ದುರ್ಗಿ, ಚಾಮುಂಡಿ ರೀತಿಯ ಖಡಕ್ ಪಾತ್ರಗಳಲ್ಲಿ ನಟಿಸಿ ತಮ್ಮದೇ ಆದ ಮಾಸ್ ಅಭಿಮಾನಿಗಳನ್ನು ಹೊಂದಿರುವ ಮಾಲಾಶ್ರೀ ಇದೀಗ ಕುಸ್ತಿ ಕ್ರೀಡೆ ಆಧರಿತ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಕೆಂಡದ ಸೆರಗು’ ಎನ್ನುವ ಕುಸ್ತಿ ಆಧಾರಿತ ಕಾದಂಬರಿ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸಿರುವ ಮಾಲಾಶ್ರೀ ಅವರು ತಾವೇ ಸ್ವತಃ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ.
ತುಂಬ ವರ್ಷಗಳ ನಂತರ ಕೆಂಡದ ಸೆರಗು ಸಿನಿಮಾಗೆ ಮಾಲಾಶ್ರೀ ಅವರು ಧ್ವನಿ ಕೊಟ್ಟಿದ್ದು ಚಿತ್ರತಂಡಕ್ಕೆ ಮತ್ತೊಂದು ಶಕ್ತಿ ಇದ್ದಂತೆ ಎಂದು ನಿರ್ದೇಶಕ ರಾಕಿ ಸೋಮ್ಲಿ ಹೇಳಿದ್ದಾರೆ .
‘ದೇಸಿ ಕುಸ್ತಿ ಕಥೆಯ ಜೊತೆಗೆ ಹೃದಯಕ್ಕೆ ತಟ್ಟುವಂತಹ ಭಾವನಾತ್ಮಕ ಒಳ್ಳೆಯ ಸಂದೇಶ ‘ಕೆಂಡದ ಸೆರಗು’ ಸಿನಿಮಾದಲ್ಲಿದೆ. ಇದರಲ್ಲಿನ ಒಂದೊಂದು ಪಾತ್ರವೂ ಸಹ ತುಂಬ ವಿಶೇಷವಾಗಿವೆ. ಇದರಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬರೂ ಕೂಡ ಸಿನಿಮಾವನ್ನು ಆರಾಧಿಸುತ್ತಾರೆ, ತುಂಬಾನೇ ಶ್ರಮವಹಿಸಿ ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾದ ಸೆಟ್ನಲ್ಲಿ ನಾನು ತುಂಬ ಖುಷಿಯಿಂದ, ಪ್ರೀತಿಯಿಂದ ಕೆಲಸ ಮಾಡಿದ್ದೇನೆ. ಇದು ಗೆಲ್ಲುವ ಸಿನಿಮಾವಾಗಿದೆ. ಈ ತಂಡದ ಜೊತೆಗೆ ನಾನು ಯಾವಾಗಲೂ ಇರುತ್ತೇನೆ’ ಎಂದು ಮಾಲಾಶ್ರೀ ಹೇಳಿದ್ದಾರೆ.
ಈ ಚಿತ್ರದಲ್ಲಿ ಮಾಲಾಶ್ರೀ, ಭೂಮಿ ಶೆಟ್ಟಿ ಜೊತೆಗೆ ಯಶ್ ಶೆಟ್ಟಿ, ವರ್ಧನ್, ಬಾಲರಾಜ್ ವಾಡಿ, ಶೋಭಿತಾ, ಹರೀಶ್ ಅರಸು, ಪ್ರತಿಮಾ, ಮೋಹನ್, ಸಿಂಧನೂರು ಉಮೇಶ್, ಸಿಂಧೂ ಲೋಕನಾಥ್ ಮುಂತಾದವರು ಅಭಿನಯಿಸಿದ್ದಾರೆ