ಮೈಸೂರು: ನನಗೆ ಒಂದು ತಿಂಗಳ ಹಿಂದೆಯೇ ನನ್ನ ಡಾಕ್ಯುಮೆಂಟ್ ಪೋರ್ಜರಿ ಆಗಿರುವುದು ಗಮನಕ್ಕೆ ಬಂದಿತ್ತು. ಆ ಮಹಿಳೆಯನ್ನು ಯಾರು ಪರಿಚಯಿಸಿದ್ದರು, ಹೇಗೆ ಪರಿಚಯವಾಯಿತು ಎಂಬುದು ತನಿಖೆ ನಂತರ ಗೊತ್ತಾಗಲಿದೆ. ಒಂದು ವೇಳೆ ಸ್ನೇಹಿತರಿಂದಲೇ ಮೋಸ ಆಗಿದ್ದರೆ ಅದನ್ನು ಸಹಿಸುವುದಿಲ್ಲ. ನಾನೇ ಕಥೆ ಹೇಳಿದರೆ ಚೆನ್ನಾಗಿರುವುದಿಲ್ಲ ಎಲ್ಲವೂ ತನಿಖೆ ಬಳಿಕ ಗೊತ್ತಾಗಲಿದೆ ಇದು ನಟ ದರ್ಶನ್ ಹೇಳಿದ ಮಾತುಗಳು
ಮಹಿಳೆಯೊಬ್ಬಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿ 25 ಕೋಟಿ ವಂಚಿಸಲೆತ್ನಿಸಿರುವ ಘಟನೆ ಗೆ ಸಂಬಂಧಿಸಿದಂತೆ ನಗರದ ಎಸಿಪಿ ಕಚೇರಿಗೆ ವಿಚಾರಣೆಗಾಗಿ ತೆರಳಿದ ದರ್ಶನ್ ವಿಚಾರಣೆ ಬಳಿಕ ಮಾತನಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಒಬ್ಬ ಮಹಿಳೆ ಬಂದು ನಾನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು ನಿಮ್ಮ ಹೆಸರಿನಲ್ಲಿ ಶೂರಿಟಿ ಹಾಕಿಸಿಕೊಂಡು ಒಬ್ಬಳು ಮಹಿಳೆ 25 ಕೋಟಿ ಸಾಲ ಪಡೆಯುತ್ತಿದ್ದು, ನೀವು ಶ್ಯೂರಿಟಿ ಹಾಕಿಕೊಡುವಂತೆ ಹೇಳಿದ್ದಾಳೆ. ತಕ್ಷಣ ಎಚ್ಚೆತ್ತುಕೊಂಡು ದರ್ಶನ್ ವಿಚಾರಣೆ ಮಾಡಿದಾಗ ಆಕೆ ಬ್ಯಾಂಕ್ ಮ್ಯಾನೇಜರ್ ಅಲ್ಲ ಎಂಬುದು ಗೊತ್ತಾಗಿದೆ. ಅಲ್ಲದೆ ಅದೇ ಮಹಿಳೆ ದರ್ಶನ್ ಹೆಸರಿನಲ್ಲಿ ವಂಚಿಸಲು ಮುಂದಾಗಿರುವುದು ಬೆಳಕಿಗೆ ಬಂದಿದೆ.
ಇನ್ನು ತಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿದ್ದಾರೆ ಎನ್ನಲಾದ ಎಲ್ಲ ಗೆಳೆಯರನ್ನು ದರ್ಶನ್ ವಿಚಾರಿಸಿದಾಗ ಆ ಮಹಿಳೆಯೇ ನಕಲಿ ಬ್ಯಾಂಕ್ ಮ್ಯಾನೇಜರ್ ಎಂಬುವುದು ಗೊತ್ತಾಗಿದೆ. ಸದ್ಯ ಆ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆಕೆಯನ್ನು ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಅವರೇ ಕೆಲವು ಸಮಯಗಳ ಹಿಂದೆ ದರ್ಶನ್ ಗೆ ಪರಿಚಯಿಸಿದ್ದರು ಎನ್ನಲಾಗಿದೆ. ನಿರ್ಮಾಪಕ ಉಮಾಪತಿ, ನಟ ದರ್ಶನ್ ಮತ್ತು ಮಹಿಳೆಯನ್ನು ಮೈಸೂರಿನ ನಜರ್ ಬಾದ್ ನಲ್ಲಿರುವ ಎಸಿಪಿ ಕಚೇರಿಗೆ ಕರೆಯಿಸಿ ಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ. ತನಿಖೆ ನಂತರ ನೈಜಾಂಶ ಏನೆಂಬುದು ಹೊರ ಬರಲಿದೆ.