‘ನಾದಬ್ರಹ್ಮ’ ಹಂಸಲೇಖ ಅವರಿಗೆ ಇಂದು (ಜೂನ್ 23) 69ನೇ ಜನ್ಮದಿನದ ಸಂಭ್ರಮ. ಕನ್ನಡ ಸಿನಿಮಾರಂಗದ ಇತಿಹಾಸದಲ್ಲಿ ಹಂಸಲೇಖ ಅವರದ್ದೇ ಒಂದು ಮಹಾ ಅಧ್ಯಾಯ ಎಂದರೆ ತಪ್ಪಾಗಲಿಕ್ಕಿಲ್ಲ. ಯಾಕೆಂದರೆ, ಚಂದನವನದ ಸಂಗೀತ ಲೋಕಕ್ಕೆ ಅವರ ಕೊಡುಗೆ ಸಾಮಾನ್ಯವಾದುದ್ದಲ್ಲ. ಗೋವಿಂದರಾಜು ಗಂಗರಾಜು ಆಗಿದ್ದ ಅವರು, ಹಂಸಲೇಖ ಆಗಿ ಕನ್ನಡ ಚಿತ್ರರಂಗಕ್ಕೆ ಗೀತ ಸಾಹಿತಿಯಾಗಿ ಕಾಲಿಡುತ್ತಾರೆ. ಅವರಿಗೆ ಸಂಗೀತ ನಿರ್ದೇಶಕರಾಗಿ ದೊಡ್ಡ ಯಶಸ್ಸು, ಜನಪ್ರಿಯತೆ ತಂದುಕೊಟ್ಟ ಸಿನಿಮಾ ‘ಪ್ರೇಮಲೋಕ’. ಅಲ್ಲಿಂದ ಹಂಸಲೇಖ ನುಡಿಸಿದ್ದೆಲ್ಲ ಗೆಲುವಿನ ರಾಗಗಳೇ. ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಜೊತೆ ಸೇರಿ ಮಾಡಿದ ಬಹುತೇಕ ಎಲ್ಲ ಹಾಡುಗಳು, ಸಿನಿಮಾಗಳು ಸೂಪರ್ ಹಿಟ್.
ಹಂಸಲೇಖ ಅವರು ಬರೀ ರವಿಚಂದ್ರನ್ಗೆ ಹಿಟ್ ಹಾಡುಕೊಡಲಿಲ್ಲ. ಡಾ. ರಾಜ್ಕುಮಾರ್ ಅವರ ಸಿನಿಮಾಗಳಿಂದ ಹಿಡಿದು ಈಗಿನ ಪೀಳಿಗೆಯ ಯಶ್ ಸಿನಿಮಾಗಳವರೆಗೂ ಹಂಸ್, ಟ್ಯೂನ್ ಹಾಕಿದ್ದಾರೆ. ಅವರು ಹಾಡುಗಳ ಮೂಲಕವೇ ಬುದ್ಧಿ ಹೇಳಿದ್ದಾರೆ, ತುಂಟತನ ಮಾಡಿದ್ದಾರೆ, ಪ್ರೇಮಿಸೋದನ್ನು ಹೇಳಿಕೊಟ್ಟಿದ್ದಾರೆ, ರಮಿಸೋದನ್ನು ಕಲಿಸಿಕೊಟ್ಟಿದ್ದಾರೆ. ಎಲ್ಲ ಪ್ರಕಾರದ ಸಂಗೀತವನ್ನು ನೀಡಿದ್ದಾರೆ. ಭಾರತೀಯ ಸಿನಿಮಾರಂಗದಲ್ಲಿ ತಾವೇ ರಾಗ ಸಂಯೋಜಿಸಿ, ಅದಕ್ಕೆ ತಾವೇ ಸಾಹಿತ್ಯ ಬರೆಯುವ ಅಗ್ರಮಾನ್ಯ ಸಂಗೀತ ನಿರ್ದೇಶಕ ಎಂದರೆ ಅದು ಹಂಸಲೇಖ ಎಂದೇ ಹೇಳಬಹುದು.
ಹಂಸಲೇಖರ ಈ ಅಸಾಧಾರಣ ಪ್ರತಿಭೆಗೆ ಹಲವು ಪ್ರಶಸ್ತಿಗಳು ಒಲಿದಬಂದಿವೆ. ರಾಷ್ಟ್ರ ಪ್ರಶಸ್ತಿಯಿಂದಿಡಿದು ಫಿಲ್ಮ್ಫೇರ್ ತನಕ ಸಾಕಷ್ಟು ಗೌರವಗಳಿಗೆ ಹಂಸ್ ಪಾತ್ರರಾಗಿದ್ದಾರೆ. ಹಂಸಲೇಖ ಅವರಿಗೆ ಮೂರು ಬಾರಿ ರಾಜ್ಯ ಪ್ರಶಸ್ತಿ ಮತ್ತು ಒಂದು ಬಾರಿ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಇದರ ಜೊತೆಗೆ ಪ್ರತಿಷ್ಠಿತ ಫಿಲ್ಮ್ಫೇರ್ ಪ್ರಶಸ್ತಿಯನ್ನು ಆರು ಬಾರಿ ಪಡೆದುಕೊಂಡಿದ್ದಾರೆ.
ಇಂದು ಜನ್ಮದಿನದ ಸಂಭ್ರಮದಲ್ಲಿರುವ ಹಂಸಲೇಖ ಅವರಿಗೆ ಅವರ ಆಪ್ತರು, ಸ್ನೇಹಿತರು, ಕಲಾವಿದರು, ಅಭಿಮಾನಿಗಳು ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.