ಹಾವೇರಿ: ಅಮ್ಮ ಬೈಕ್ ಕೊಡಿಸು. ನನಗೆ ಬೈಕ್ ಬೇಕೇ ಬೇಕು ಅಂತಿದ್ದ ಮಗ ಬೈಕ್ ಕೊಡಿಸದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಕರೂರು ಗ್ರಾಮದಲ್ಲಿ ಈ ದುರಂತ ನಡೆದಿದೆ.
ಮಗನ ಸಾವಿಗೆ ನೊಂದ ತಾಯಿ ಕೂಡ ರೈಲಿಗೆ ತಲೆ ಕೊಟ್ಟು ಪ್ರಾಣ ಬಿಟ್ಟಿದ್ದಾರೆ. ಕರೂರು ಗ್ರಾಮದ ಧನರಾಜ್ ಸುರೇಶ್ ನಾಯಕ್ (18) ಆತ್ಮಹತ್ಯೆ ಮಾಡಿಕೊಂಡ ಯುವಕ. ಧನರಾಜ್, ಅಮ್ಮನ ಬಳಿ ಬೈಕ್ ಕೊಡಿಸಿ ಎಂದು ಹಠ ಹಿಡಿದಿದ್ದನಂತೆ.
ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಧನರಾಜ, ತನಗೆ ಬೈಕ್ ತೆಗೆದುಕೊಳ್ಳಲು ಹಣ ಬೇಕೆಂದು ತಂದೆ-ತಾಯಿ ಬಳಿ ಜಗಳ ತೆಗೆದಿದ್ದ. ಕೂಲಿ ಮಾಡಿಕೊಂಡಿರುವ ತಂದೆ ಸುರೇಶ್ ಬೈಕ್ ಕೊಡಿಸೋ ಭರವಸೆ ನೀಡಿದ್ದರು. ತಂದೆ ಸುರೇಶ್ ನಾಯಕ್ ಆಯ್ತು ಹೇಗಾದರೂ ಮಾಡಿ ಬೈಕ್ ಕೊಡಿಸುತ್ತೇನೆ ಎಂದು ಕೆಲಸಕ್ಕೆ ಹೋಗಿದ್ದರು.
ತಂದೆ ಕೆಲಸಕ್ಕೆ ಹೋದ ಮೇಲೆ ತಾಯಿ ಭಾಗ್ಯಮ್ಮ ಧನರಾಜ್ ಕೂರಿಸಿಕೊಂಡು ಬುದ್ದಿಮಾತು ಹೇಳಿದ್ದಾರೆ. ತಾಯಿ ಪಕ್ಕದ ಮನೆಗೆ ಹೋಗಿದ್ದ ವೇಳೆ ಮಧ್ಯಾಹ್ನ ಧನರಾಜ ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮನೆಗೆ ಬರುತ್ತಿದ್ದಂತೆ ಮಗನ ಸ್ಥಿತಿ ಕಂಡು ದಂಗಾಗಿದ್ದ ತಾಯಿ ಭಾಗ್ಯಮ್ಮ ಕುಗ್ಗಿ ಹೋಗಿದ್ದಾರೆ. ಬಳಿಕ ಕರೂರ ರೈಲು ನಿಲ್ದಾಣದ ಬಳಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2 ವರ್ಷದ ಹಿಂದಷ್ಟೇ ಧನರಾಜ್ ತಂದೆ ಸುರೇಶ್ ಅವರ 14 ವರ್ಷದ ಇನ್ನೋರ್ವ ಪುತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದೀಗ ಪತ್ನಿ, ಪುತ್ರನನ್ನು ಕಳೆದುಕೊಂಡು ಸುರೇಶ್ ನಾಯಕ್ ಅವರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

