ರಾಜ್ ಬಿ ಶೆಟ್ಟಿ ಕತೆ ಬರೆದು ನಿರ್ದೇಶನ ಮಾಡಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಟ್ರೈಲರ್ ಇಂದು (ನ.17) ಬಿಡುಗಡೆ ಆಗಿದೆ. ಸಿನಿಮಾ ತಂಡದ ನಡುವೆ ಅಸಮಾಧಾನಗಳು ತಲೆದೂರಿತ್ತಾದರೂ ಅವೆಲ್ಲವನ್ನೂ ಬದಿಗೊತ್ತಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದ್ದು, ಇದೀಗ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿದೆ. ಒಂದು ಸುಂದರ, ಸರಳವಾದ ಆದರೆ ಕಾಡುವ ಕತೆಯೊಂದನ್ನು ಪ್ರೇಕ್ಷಕರಿಗಾಗಿ ರಾಜ್ ಬಿ ಶೆಟ್ಟಿ ಕಟ್ಟಿಕೊಟ್ಟಿರುವ ಸುಳಿವನ್ನು ಸಿನಿಮಾದ ಟ್ರೈಲರ್ ನೀಡುತ್ತಿದೆ.
ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಅನಿಕೇತ್ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ ಕತೆ ಬರೆದು, ನಿರ್ದೇಶನ ಮಾಡಿ, ಮುಖ್ಯ ಪಾತ್ರದಲ್ಲೂ ನಟಿಸಿರುವ ಈ ಸಿನಿಮಾದಲ್ಲಿ ಸಿರಿ ನಾಯಕಿ. ರಾಜ್ ಬಿ ಶೆಟ್ಟಿಯ ನಟನೆಗೆ ಸೆಡ್ಡು ಹೊಡೆಯುವಂತೆ ಸಿರಿ ನಟಿಸಿದ್ದಾರೆಂಬುದು ಟ್ರೈಲರ್ನಲ್ಲಿಯೇ ತಿಳಿದು ಬರುತ್ತಿದೆ.
ಸಿನಿಮಾದಲ್ಲಿ ಗೋಪಾಲ್ ದೇಶಪಾಂಡೆ ಸಹ ಇದ್ದಾರೆ. ರಾಜ್ ಬಿ ಶೆಟ್ಟಿಯವರ ಈ ಹಿಂದಿನ ಸಿನಿಮಾಗಳಿಗೆ ಕೆಲಸ ಮಾಡಿರುವ ಸಿನಿಮಾಟೊಗ್ರಾಫರ್ ಪ್ರವೀಣ್ ಶ್ರಿಯಾನ್ ಹಾಗೂ ಸಂಗೀತ ನಿರ್ದೇಶಕ ಮಿದುನ್ ಮುಕುಂದನ್ ಈ ಸಿನಿಮಾಕ್ಕೂ ಕೆಲಸ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ನಟಿ ರಮ್ಯಾ. ಇದು ಅವರ ಮೊದಲ ನಿರ್ಮಾಣದ ಸಿನಿಮಾ ಆಗಿದ್ದು, ನವೆಂಬರ್ 24ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.