ದುಬೈ: ಅಲ್ ಖಾದಿಸ ಕಾವಳಕಟ್ಟೆ ಯುಎಇ ಸಮಿತಿ ವತಿಯಿಂದ ಬೃಹತ್ ಮೆಹಫಿಲೆ ಮುಹಬ್ಬತ್ತ್ ಮತ್ತು ಯುಎಇ ರಾಷ್ಟ್ರೀಯ ದಿನಾಚರಣೆಯು ಡಿಸೆಂಬರ್ 2 ರಂದು ಸಂಜೆ 5 ಘಂಟೆಗೆ ದುಬೈ ಮುರಕ್ಕಾಬಾದ್ ನಲ್ಲಿರುವ ಜೆ ಡಬ್ಲ್ಯೂ ಮಾರಿಯಟ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಬಷೀರ್ ಬೊಳ್ವಾರ್, ಅಲ್ ಖಾದಿಸ ದುಬೈ ಸಮಿತಿ ಅಧ್ಯಕ್ಷರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ ಖಾದಿಸ ಶಿಲ್ಪಿ ಮೌಲಾನಾ ಡಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ರವರ ಅದ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಜ್ಯ ಆಹಾರ ಮತ್ತು ನಾಗರಿಕ ವ್ಯವಹಾರ ಸಚಿವರಾದ ಜನಾಬ್ ಯುಟಿ ಖಾದರ್ ಉದ್ಘಾಟಿಸಲಿದ್ದಾರೆ ಎಂದರು. ಮಂಗಳೂರು ಸಮೀಪದ ಕಾವಳಕಟ್ಟೆ ಪ್ರದೇಶದಲ್ಲಿ ಜನ ಮನ ಗೆದ್ದ, ಬಡವ ಧನಿಕ ಬೇಧ ಭಾವವಿಲ್ಲದೆ, ಮತ ಪಥಗಳ ವ್ಯತ್ಯಾಸವಿಲ್ಲದೆ ಸಂಕಷ್ಟಕ್ಕೀಡಾದ ಸರ್ವರಿಗೂ ಸಿಹಿಸಿಂಚನದ ಆಶಾ ಕೇಂದ್ರವಾಗಿರುವ ಕಾವಳಕಟ್ಟೆ ಹಝ್ರತ್ ಎಂದೇ ಖ್ಯಾತಿ ಹೊಂದಿರುವ ಮೌಲಾನಾ ಡಾ ಮುಹಮ್ಮದ್ ಫಾಝಿಲ್ ರಜ್ವಿ ಕಾವಳಕಟ್ಟೆ ರವರ ನೇತೃತ್ವದಲ್ಲಿ ಆರಂಭಗೊಂಡ ಅಲ್ ಖಾದಿಸ ಎಜುಕೇಷನಲ್ ಅಕಾಡೆಮಿಯು ಹೃಸ್ವ ಅವಧಿಯಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದೆ ಎಂದರು.
