ಸ್ಯಾಂಡಲ್ ವುಡ್: ಯಶ್ ತಮ್ಮ ಮುಂದಿನ ಯೋಜನೆಯ ಬಗ್ಗೆ ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಈ ನಡುವೆ ಹಲವಾರು ಸುದ್ದಿಗಳು ಹರಿದಾಡುತ್ತಿದ್ದು, ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ತಮ್ಮ ಮುಂದಿನ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಲು ಯಶ್ ಗೆ 100 ಕೋಟಿ ಆಫರ್ ನೀಡಿದ್ದಾರೆ ಎಂಬ ವಿಚಾರ ಸುದ್ದಿಯಾಗಿದೆ.
ಅದಕ್ಕೂ ಮುನ್ನ ʼಮಫ್ತಿʼ ನಿರ್ದೇಶಕ ನರ್ತನ್ ನಿರ್ದೇಶನದಲ್ಲಿ ಯಶ್ ನಟಿಸುವುದು ಕನ್ಫರ್ಮ್ ಎನ್ನಲಾಗುತ್ತಿದೆ. ಇವೆಲ್ಲವುದರ ನಡುವೆ ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದ್ದು, ತಮಿಳಿನ ಪ್ರಖ್ಯಾತ ನಿರ್ದೇಶಕ ಶಂಕರ್ ಸಾರಥ್ಯದ ಬಿಗ್ ಬಜೆಟ್ ಚಿತ್ರದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಸಧ್ಯ ಶಂಕರ್ ಅವರು ರಾಮ್ ಚರಣ್ ನಟಿಸುತ್ತಿರುವ ಚಿತ್ರದಲ್ಲಿ ತಲ್ಲೀನರಾಗಿದ್ದಾರೆ, ಅದು ಪ್ರಸ್ತುತ ಶೂಟಿಂಗ್ ಹಂತದಲ್ಲಿದೆ.
ಕೆಜಿಎಫ್ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಯಶ್ ಸಣ್ಣ ಬ್ರೇಕ್ ಪಡೆದಿದ್ದು, ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ನಿರ್ದೇಶಕ ನರ್ತನ್ ಅವರೊಂದಿಗೆ ಯಶ್ ಕೈಜೋಡಿಸಲಿದ್ದಾರೆ ಎಂಬ ವರದಿಗಳಿದ್ದು, ಈ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಿನಿಮಾದಲ್ಲಿ ಯಶ್ ಆರ್ಮಿ ಆಫೀಸರ್ ಆಗಿ ಕಾಣಿಸಿಕೊಳ್ಳಬಹುದು ಎಂಬ ಗುಸುಗುಸು ಕೇಳಿಬಂದಿದ್ದು, ಈ ವಿಚಾರ ಈ ವರೆಗೆ ಕನ್ಫರ್ಮ್ ಆಗಿಲ್ಲ. ಹಲವಾರು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ಶಂಕರ್ ಹಾಗೂ ಇಡೀ ದೇಶದ ಗಮನ ಸೆಳೆಯುವಂತಹ ಚಿತ್ರ ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಒಟ್ಟಿಗೆ ಚಿತ್ರಮಾಡಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಿಗೆ ಥ್ರಿಲ್ ನೀಡಿದೆ.
ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ಸ್ ನಲ್ಲಿ ಧೂಳೆಬ್ಬಿಸಿರುವ ಕೆಜಿಎಫ್ನ ಚಾಪ್ಟರ್ 2 ಚಿತ್ರ ಹಲವು ದಾಖಲೆಗಳನ್ನು ಮುರಿಯುವ ಮೂಲಕ 1198 ಕೋಟಿ ರೂ ಗಳಿಕೆಯನ್ನು ದಾಟಿದೆ.