ಬೆಳ್ತಂಗಡಿ: ಗೃಹರಕ್ಷಕ ಸಿಬ್ಬಂದಿ ಕರ್ತವ್ಯ ಭತ್ಯೆಯನ್ನುವ ರೂ.750 ಕ್ಕೆ ಹೆಚ್ಚಿಸಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶಾಸಕ ಹರೀಶ್ ಪೂಂಜ ಬೆಂಗಳೂರಲ್ಲಿ ಶುಕ್ರವಾರ ಮನವಿ ಸಲ್ಲಿಸಿದರು.
ಗೃಹರಕ್ಷಕ ದಳದ ಸಿಬ್ಬಂದಿ ಕೋವಿಡ್-19 ಎರಡನೆಯ ಅಲೆಯ ನಿಯಂತ್ರಣಕ್ಕಾಗಿ ವಿವಿಧ ರೀತಿಯಲ್ಲಿ ಶ್ರಮಿಸುತ್ತಿದ್ದಾರೆ.
ಇವರಿಗೆ ಸರಕಾರದಿಂದ ಯಾವುದೇ ವಿಶೇಷ ಸೌಕರ್ಯ ಲಭ್ಯವಾಗಿಲ್ಲ ಎಂಬ ಕೂಗು ಕೇಳಿ ಬಂದಿದೆ. ಈಗಾಗಲೇ ಸರಕಾರ ರಾಜ್ಯದ ಶ್ರಮಿಕ ವರ್ಗಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿದೆ.
ಆದರೆ ಗೃಹರಕ್ಷಕ ಸಿಬ್ಬಂದಿ ಸೌಲಭ್ಯ ವಂಚಿತರಾದಾಗ ಅನೇಕ ಸಂಘ-ಸಂಸ್ಥೆಗಳು, ಶಾಸಕರು, ದಾನಿಗಳು ನೆರವಾಗಿದ್ದಾರೆ. ರಾಜ್ಯದಲ್ಲಿ 25,000, ಜಿಲ್ಲೆಯಲ್ಲಿ 1,000 ಮಂದಿ ಸಿಬ್ಬಂದಿಗಳಿದ್ದು ಎಸ್.ಪಿ., ಕಮಿಷನರ್, ಅಗ್ನಿಶಾಮಕ, ಆರ್.ಟಿ.ಓ., ಪ್ರವಾಹ ರಕ್ಷಣೆ, ಕರಾವಳಿ ಪೋಲಿಸ್ ಪಡೆ ಹೀಗೆ ಅನೇಕ ವಿಭಾಗಗಳಲ್ಲಿ ಸರದಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಸಂಕಷ್ಟದಲ್ಲಿರುವ ಅವರು ಕರ್ತವ್ಯ ಭತ್ಯೆಯಾಗಿ ಪ್ರಸ್ತುತ 380 ರೂ. ಮಾತ್ರ ಪಡೆಯುತ್ತಿದ್ದಾರೆ. ಹೀಗಾಗಿ ಅವರ ಭತ್ತೆಯನ್ನು ರೂ.750 ಕ್ಕೆ ಹೆಚ್ಚಿಸಿ ವಿಶೇಷ ಪ್ಯಾಕೇಜ್ ಪ್ರಕಟಿಸಿ ನೆರವಾಗಬೇಕು ಎಂದು ಶಾಸಕರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿಗಳು ಸ್ಪಂದಿಸಿರುವುದಾಗಿ ಶಾಸಕರು ತಿಳಿಸಿದ್ದಾರೆ.