ಉನ್ನತ ಶಿಕ್ಷಣದೊಂದಿಗೆ ಬಡ ಮಕ್ಕಳ ಪೋಷಣಾ ಕೇಂದ್ರ, 200 ಕ್ಕಿಂತಲೂ ಬಡ ಕುಟುಂಬಗಳಿಗೆ ಎಲ್ಲಾ ವಿಧ ಮೂಲಭೂತ ಸೌಕರ್ಯಗಳೊಂದಿಗೆ ಉಚಿತ ವಸತಿ ಕೇಂದ್ರ, ವಿಶಿಷ್ಟ ಚೇತನಾ ಮಕ್ಕಳನ್ನು ಆಧುನಿಕ ಪ್ರಜ್ಞಾ ವ್ಯವಸ್ಥೆಗಳು, ಮನಃಶಾಸ್ತ್ರೀಯ ಚಿಕಿತ್ಸೆಗಳೊಂದಿಗೆ ಬೆಳೆಸುವ ಹಾಗೂ ವೈಕಲ್ಯಗಳನ್ನು ಮೀರಿ ತಮ್ಮ ಪ್ರತಿಭೆಗಳನ್ನು ಪ್ರಯೋಗಿಸಲು ತರಬೇತು ನೀಡುವ ಅಂಧ-ಮಂದ-ಅಂಗವಿಕಲರ ವಿದ್ಯಾಲಯ, ಎಸ್ ಎಸ್ ಎಲ್ ಸಿ ನಂತರ ಏಳು ವರ್ಷಗಳಲ್ಲಿ ಪಿಜಿ ಯೊಂದಿಗೆ ಸಮಗ್ರ ಉಲಮಾ ಶೃಷ್ಟಿಗಾಗಿ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್, ಶಿಕ್ಷಣದಿಂದ ವಂಚಿತರಾದ ಉತ್ತರ ಕರ್ನಾಟಕ ಮಕ್ಕಳಿಗೆ ಶಿಕ್ಷಣ ಜಾಗೃತಿ ಮೂಡಿಸಲಿಕ್ಕಾಗಿ ನಾರ್ತ್ ಕರ್ನಾಟಕ ದಅವಾ, ಖುರ್ ಆನ್, ಹಿಫ್ಳ್, ಝಿಕ್ರ್ – ಸ್ವಲಾತ್ ಇನ್ನಿತ್ತರ ವಿಶೇಷ ಪ್ರಾಯೋಗಿಕ ಶಿಕ್ಷಣ ನೀಡುವುದರೊಂದಿಗೆ ಇಂಗ್ಲೀಷ್ ಮೀಡಿಯಂ ಸ್ಕೂಲ್, ಮಾನಸಿಕ ಹಾಗೂ ಮಾದಕ ಸಮಸ್ಯೆಗಳಿಂದ ನರಳಾಡುತ್ತಿರುವ ಜನರಿಗೆ ಕೌನ್ಸೆಲಿಂಗ್ ಸೆಂಟರ್, ರಿಸೆರ್ಚ್ ಸೆಂಟರ್, ಸ್ವ ಉದ್ಯೋಗ ತರಬೇತಿ, ಮಹಿಳಾ ಕಾಲೇಜು, ಅಗತ್ಯ ದೀನೀ ವಿಧ್ಯಾಭ್ಯಾಸಗಳನ್ನು ಒದಗಿಸುವ ಸಲುವಾಗಿ ಮಸೀದಿ ಮದ್ರಸಗಳು ಸೇರಿದಂತೆ ಇಂದು ಸಂಸ್ಥೆಯು ಹೆಮ್ಮೆರವಾಗಿ ಬೆಳೆದು ಬರುತ್ತಿದೆ ಎಂದು ಅವರು ಹೇಳಿದರು.
ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಶೈಖುನಾ ಖಾಝೀ ಬೇಕಲ ಇಬ್ರಾಹಿಂ ಮುಸ್ಲಿಯಾರ್, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾದ ಅಲ್ ಹಾಜ್ ಸಿಎಂ ಇಬ್ರಾಹಿಂ, ಅಬ್ದುಲ್ ಖಾದರ್ ಬಶು ಶಿರೂರ್ (ಛೇರ್ಮನ್ ಗ್ರೀನ್ ವ್ಯಾಲಿ ಇಂಟರ್ನ್ಯಾಷನಲ್), ಕೆಎಂ ರಶೀದ್ ಹಾಜಿ ಬೆಳ್ಳಾರೆ (ಉಪಾಧ್ಯಕ್ಷರು ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್), ಹಾಜಿ ಅಬ್ದುಲ್ ಜಲೀಲ್ (ರುಷ್ತಾಕ್ ಟ್ರೇಡಿಂಗ್ ದುಬೈ), ಅಬ್ದುಲ್ ರೆಹ್ಮಾನ್ ವನೂ (ಹನ್ನಾನ್ ಗ್ರೂಪ್), ಹಾಜಿ ಶೈಖ್ ಬಾವ (ಪ್ರಧಾನ ಕಾರ್ಯದರ್ಶಿ ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ) ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದು, ಯುವ ವಾಗ್ಮಿ ಹಾಫಿಳ್ ಸುಫಿಯಾನ್ ಸಖಾಫಿ (ಪ್ರಾಂಶುಪಾಲರು, ಆಲ್ ಖಾದಿಸ ಇಸ್ಲಾಮಿಕ್ ಕಾಲೇಜು) ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.
