ಶೆಟ್ಟಿಗಾರ್ ಕಿನ್ನಿಗೋಳಿಯವರು ಅರ್ಥವಾದಿಗಳಾಗಿ ಭಾಗವಹಿಸಲಿದ್ದಾರೆ. ಅಭ್ಯಾಸ ತರಗತಿಯ ಪ್ರಧಾನ ಸಂಘಟಕ ದಿನೇಶ ಶೆಟ್ಟಿಯವರು ಸಂಯೋಜನೆಯ ಸಹಕಾರ ನೀಡಿದ್ದಾರೆ. ಉಚಿತ ಪ್ರವೇಶದ ಈ ಕಲಾಸೇವೆಗೆ ಹೆಚ್ಚಿನ ಸಂಖ್ಯೆಯಲ್ಲಿ ದುಬೈಯ ಭಕ್ತಾಭಿಮಾನಿಗಳು ಹಾಗೂ ಕಲಾಪ್ರೇಮಿಗಳು ಬಂದು ಪ್ರೋತ್ಸಾಹಿಸಬೇಕೆಂದು ಪದ್ಮಶಾಲಿ ಸಮುದಾಯದ ಪರವಾಗಿ ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಕಾರ್ಕಳ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.