ಮೈಸೂರು: ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರನಿರ್ದೇಶಕ ಎಸ್.ಆರ್ ಪುಟ್ಟಣ್ಣ ಕಣಗಾಲ್ ರವರ 89ನೇ ಜನ್ಮದಿನೋತ್ಸವದ ಅಂಗವಾಗಿ ಚಿತ್ರ ಬ್ರಹ್ಮನ ನೆನಪು ಕಾರ್ಯಕ್ರಮವನ್ನು ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಹಾಗೂ ಪುಟ್ಟಣ್ಣ ಕಣಗಾಲ್ ಅಭಿಮಾನಿ ಬಳಗ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಯರ ರಾಮಚಂದ್ರ ರಾವ್ ಉದ್ಯಾನವನದಲ್ಲಿ ಆಚರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ರವರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಪೌರಾಣಿಕ ಮತ್ತು ಧಾರ್ಮಿಕ ಕತೆಗಳ ಆಧಾರಿತ ಚಿತ್ರಗಳನ್ನು ನೋಡುತ್ತಿದ್ದ ಪ್ರೇಕ್ಷಕರನ್ನು ಸಾಮಾಜಿಕ ಚಿತ್ರಮಂದಿರಗಳ ಬಳಿ ಸಾಲುಗಟ್ಟಿ ಟಿಕೆಟ್ ಪಡೆಯಲು ನಿಲ್ಲುವಂತೆ ಮಾಡಿದವರೇ ಪುಟ್ಟಣ್ಣ ಕಣಗಾಲ್ ರವರು, ಅಂದು ಬಿ.ಆರ್ ಪಂತಲು ಅವರ ಬಳಿ ಮೆಕ್ಯಾನಿಕ್ ಕಮ್ ಡೈರೆಕ್ಟರ್ ಆಗಿ ಕೆಲಸಕ್ಕೆ ಸೇರಿ ನಂತರ ಡೈಲಾಗ್ ಡೆಲಿವೆರಿ ಸಹನಿರ್ದೇಶಕನಾಗಿ ಮುಂದುವರೆದು ಇಡೀ ದೇಶವೇ ಚಪ್ಪಾಳೆ ಹೊಡೆಯುವ ಹಾಗೇ ಮಾಡಿ ಅತ್ಯುತ್ತಮ ಚಿತ್ರನಿರ್ದೇಶಕರಾಗಿ ಬೆಳೆದು ನಿಂತರು.
ಕಣಗಾಲ್ ಪ್ರಭಾಕರ್ ಶಾಸ್ತ್ರಿ ಮತ್ತು ಪುಟ್ಟಣ್ಣ ಕಣಗಾಲ್ ಎಂದರೆ ಡಾ. ರಾಜಕುಮಾರ್ ರವರಿಗೆ ಎಲ್ಲಿಲ್ಲದ ಪ್ರೀತಿ ಗುರುಗಳ ಸ್ಥಾನದಲ್ಲಿ ಭಕ್ತಿಯಿಂದ ಕಾಣುತ್ತಿದ್ದರು, ಪುಟ್ಟಣ್ಣ ನವರ ಗರಡಿಯಲ್ಲಿ ಬೆಳೆದ ಅನೇಕರು ಕಿಂಗ್ ಆಗಿ ಚಿತ್ರರಂಗದಲ್ಲಿ ಮುನ್ನಡೆದರು ಆದರೆ ಕಿಂಗ್ ಮೇಕರ್ ಆದ ಪುಟ್ಟನವರನ್ನು ಇಂದು ಮರೆತಿದ್ದಾರೆ ಎಂದರು.
ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ರವರು ಮಾತನಾಡಿ ಕಲಾವಿದರ ತವರೂರು ಮೈಸೂರು ಚಿತ್ರರಂಗಕ್ಷೇತ್ರದಲ್ಲಿ ಉತ್ತಂಗಕ್ಕೆ ಏರಲು ಪುಟ್ಟಣ್ಣ ಕಣಗಾಲ್ ರವರ ಪಾತ್ರ ಪ್ರಮುಖವಾದದ್ದು, ಪುಟ್ಟಣ್ಣನವರ ಚಿತ್ರದಲ್ಲಿ ಪಾತ್ರಗಳ ನಟನೆಯಲ್ಲಿ ಪರಿಪೂರ್ಣತೆ ಸಿಗುವ ವರೆಗೂ ಕಲಾವಿದರು ಭಯದ ವಾತಾವರಣದಲ್ಲೇ ನಟಿಸುತ್ತಿದ್ದ ಕಾರಣ ಇಂದಿಗೆ ವಿಷ್ಣುವರ್ಧನ್ ಅಂಬರೀಶ್ ಶ್ರೀನಾಥ್ ಸೇರಿದಂತೆ ಅತ್ಯುತ್ತಮ ನಟರಾಗಿ ಹೊಮ್ಮಿದರು. ಪುಟ್ಟಣ್ಣನವರ ಚಿತ್ರವು ಸಮಾಜಕ್ಕೆ ಸಂದೇಶ ಮತ್ತು ಕುಟುಂಬ ಪ್ರಧಾನವಾಗಿದ್ದ್ದವು, ಚಾಮಯ್ಯ ಮೇಷ್ಟ್ರು ಅಶ್ವಥ್ ರವರ ಪಾತ್ರ ಇವತ್ತಿಗೂ ಸಂಸ್ಕಾರದ ಸಂದೇಶ ತೋರಿಸುತ್ತದೆ ಎಂದರು,
ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ವಿರ್ಲೇ ಶ್ರೀನಿವಾಸ್ ಗೌಡ ಮಾತನಾಡಿ ನಾಯಕರ ಕಾಲ್ ಶೀಟ್ ಮತ್ತು ಬ್ಯಾನರ್ ಪ್ರಭಾವದ ಮೇಲೆ ಚಿತ್ರಗಳ ಪ್ರದರ್ಶನ ನಿರ್ಮಾಣ ಕಾಣುತ್ತಿದ್ದ ಸಂದರ್ಭದಲ್ಲಿ ಒಬ್ಬ ನಿರ್ದೇಶಕನ ಮೇಲೆಯೇ ಅವಲಂಬಿತವಾಗಿ ಚಿತ್ರಗಳು ಶತದಿನಗಳ ಪ್ರದರ್ಶನ ಕಾಣುತ್ತಿತ್ತು ಎಂದರೆ ಪುಟ್ಟಣ್ಣ ಕಣಗಾಲ್ ರವರ ವಿಶೇಷತೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾನಂದೀಶ್ ,ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್, ನಗರಪಾಲಿಕ ಸದಸ್ಯ ಮ ವಿ ರಾಮಪ್ರಸಾದ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ವಿನಯ್ ಕಣಗಾಲ್, ಅಜಯ್ ಶಾಸ್ತ್ರಿ, ಮಿರ್ಲೆ ಪನೀಶ್, ಎಸ್ ಎನ್ ರಾಜೇಶ್, ಚಾಮುಂಡೇಶ್ವರಿ ಯುವ ಬಳಗದ ಅಧ್ಯಕ್ಷರಾದ ರಾಕೇಶ್, ಯೋಗೇಶ್, ಸುಚೇಂದ್ರ, ಅಪೂರ್ವ ಸುರೇಶ್, ಹಾಗೂ ಇನ್ನಿತರರು ಇದ್ದರು.