ಜನಾಬ್ ಝಕರಿಯ್ಯ ಜೋಕಟ್ಟೆ (ಅಲ್ ಮುಝಿನ್ ಗ್ರೂಪ್ ಸೌದಿ ಅರೇಬಿಯ), ಜನಾಬ್ ನಝೀರ್ ಹುಸೈನ್ (ಅಲ್ ಫಲಾಹ್ ಗ್ರೂಪ್ ಸೌದಿ ಅರೇಬಿಯ), ಜನಾಬ್ ಅಬೂಬಕರ್ ಪಡುಬಿದ್ರಿ (ರೈಸ್ ಕೋ ಗ್ರೂಪ್ ಸೌದಿ ಅರೇಬಿಯ), ಸಯ್ಯದ್ ಇಂತಿಯಾಝ್ ಬಾವಜಾನ್ ಸಾಹೇಬ್ (ಅಲ್ ಖರೈನ್ ಗ್ರೂಪ್ ಆಫ್ ಫಾರ್ಮಸಿಸ್, ಯುಎಇ), ಜನಾಬ್ ಫಾರೂಕ್ ಉಳ್ಳಾಲ (ರಿಯಾದ್ ಸೌದಿ ಅರೇಬಿಯ) ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಅಂಗವಾಗಿ ಯುಎಇಯ ಪ್ರಸಿದ್ಧ ಬುರ್ದಾ ತಂಡವಾದ ಫರ್ಹತುಲ್ ಹಬೀಬ್ ಬುರ್ದಾ ತಂಡ ಅಬುಧಾಬಿ ರವರಿಂದ ಬುರ್ಧಾ ಆಲಾಪನೆ, ನಅತೇ ಷರೀಫ್, ಮೌಲೂದ್ ಪಾರಾಯಣ, ಪ್ರವಾದಿ ಕೀರ್ತನಾ ಮಜ್ಲಿಸ್ ಹಾಗೂ ಯುಎಇ ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು ದೇಶ ವಿದೇಶಗಳ ಹಲವು ಉದ್ಯಮಿಗಳು, ಸಾಮಾಜಿಕ, ಧಾರ್ಮಿಕ, ಸಾಂಘಿಕ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಫರಾಝ್ ಶೈಖ್ ಕೋಟೆಕಾರ್, ಸ್ವಾಗತ ಸಮಿತಿಯ ಛೇರ್ಮನ್, ಅಸ್ತರ್ ಬಷೀರ್ ಬಂಟ್ವಾಳ್ ಟ್ರೇಸರರ್ ಅಲ್-ಕ್ವಾದಿಷಾ ದುಬೈ ಸಮಿತಿ, ಅಶ್ರಫ್ ಹಾಜಿ ಅದ್ಯಾರ್ ಉಪಾಧ್ಯಕ್ಷ ರೆಸೆಪ್ಶನ್ ಸಮಿತಿ, ಅಝೀಮ್ ಉಚ್ಚಿಲ, ಕಮ್ಮ್ಯುನಿಕೇಷನ್ ಕೋ ಆರ್ಡಿನೇಟರ್, ಇಕ್ಬಾಲ್ ಕಾಜೂರು, ಪ್ರೋಗ್ರಾಮ್ ಕೋ ಆರ್ಡಿನೇಟರ್ ರಫೀಕ್ ಕಲ್ಲಡ್ಕ, ಸ್ವಾಗತ ಸಮಿತಿ ಕೋ ಆರ್ಡಿನೇಟರ್, ರಿಯಾಜ್ ಕೊಂಡನಗೆರಿ ಮಾಧ್ಯಮ ಸಂಯೋಜಕ, ಷರೀಪ್ ಹೊಸ್ಮಾರ್ ಜಂಟಿ ಸಂಯೋಜಕ ಉಪಸ್ಥಿತರಿದ್ದರು.