ಪುತ್ತೂರು: ದೊರೆತ ಅವಕಾಶಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡಾಗ ಪ್ರತಿಭೆಗಳು ಅರಳುತ್ತದೆ, ಬೆಳಗುತ್ತದೆ ಎಂಬುದಕ್ಕೆ ಪುತ್ತೂರಿನ ಪ್ರತಿಷ್ಠಿತ ಬೆಳ್ಳಿಪ್ಪಾಡಿ ತರವಾಡಿನ ಕಲಾವಿದರ ಕುಟುಂಬದ ಕುಡಿ ವೆನ್ಯ ರೈ ಸ್ಪಷ್ಟ ಉದಾಹರಣೆ.
ಯಕ್ಷಗಾನ, ನಾಟಕ, ಧಾರವಾಹಿ ಮತ್ತು ತುಳು, ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಚೇತನ್ ರೈ ಮಾಣಿ ಅವರ ಪುತ್ರಿಯಾಗಿರುವ ವೆನ್ಯ ರೈ ಕನ್ನಡ ಚಿತ್ರವೊಂದರಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾಳೆ.
ಕಿರುತೆರೆಯ ಸ್ಟಾರ್ ನಿರ್ದೇಶಕ ಹಯವದನ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ದೊಡ್ಡ ಪರದೆಯ “ಎಲ್ಲೋ ಜೋಗಪ್ಪ ನಿನ್ನರಮನೆ” ಚಲನಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ವೆನ್ಯ ರೈ ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್ ಮುಂಡಾಡಿ ನಿರ್ದೇಶನದ “ಭಾವಪೂರ್ಣ” ಎಂಬ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಮಿಂಚಲಿದ್ದಾಳೆ.
ನಿಜ ಜೀವನದಲ್ಲೂ ತನ್ನ ಮಾತಿನ ಮೂಲಕ ಎಲ್ಲರನ್ನೂ ಆಕರ್ಷಿಸುವ ವೆನ್ಯ ರೈ ಈ ಪಾತ್ರಕ್ಕೆ ಸೂಕ್ತವಾಗಿ ಹೊಂದುತ್ತಾರೆ ಎನ್ನುವ ನಿರ್ದೇಶಕ ಹಯವದನ , ಚಿತ್ರದಲ್ಲಿ ವೆನ್ಯ ರೈ ಉತ್ತರ ಭಾರತದ ಕಾಲೇಜು ವಿದ್ಯಾರ್ಥಿನಿಯ ಪಾತ್ರದಲ್ಲಿ ನಟಿಸಲಿದ್ದು , ಇದೊಂದು ಪ್ರವಾಸ ಕಥನದ ಸಿನೆಮಾವಾಗಿದೆ ಪಾತ್ರಗಳು ಕಲಾವಿದರಿಗೆ ಚಾಲೆಂಜಿಂಗ್ ಆಗಿದೆ ಎಂದು ಹೇಳಿದ್ದಾರೆ.
ಅಂಜನ್ ನಾಗೇಂದ್ರ ನಾಯಕನಾಗಿ ನಟಿಸುವ ಈ ಚಿತ್ರ ಶೀಘ್ರದಲ್ಲೆ ಸೆಟ್ಟೆರಲಿದೆ. ತುಳು ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರರಂಗಕ್ಕೆ ಕೊಡುಗೆ ನೀಡಿದ ತುಳುನಾಡಿನ ಕಲಾವಿದರ ಸಾಲಿಗೆ ವೆನ್ಯ ರೈ ಕೂಡ ಸೇರ್ಪಡೆಯಾಗಲಿ ಎನ್ನುವುದು ನಮ್ಮೆಲ್ಲರ ಆಶಯ.
ಪುತ್ತೂರಿನ ವಿವೇಕಾನಂದ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿರುವ ವೆನ್ಯ ರೈ ಗೆ ತಂದೆ ಚೇತನ್ ರೈ ಅಭಿನಯದಲ್ಲಿ ಮೊದಲ ಗುರು. ಮನೆಯಲ್ಲಿ ನಟನೆಗೆ ಸಿಕ್ಕ ಪ್ರೋತ್ಸಾಹ, ಶಾಲಾ ಕಾಲೇಜಿನಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ತಂದೆ ಚೇತನ್ ರೈ ಯವರ ಗರಡಿಯಲ್ಲೇ ಪಳಗಿದ ವೆನ್ಯ ರೈ, ಈ ನಡುವೆ ಮಲಾರ್ ಬೀಡು ಪುಷ್ಪರಾಜ್ ಶೆಟ್ಟಿ ಅವರ “ಆರಾಟ” ಚಿತ್ರದಲ್ಲೂ ್ನಾಯಕಿಯಾಗಿ ನಟಿಸಲಿದ್ದಾರೆ. ಒಟ್ಟಿನಲ್ಲಿ ವೆನ್ಯ ರೈ ಯ ಚಿತ್ರರಂಗ ಪ್ರವೇಶ ಚಿತ್ರರಂಗದ ಜೊತೆ ಸಮಾಜಕ್ಕೂ ಒಳ್ಳೆಯ ಪ್ರೇರಣೆಯಾಗಲಿ.