ರಾಯಚೂರು : ಆರೋಗ್ಯವಂತರಾಗಿ, ಸದಾ ಚಟುವಟಿಕೆಯಿಂದ ಇದ್ದ ನಟ ಪುನೀತ್ ರಾಜ್ಕುಮಾರ್ ಅವರು ಇದ್ದಕ್ಕಿದ್ದಂತೆಯೇ ನಿಧನರಾಗಿದ್ದೇಕೆ ಎನ್ನುವ ಪ್ರಶ್ನೆ ಅವರ ಲಕ್ಷಾಂತರ ಅಭಿಮಾನಿಗಳನ್ನು ಕಾಡುತ್ತಿದೆ. ಪುನೀತ್ ಮೃತಪಟ್ಟು ಆರು ದಿನವಾದರೂ ಅವರ ಸಾವಿನಿಂದ ಅವರ ಅಸಂಖ್ಯ ಅಭಿಮಾನಿಗಳು ಇನ್ನೂ ಹೊರಬರುತ್ತಿಲ್ಲ.ಇದರ ನಡುವೆಯೇ ಅವರ ಸಾವಿನ ಬಗ್ಗೆ ಸಿಬಿಐ ತನಿಖೆಗೆ ಆಗ್ರಹ ವ್ಯಕ್ತವಾಗಿದೆ.
ಹೀಗೆಂದು ಆಗ್ರಹಿಸಿರುವವರು ಅಖಿಲ ಕರ್ನಾಟಕ ಭುವನೇಶ್ವರಿ ಸೇನಾ ಸಮಿತಿ. ಸರ್ಕಾರಕ್ಕೆ ಒತ್ತಾಯಿಸಿರುವ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಎಮ್.ಮೈತ್ರೀಕರ್, ಸಾವಿನ ತನಿಖೆ ಆಗಬೇಕಿದೆ. ಪುನೀತ್ ಅವರ ಸಾವಿನ ಹಿಂದಿನ ರಹಸ್ಯ ಗೊತ್ತಾಗಬೇಕಿದೆ. ಆದ್ದರಿಂದ ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಷ್ಟಕ್ಕೂ ಏಕೀ ಸಂಶಯ?
ಪುನೀತ್ ಅವರು, ನಿಧನರಾಗುವ ಹಿಂದಿನ ರಾತ್ರಿ (ಅ.28) ಸಂಗೀತ ನಿರ್ದೇಶಕ ಗುರುಕಿರಣ್ ಅವರ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅಲ್ಲಿ ತುಂಬಾ ಸಂತಸದಿಂದ ಪಾಲ್ಗೊಂಡು ಹಾಡು, ನೃತ್ಯ ಮಾಡಿದ್ದರು. ಅಲ್ಲಿಯವರೆಗೂ ಚೆನ್ನಾಗಿಯೇ ಇದ್ದರು. ಇದ್ದಕ್ಕಿದ್ದಂತೆಯೇ ಮಾರನೆಯ ದಿನ ಹೃದಯಾಘಾತ ಆಗಿದ್ದು ಹೇಗೆ ಎನ್ನುವುದು ಸಮಿತಿಯ ಪ್ರಶ್ನೆ.
ಆದ್ದರಿಂದ ಈ ಪಾರ್ಟಿಯಲ್ಲಿ ಕಾಣದ ಕೈಗಳು ಕುತಂತ್ರ ನಡೆಸಿ ಊಟ ಅಥವಾ ಕೂಲ್ ಡ್ರಿಂಕ್ಸ್ ಸೇವನೆಯಲ್ಲಿ ಮೋಸ ನಡೆದಿರಬಹುದು. ವಿಷಪ್ರಾಷನ ಆಗಿರಬಹುದು ಎಂದು ಸಂದೇಹ ವ್ಯಕ್ತಪಡಿಸಿರುವ ಎನ್.ಎಮ್.ಮೈತ್ರೀಕರ್, ಈ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ.
ಪುನೀತ್ ಸಾವಿನಿಂದ ಆಘಾತಗೊಂಡಿದ್ದ ಗುರುಕಿರಣ್, ‘ನಿನ್ನೆ ನನ್ನ ಬರ್ತ್ಡೇಗೆ ವಿಷ್ ಮಾಡೋಕೆ ಬಂದಿದ್ದರು. ನಾವಿಬ್ಬರು ನಿನ್ನೆ ಒಟ್ಟಿಗೆ ಡಿನ್ನರ್ ಮಾಡಿದ್ವಿ. ಅವರು ಪರ್ಫೆಕ್ಟ್ ಆಯಂಡ್ ಫೈನ್ ಆಗಿದ್ದರು. ಕೇಕ್ ಕಟ್ ಮಾಡಿದ ಬಳಿಕ ಅವರು ಬೇಗನೇ ಮನೆಗೆ ಹೋದರು. ನಿನ್ನೆ ಅವರಿಗೆ ಎದೆನೋವಿನ ಲಕ್ಷಣಗಳು ಕೂಡ ಇರಲಿಲ್ಲ. ಸುದ್ದಿ ನಂಬೋದಕ್ಕೆ ಆಗುತ್ತಿಲ್ಲ’ ಎಂದು ಹೇಳಿದ್ದರು.