ಚಿತ್ರರಂಗದಲ್ಲಿ ಈಗತಾನೇ ಹೆಸರು ಮಾಡುತ್ತಿರುವ ನಾಗಭೂಷಣ್ ಅವರು ಅಪಘಾತ ಪ್ರಕರಣ ಒಂದರಲ್ಲಿ ತೊಂದರೆಗೆ ಸಿಲುಕಿದ್ದರು. ಇದೀಗ ಈ ಪ್ರಕರಣದಲ್ಲಿ ಅವರಿಗೆ ಹಿನ್ನಡೆ ಆಗಿದೆ. ನಾಗಭೂಷಣ್ ವಿರುದ್ಧ ನ್ಯಾಯಾಲಯಕ್ಕೆ 80 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಸದ್ಯ 60 ಸಾಕ್ಷಿಗಳನ್ನು ಪೊಲೀಸರು ಕಲೆಹಾಕಿದ್ದಾರೆ. ಇದರ ಜೊತೆಗೆ ಸಿಸಿಟಿವಿ ಮಾತ್ರವಲ್ಲದೆ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಇದರಿಂದ ನಾಗಭೂಷಣ್ ಅವರಿಗೆ ಸಂಕಷ್ಟ ಮತ್ತಷ್ಟು ಹೆಚ್ಚಲಿದೆ.
ಬೆಂಗಳೂರಿನ ಕೋಣನ ಕುಂಟೆ ಸಮೀಪ ಅಪಘಾತ ಸಂಭವಿಸಿತ್ತು. ನಾಗಭೂಷಣ್ ಓಡಿಸುತ್ತಿದ್ದ ಕಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಬಳಿಕ ವಿದ್ಯುತ್ ಕಂಬಕ್ಕೆ ಗುದ್ದಿತ್ತು. ಈ ವೇಳೆ ಪ್ರೇಮಾ ಎಂಬುವವರು ಮೃತಪಟ್ಟರೆ, ಅವರ ಪತಿ ಕೃಷ್ಣ ಅವರಿಗೆ ಗಂಭೀರ ಗಾಯವಾಗಿತ್ತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಚೇತರಿಕೆ ಕಂಡಿದ್ದು, ಅವರು ಹೇಳಿಕೆ ದಾಖಲು ಮಾಡಿದ್ದಾರೆ.
ಈ ದಂಪತಿಗಳು ಪಾದಾಚಾರಿ ಮಾರ್ಗದಿಂದ ನೇರ ರಸ್ತೆಗೆ ಇಳಿದಿದ್ದರು ಎಂದು ಹೇಳಿಕೆ ನೀಡಿದ್ದರು. ಏಕಾಏಕಿ ಕಾರಿಗೆ ಅಡ್ಡಲಾಗಿ ಬಂದ ಕಾರಣ ಕಾರ್ ಕಂಟ್ರೋಲ್ ಸಿಗದೆ ಆಯಕ್ಸಿಡೆಂಟ್ ಆಗಿದೆ ಎಂದು ನಾಗಭೂಷಣ್ ಹೇಳಿಕೆ ನೀಡಿದ್ದರು. ಆದರೆ, ಕೃಷ್ಣ ಅವರ ಹೇಳಿಕೆಯಲ್ಲಿ ಬೇರೆಯೇ ಉಲ್ಲೇಖಿಸಿದ್ದಾರೆ.