ಹಾವೇರಿ: ಭೀಕರ ಮಳೆಗೆ ಆಟೋವೊಂದು ಕೊಚ್ಚಿ ಹೋಗಿರುವ ಘಟನೆ ಹಾವೇರಿ ನಗರದ ನಾಗೇಂದ್ರನಮಟ್ಟಿ ಬಳಿ ಇರುವ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ. ನೀರಿನಲ್ಲಿ ಕೊಚ್ಚಿ ಹೋಗಿರುವ ಆಟೋವನ್ನು ತೆಗೆಯದೆ ಇದ್ದಿದ್ದಕ್ಕೆ ಅಧಿಕಾರಿಗಳ ವಿರುದ್ಧ ಆಟೋ ಚಾಲಕ ಆಕ್ರೋಶ ಹೊರಹಾಕಿದ್ದಾನೆ.
ಧಾರಾಕಾರ ಮಳೆ ಸುರಿದಿದ್ದರಿಂದ ಆಟೋ ನೀರಿನಲ್ಲಿ ಕೊಚ್ಚಿ ಹೋಗಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದ. ಆದರೆ ರಾತ್ರಿಯೇ ನೀರಿನಲ್ಲಿ ಆಟೋ ಕೊಚ್ಚಿಕೊಂಡು ಹೋಗಿದ್ದರೂ ಸಂಜೆ ನಾಲ್ಕು ಗಂಟೆಯವರೆಗೂ ಆಟೋವನ್ನು ನೀರಿನಿಂದ ಹೊರತೆಗೆಯುವ ಕಾರ್ಯ ಮಾಡಿಲ್ಲ. ಹೀಗಾಗಿ ಆಟೋ ಚಾಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ.
ಸ್ಥಳಕ್ಕೆ ಆಗಮಿಸಿದ ನಗರಸಭೆ ಸಿಬ್ಬಂದಿ ಆಟೋವನ್ನ ಜೆಸಿಬಿ ಸಹಾಯದಿಂದ ಹೊರಗೆ ತೆಗೆಯುವ ಕಾರ್ಯ ಮಾಡಿದ್ದಾರೆ. ಆಟೋ 15 ಗಂಟೆಗಳ ಕಾಲ ರೈಲ್ವೆ ಬ್ರಿಡ್ಜ್ ಬಳಿ ಇರುವ ರಾಜಕಾಲುವೆಯಲ್ಲಿ ಸಿಲುಕಿತ್ತು. ನಗರಸಭೆಯ 10 ಜನ ಸಿಬ್ಬಂದಿ ಜೆಸಿಬಿಗೆ ಹಗ್ಗವನ್ನ ಕಟ್ಟಿ ಆಟೋ ಹೊರಗೆ ತೆಗೆದು ಚಾಲಕನಿಗೆ ಹಸ್ತಾಂತರ ಮಾಡಿದರು.

